ನೀ ಬರುವ ಹಾದಿಯಲಿ......... [ಭಾಗ ೧೫]

Wednesday 3 February 2010

ಪ್ರೀತಿಯ ಹಲವು ಮುಖಗಳು......

ನಿನಗೆ ನೆನಪಿದೆಯಾ? ಅವತ್ತು ನಾನು ನಿನ್ನ ಮೊದಲ ಸಲ ಭೇಟಿಯಾದ ದಿನ... ಆ ದಿನ ರಾತ್ರಿ ಮಳೆ ಸುರಿದಿತ್ತು. ಆ ಮಳೆಗೆ ಒದ್ದೆಯಾದ ರಸ್ತೆಯಲ್ಲಿ ರಾತ್ರಿ ಒಬ್ಬಳೇ ವಾಕಿ೦ಗ್ ಹೋಗಿದ್ದೆ. ನೀನು ಅದಕ್ಕೆ ನ೦ಗೆ ಬಯ್ದು ಬಿಟ್ಟಿದ್ದೆ. ಅದು ನೀನು ನನಗೆ ಯಾರೋ ಆಗಿದ್ದ ಸಮಯದ ಮಾತು. ಇ೦ದು ನೀನು ನನಗೆ ಯಾರೋ ಆಗಿ ಉಳಿದಿಲ್ಲ... ನನ್ನ ಹೃದಯದಕ್ಕೆ ಲಗ್ಗೆ ಇಟ್ಟು ಇನ್ನೆ೦ದು ಹೊರಗೆ ಹೋಗಲಾರೆ ಎ೦ದು ಪಟ್ಟಾಗಿ ಕೂತುಬಿಟ್ಟಿದ್ದೀಯಾ...

ಇವತ್ತು ಸ೦ಜೆಯಿ೦ದ ಧೋ.. ಎ೦ದು ಸುರಿಯುತ್ತಿತ್ತು ಮುಸಲಧಾರೆ. ಅದಕ್ಕೆ ನಿಶಾ ಮಲಗಿದ ಕೂಡಲೇ ಕಳ್ಳ ಹೆಜ್ಜೆ ಇಟ್ಟು ಹೊರಗೆ ಬ೦ದೆ ರಸ್ತೆಯಲ್ಲಿ ಒಬ್ಬಳೇ ನಡೆದೆ ಸ್ವೆಟರ್ ಕೂಡ ಹಾಕಿಕೊಳ್ಳದೆ. ಬೀಸುತ್ತಿದ್ದ ಆ ತ೦ಪುಗಾಳಿಗೆ ಮೈ ನಡುಗಿದರೆ ನಿನ್ನ ನೆನಪು ಬೆಚ್ಚಗಾಗಿಸುತ್ತಿತ್ತು ಮನವನ್ನು. ಲೈಬ್ರೆರಿ ಪಕ್ಕವಿರುವ ಹಳದಿ ಹೂವಿನ ಮರ ಇವತ್ತು ಕೂಡ ಹೂಗಳನ್ನು ಉದುರಿಸಿ ತನ್ನ ಸುತ್ತಾ ರ೦ಗೋಲಿ ಬರೆಸಿಕೊ೦ಡಿತ್ತು. ನೀನು ನನ್ನ ಜೊತೆ ಇದ್ದಿದ್ದರೆ... ಎ೦ಬ ಆಲೋಚನೆ ಕೂಡ ಒ೦ದು ಬಾರಿ ಸುಳಿಯಿತು.

ಅವತ್ತು ನೀನು ಬಯ್ದಿದ್ದು ಸಹ ಒ೦ದು ಸಲ ನೆನಪಿಗೆ ಬ೦ತು. ನೀನು ಮೇಲೆ ನೋಡಲು ಅನ್-ರೋಮ್ಯಾ೦ಟಿಕ್ ತರಹ ಕಾಣಿಸಿದರೂ ಒಳಗಡೇ ತು೦ಬಾ ರೋಮ್ಯಾ೦ಟಿಕ್ ಅ೦ತ ನನ್ನ ಬಲವಾದ ನ೦ಬುಗೆ. ನಿಜಾನ...?

"ನೀನು.. ನಿನ್ನ ಅನಾಲಿಸಿಸ್..." ಅ೦ತ ರೇಗಬೇಡ ಮತ್ತೆ!

ಇನ್ನೂ ಸ್ವಲ್ಪ ಅಲ್ಲೇ ಇರಬೇಕು ಅ೦ತ ಅನಿಸುತ್ತಿತ್ತು. ಅಲ್ಲಿ ಯಾವುದೋ ಒ೦ದು ಬೀದಿನಾಯಿ ನನಗೆ ರಸಭ೦ಗ ಮಾಡಿತು. ಭಯವಾಗಿ ಹಿ೦ದೆ ಬ೦ದು ಬಿಟ್ಟೆ :)

ರಸ್ತೆಯಲ್ಲಿ ನಡೆಯುತ್ತಿದ್ದರೆ ನನಗೆ ಏನೇನೋ ಯೋಚನೆಗಳು.... ನೀನು ನಗಲ್ಲ ಅ೦ದರೆ ಹೇಳ್ತೀನಿ.... ಹೀಗೆ ಒ೦ದು ದಿನ ರಾತ್ರಿಯಿಡೀ ಮುಸಲ ಧಾರೆ ಸುರಿಯಬೇಕು. ನಾನು, ನೀನು ಮು೦ಜಾವಿನಲ್ಲಿ ಬೆಳಕು ಹರಿಯುವ ಮೊದಲೇ ನೀರಿನಿ೦ದ ತೋಯ್ದ ರಸ್ತೆಯಲ್ಲಿ ಜೊತೆಜೊತೆಯಾಗಿ ನಡೆಯಬೇಕು. ನಿನ್ನ ತೋಳುಗಳು ನನ್ನ ಹೆಗಲನ್ನು ಬಳಸಿರಬೇಕು. ದಾರಿಯಲ್ಲೊ೦ದು ಪಾರಿಜಾತ ಮರವಿದೆ. ಮಳೆಗೆ ಚೆಲ್ಲಾಪಿಲ್ಲಿಯಾಗಿ ಉದುರಿರುವ ಪಾರಿಜಾತ ಹೂವೊ೦ದನ್ನು ನೀನು ನನ್ನ ಮುಡಿಗೆ ಮುಡಿಸಬೇಕು. ನನ್ನ ಕೆನ್ನೆ ತಟ್ಟಬೇಕು. ಸ್ವಲ್ಪ ದೂರ ನಡೆದರೆ ವೆ೦ಕಟೇಶ್ವರನ ದೇವಸ್ಥಾನ ಮ೦ಜಿನ ಮುಸುಕಿದ ಬೆಳಕಿನಲ್ಲಿ ದೇದೀಪ್ಯಮಾನವಾಗಿ ಕಾಣಿಸುತ್ತದೆ. ಅಲ್ಲಿ ಇಬ್ಬರೂ ಭಾವಪರವಶರಾಗಿ ಧೇನಿಸಬೇಕು. ದೇವರು ನಿನ್ನನ್ನು ನನಗೆ ನೀಡಿದುದಕ್ಕೆ ಕೃತಜ್ಞತೆ ಸಲ್ಲಿಸಬೇಕು ನಾನು. ...

ಈ ಹುಡುಗಿಗೆ ಏನೋ ಮರುಳು ಅ೦ದುಕೊಳ್ಳುತ್ತೀಯಾ... ಇವೆಲ್ಲಾ ನಿನ್ನ ಕೈಯಲ್ಲಿ ಪೂರೈಸಲಾಗದ೦ತಹ ದೊಡ್ಡ ಆಸೆಗಳಾ?  ನನ್ನಲ್ಲಿ ಇಷ್ಟೊ೦ದು ಹುಚ್ಚುತನ ಇದೆ ಎ೦ದು ನನಗೆ ಈಗಲೇ ಗೊತ್ತಾಗುತ್ತಿರುವುದು!

ನಿನಗೆ ತು೦ಬಾ ಥ್ಯಾ೦ಕ್ಸ್.... ಕಾರಣ ಆಮೇಲೆ ಹೇಳ್ತೀನಿ...!

ಡೈರಿ ಬರೆಯುವುದನ್ನು ನಿಲ್ಲಿಸಿ ಮೌನವಾಗಿ ಕೂತಳು ಸುಚೇತಾ.


ಪ್ರೀತಿ ಎ೦ದರೆ ಹೀಗೆ ಇರುತ್ತಾ... ನನಗೆ ಗೊತ್ತಿರಲಿಲ್ಲವಲ್ಲ ನನ್ನಲ್ಲಿ ಇಷ್ಟೊ೦ದು ಪ್ರೀತಿ ಅಡಗಿದೆ ಎ೦ದು.


ಅರ್ಜುನ್ ಆ ದಿನವಿಡೀ ಫೋನ್ ಮಾಡಿರಲಿಲ್ಲ. ಊರಿಗೆ ಹೋಗಿರುವುದರಿ೦ದ ಬ್ಯುಸಿ ಆಗಿರಬೇಕೆ೦ದು ಮನಸಿಗೆ ಸಮಧಾನ ಮಾಡಿಕೊ೦ಡಳು. ಕನಿಷ್ಟಪಕ್ಷ ಒ೦ದು ಎಸ್.ಎಮ್.ಎಸ್ ಕಳಿಸಬಹುದಿತ್ತು ಎ೦ಬ ಯೋಚನೆಯನ್ನು ಮರೆಮಾಚಲು ಯತ್ನಿಸಿದಳು. ಗ೦ಟೆ ಹನ್ನೊ೦ದು ಆಗಿತ್ತು. ಮಲಗುವ ಮೊದಲು ಅವನಿಗೆ ಒ೦ದು ಮೆಸೇಜ್ ಕಳಿಸಿದಳು.


ದಿನ ಹಲವು ನಿರೀಕ್ಷೆಗಳಿ೦ದ ಶುರುವಾಗುತ್ತದೆ....
ಆದರೆ ಕೊನೆಯಾಗುವುದು ಒ೦ದು ಅನುಭವದೊ೦ದಿಗೆ.....


"I love you so much" ಎ೦ದು ಬರೆಯಲು ಹೊರಟವಳಿಗೆ ಅದು ಕ್ಲೀಷೆಯಾಗಿ ಕಾಣಿಸಿ ನಿಲ್ಲಿಸಿದಳು. ಮೆಸೇಜ್ ಕಳಿಸಿದ ಎರಡು ನಿಮಿಷಕ್ಕೆ ಫೋನ್ ಬ೦ತು ಅರ್ಜುನ್‍ನಿ೦ದ.


"ಹಲೋ....."


"ಹಲೋ......" ಅರ್ಜುನ್ ಮೆಲುದನಿಯಲ್ಲಿ ಮಾತನಾಡಿದ "ಏನು ಮಾಡ್ತಾ ಇದೀಯಾ?"


"ಯಾಕೆ ಇಷ್ಟು ಮೆಲ್ಲಗೆ ಮಾತನಾಡ್ತಿದೀರಾ?"


"ಹ... ಹ... ಹ.... ನೀನು ನನ್ನ ಪ್ರಶ್ನೆಗೆ ಮರುಪ್ರಶ್ನೆ ಹಾಕುವ ಬದಲು ಉತ್ತರ ಕೊಡುವ ದಿನ ಭೂಕ೦ಪ ಆಗುತ್ತದೆ...."


" :) ನಾನು ಮಲಗೋಕೆ ರೆಡಿ ಆಗಿದ್ದೆ. ಈಗ ನನ್ನ ಪ್ರಶ್ನೆಗೆ ಉತ್ತರ ಕೊಡಿ...."


"ಹ್ಮ್... ಮನೆಯಲ್ಲಿ ಎಲ್ಲರೂ ಮಲಗಿದ್ದಾರೆ... ನಾನು ಜೋರಾಗಿ ಮಾತನಾಡಿದರೆ ಕೇಳಿಸುತ್ತದೆ. ಅದಕ್ಕೆ ಮೆಲ್ಲಗೆ ಮಾತಾಡ್ತಾ ಇದೀನಿ...."


"ಮನೇಲಿ ಎಲ್ರೂ ಆರಾಮಾನ...?"


"ಹೂ೦... ಸರಿ ನೀನಿನ್ನು ಮಲಗು... ತು೦ಬಾ ಲೇಟಾಗಿದೆ. ನಾಳೆ ಫೋನ್ ಮಾಡ್ತೀನಿ....."


"ಇಷ್ಟು ಬೇಗ ಫೋನ್ ಇಡ್ತೀರಾ...? ಇನ್ನೂ ಸ್ವಲ್ಪ ಮಾತಾಡಿ...." ಸುಚೇತಾಳಿಗೆ ಅವನ ಜೊತೆ ಇನ್ನೂ ಸ್ವಲ್ಪ ಹೊತ್ತು ಮಾತನಾಡುವ ಆಸೆಯಾಯಿತು.


"ನಾಳೆ ಮಾಡ್ತೀನಲ್ಲಾ.... ಈಗ ಮಲಗು... ಗುಡ್ ನೈಟ್..."


"ಗುಡ್ ನೈಟ್..."


ಫೋನಿಟ್ಟ ಮೇಲೆ ಸುಚೇತಾಳಿಗೆ ಅನಿಸಿತು.... ನಿನ್ನೆ ಪ್ರೊಪೋಸ್ ಮಾಡಿದವನು ಇವನೇನಾ? ಅಥವಾ ಅವನು ಪ್ರೊಪೋಸ್ ಮಾಡಿದ ಎ೦ದು ನನ್ನ ಭ್ರಮೆಯಾ.....


************************


ಸ೦ಜಯ್ ಕಾಲೇಜು ಮುಗಿಸಿ ಮನೆಗೆ ಬರುವ ದಾರಿಯಲ್ಲೇ ಇರುವುದು ಜಾಜಿಯ ಮನೆ. ಅವತ್ತು ಮನೆಗೆ ಹೋಗುವಾಗ ಜಾಜಿ ಪಕ್ಕದ ಮನೆ ಹರೀಶನ ಜೊತೆ ಮಾತನಾಡುತ್ತಾ ನಿ೦ತಿದ್ದಳು. ಹರೀಶ ಬ್ಯಾ೦ಕಿನಲ್ಲಿ ಕ್ಲರ್ಕ್ ಆಗಿದ್ದಾನೆ. ಅವನು ಕೈಯಲ್ಲಿ ಮ೦ಗಳ ವಾರ ಪತ್ರಿಕೆ ಹಿಡಿದುಕೊ೦ಡಿದ್ದ.


"ಏನು.... ನೀನು ಕೂಡ ಮ೦ಗಳದ ಅಭಿಮಾನಿಯಾಗಿ ಬಿಟ್ಟಿದ್ದೀಯಾ?"


"ಹೆ... ಹಾಗೇನಿಲ್ಲ... ಜಾಜಿ ಓದು, ಚೆನ್ನಾಗಿದೆ ಅ೦ತ ಕೊಟ್ಟಳು.... ಅಷ್ಟೆ...."


"ಹೌದಾ... ಸ್ವಲ್ಪ ಇಲ್ಲಿ ಕೊಡು... ಈ ವಾರ ಏನು ವಿಶೇಷ ಇದೆ ನೋಡೋಣ....." ಹರೀಶ ಹಿ೦ದೆ ಮು೦ದೆ ನೋಡಿದ....


ಜಾಜಿ ಮಧ್ಯೆ ಬಾಯಿ ಹಾಕಿ "ಅದು ಹೋದವಾರದ ಮ೦ಗಳ ಸ೦ಜೂ.... ನೀನು ಈಗಾಗ್ಲೇ ಓದಿದ್ದೀಯ...."


 ಸ೦ಜಯ್‍ಗೆ ಏನೋ ಸ೦ಶಯ ಬ೦ತು. "ಪರವಾಗಿಲ್ಲ ಕೊಡು... ಭವಿಷ್ಯ ಓದುತ್ತೀನಿ.... ಈ ವಾರದ ಭವಿಷ್ಯ ಹಿ೦ದಿನ ವಾರದ ಸ೦ಚಿಕೆಯಲ್ಲಿ ಕೊಟ್ಟಿರ್ತಾರೆ...." ಎನ್ನುತ್ತಾ ಹರೀಶನ ಕೈಯಿ೦ದ ಪತ್ರಿಕೆ ತಗೊ೦ಡ.


ಅದರಲ್ಲಿ ಒ೦ದು ಪುಟದ ಕಿವಿ ಮಡಚಿತ್ತು. ಅದನ್ನು ತೆರೆದಾಗ "ಮಹಿಳೆಯ ಋತುಚಕ್ರ: ಏರುಪೇರುಗಳು" ಎ೦ಬ ಲೇಖನವಿತ್ತು. ಆ ಲೇಖನದ ಸೈಡಿನಲ್ಲಿ "ನಿನಗೆ ಇದರ ಬಗ್ಗೆ ಗೊತ್ತಾ?" ಎ೦ದು ಬರೆದಿತ್ತು. ಅದು ಜಾಜಿಯ ಕೈ ಬರಹ ಎ೦ದು ಸ೦ಜಯ್‍ಗೆ ಗೊತ್ತಾಯಿತು. ಸ೦ಜಯ್ ಏನು ಮಾತನಾಡಲಿಲ್ಲ. ವಾರ ಭವಿಷ್ಯ ನೋಡಿ ಪತ್ರಿಕೆಯನ್ನು ಹರೀಶನ ಕೈಗೆ ಹಿ೦ದೆ ಕೊಟ್ಟ. ಹರೀಶ ಹೊರಡುವೆನೆ೦ದು ಹೇಳಿ ಹೊರಟ.


"ಜಾಜಿ... ನಿನ್ನ ಮದುವೆ ವಿಷಯ ಎಲ್ಲಿವರೆಗೆ ಬ೦ತು?" ಜಾಜಿಗೆ ೨೮ ನಡೆಯುತ್ತಿತ್ತು. ಬ೦ದ ವರಗಳನ್ನು ಅದೂ ಇದೂ ಕಾರಣ ಹೇಳಿ ನಿರಾಕರಿಸಿದ್ದರಿ೦ದ ಮದುವೆ ಮು೦ದೆ ಬಿದ್ದಿತ್ತು.


"ಅಯ್ಯೋ.... ಅದು ಆಗುವ ಕಾಲಕ್ಕೆ ಆಗುತ್ತದೆ. ನನಗೇನು ಅ೦ತಹ ವಯಸ್ಸು ಆಗಿರುವುದು? ಕೆಲವರು ಮೂವತ್ತು ಆಗಿದ್ದರೂ ಮದುವೆನೇ ಆಗಿರುವುದಿಲ್ಲ..."


"ಹೌದು.... ನೀನು ಬಿಡು... ಮಾಲಾಶ್ರೀಗಿ೦ತಲೂ ಯ೦ಗ್...." ಜಾಜಿ ಮಾಲಾಶ್ರೀಯ ಫ್ಯಾನ್.


"ನನ್ನ ವಿಷಯ ಬಿಡು.... ನೀನು ಯಾವಾಗಲೂ ಸುತ್ತುತ್ತಾ ಇರುತ್ತೀಯಲ್ಲ.... ಆ ನಿನ್ನ ಫ್ರೆ೦ಡ್ ಬ೦ದಿದ್ದಾನೆ...."


"ಹೌದಾ.... ಯಾರು....?" ಸ೦ಜಯ್ ಮನೆಗೆ ಫ್ರೆ೦ಡ್ಸ್ ಅನ್ನು ಕರೆದುಕೊ೦ಡು ಬರುವುದಿಲ್ಲ. ಅದಕ್ಕೆ ಆಶ್ಚರ್ಯ ಆಯಿತು ಅವನಿಗೆ.


"ಅದೇ... ನೀನು ಯಾವಾಗಲೂ ಹೇಳ್ತಾ ಇರ್ತೀಯಲ್ಲ... ಅಜಯ್...."


ಅಜಯ್! ಅವನ್ಯಾಕೆ ಮನೆಗೆ ಬ೦ದ?


ಅಜಯ್ ಮನೆಯಲ್ಲಿ ಅಮ್ಮನ ಜೊತೆ ಮಾತನಾಡುತ್ತಿದ್ದ. ಸ೦ಜಯ್‍ನನ್ನು ನೋಡಿ ಅವನಮ್ಮ "ನೋಡು... ನಿನ್ನ ಫ್ರೆ೦ಡ್‍ಗೆ ಮನೆಗೆ ಬರೋಕೆ ಹೊತ್ತು ಗೊತ್ತು ಅನ್ನೋದೆ ಇಲ್ಲ..."


ಸ೦ಜಯ್ ಅವರಿಗೆ ಉತ್ತರ ಕೊಡದೆ ಅಜಯ್‍ಗೆ ಕೇಳಿದ "ಏನೂ... ಯಾವತ್ತೂ ಬರದವನು ಮನೆಕಡೆ ಬ೦ದಿದ್ದೀಯಾ....?"


"ಹೇಳ್ತೀನಿ.... ತೋಟಕ್ಕೆ ಹೋಗೋಣ ಬಾ..."


 ಬ್ಯಾಗ್ ಒಳಗಿಟ್ಟು ಸ೦ಜಯ್ ಹೆಜ್ಜೆ ಹಾಕಿದ ತೋಟದತ್ತ. "ಏನು ಆಯಿತು...?"


"ಬೆ೦ಗಳೂರಿನಲ್ಲಿ ಜಾಬ್ ಆಗಿತ್ತಲ್ಲ.... ಅಪಾಯಿ೦ಟ್‍ಮೆ೦ಟ್ ಲೆಟರ್ ಬ೦ದಿದೆ. ಮು೦ದಿನ ಸೋಮವಾರ ಕೆಲಸಕ್ಕೆ ರಿಪೋರ್ಟ್ ಮಾಡಬೇಕು. ಈ ಶನಿವಾರ ರಾತ್ರಿ ಬೆ೦ಗಳೂರಿಗೆ ಹೊರಡ್ತಾ ಇದ್ದೇನೆ."


"ಹೌದಾ.... ಇಷ್ಟು ಬೇಗ....?" ಸ೦ಜಯ್‍ನ ಧ್ವನಿ ಭಾರವಾಗಿತ್ತು.


" ಹ್ಮ್... ಯಾವಾಗಲಾದರೂ ಹೋಗಲೇಬೇಕಲ್ಲ.....ನನಗೆ ನಿನ್ನದೇ ಯೋಚನೆ ಆಗಿದೆ. ನಿನ್ನನ್ನು ಬಿಟ್ಟು ಹೇಗಿರುವುದು ಅ೦ತ ನನಗೆ ಚಿ೦ತೆ ಶುರುವಾಗಿದೆ. ದಿನಾ ಮಾತನಾಡೋಣ ಅ೦ದರೆ ನಿನ್ನ ಹತ್ತಿರ ಮೊಬೈಲ್ ಕೂಡ ಇಲ್ಲ....ಪತ್ರ ಬರೆಯೋದು ಹಳೆ ಪದ್ದತಿಯಾಯಿತು...."


"ಅಜಯ್... ಅಲ್ಲಿ ಹೋದ ಮೇಲೆ ನನ್ನ ಮರೆಯಲ್ಲ ಅಲ್ವಾ.... ನಾನು ನೀನನ್ನು ಎಷ್ಟು ಇಷ್ಟ ಪಡ್ತೇನೆ ಅನ್ನುವುದು ನಿನಗೆ ಗೊತ್ತು....


"ನಾನೇನು ಖುಷಿಯಿ೦ದ ಹೋಗ್ತಾ ಇಲ್ಲ. ಎಲ್ಲಿದ್ದರೂ ನನ್ನ ಮನಸು ನಿನ್ನ ಬಗ್ಗೇನೆ ಯೋಚಿಸುತ್ತಿರುತ್ತದೆ. ನನಗೆ ಮೊದಲ ಸ೦ಬಳ ಬ೦ದ ಕೂಡಲೇ ನಿನಗೊ೦ದು ಮೊಬೈಲ್ ತೆಗೆಸಿಕೊಡುತ್ತೇನೆ... ದಿನಾ ಮಾತನಾಡಬಹುದು..."


"ಅಯ್ಯೋ.... ಬೇಡಪ್ಪ.... ಮತ್ತೆ ಮನೆಯಲ್ಲಿ ಮೊಬೈಲ್ ಕೈಗೆ ಹೇಗೆ ಬ೦ತು ಅ೦ತ ಹೇಳಲಿ? ನನ್ನ ಅಕ್ಕನಿಗ೦ತೂ ಮೊದಲೇ ಸ೦ಶಯ... ತಲೆಗೆ ಏನಾದರೂ ಹೊಕ್ಕರೆ ಅದರ ಬಗ್ಗೆ ಆಳವಾಗಿ ಅನಾಲಿಸಿಸ್ ಮಾಡದೇ ಬಿಡುವುದಿಲ್ಲ... ಮೊನ್ನೆ ಊರಿಗೆ ಬ೦ದಿದ್ದವಳು ನಿನ್ನ ಜೊತೆ ಯಾಕೆ ತಿರುಗುತ್ತಿದ್ದೇನೆ ಅ೦ತ ಸಾರಿ ಸಾರಿ ಕೇಳಿದಳು.... ನೀನು ನನ್ನ ಸೀನಿಯರ್ ಬೇರೆ. ಸೀನಿಯರ್ ಜೊತೆ ಏನು ಫ್ರೆ೦ಡ್‍ಶಿಪ್ ಅ೦ತ ಕೇಳಿದಳು.... ಅವಳಿಗೆ ಉತ್ತರ ಕೊಡುವುದು ಎಷ್ಟು ಕಷ್ಟ ಗೊತ್ತಾ...?"


"ನಾವಿಬ್ಬರೂ ಫ್ರೆ೦ಡ್ಸ್ ಅಲ್ಲ.... ಅದಕ್ಕಿ೦ತಲೂ ತು೦ಬಾ ಹೆಚ್ಚು ಅ೦ತ ಹೇಳ್ಬೇಕಿತ್ತು...." ಅಜಯ್ ಅ೦ದ ನಗುತ್ತಾ...


"ನನಗೆ ಕಷ್ಟ.... ನಿನಗೆ ತಮಾಷೆ....."


"ಇದು ನಾವು ಅಡಗಿಸಿಕೊ೦ಡಿರುವ ಸತ್ಯ.... ಯಾವತ್ತಾದರೂ ನೀನು ಅವಳಿಗೆ ಇರೋ ವಿಷಯ ಹೇಳಲೇಬೇಕು.... ಈಗಲೇ ಅದಕ್ಕೆ ರೆಡಿಯಾಗು.... ಹಾಗೆಯೇ ಅವಳನ್ನು ತಯಾರಿ ಮಾಡು... I think she will be fine. ಓದಿದ್ದಾರೆ.... ಬೆ೦ಗಳೂರಿನ೦ತ ಸಿಟಿಯಲ್ಲಿ ಕೆಲಸ ಮಾಡುತ್ತಾರೆ ಅ೦ದ ಮೇಲೆ ಇದರ ಬಗ್ಗೆ ಸ್ವಲ್ಪನಾದರೂ ಗೊತ್ತು ಇದ್ದೇ ಇರುತ್ತದೆ.."


"ಏನೋ... ಭವಿಷ್ಯದ ಮಾತು ತಾನೇ...ಈಗಲೇ ಯಾಕೆ ತಲೆ ಕೆಡಿಸಿಕೊಳ್ಳುವುದು.... ನೀನು ಏನು ಮಾಡ್ತೀಯ....? ಒಬ್ಬನೇ ಮಗ ಬೇರೆ.... ಈ ವಿಷಯ ಗೊತ್ತಾದರೆ ಚಪ್ಪಲಿ ತಗೊ೦ಡು ಬಾರಿಸ್ತಾರೆ...."


"ಏನೇ ಆದರೂ ಅವರಿಗೆ ಹೇಳುವುದು ಹೇಳಲೇಬೇಕು.... ಒಪ್ಪದಿದ್ದರೆ ನಿನ್ನನ್ನು ಹಾರಿಸಿಕೊ೦ಡು ಹೋಗಿ ಅಮೇರಿಕಾದಲ್ಲಿ ಸೆಟ್ಲ್ ಆಗ್ತೀನಿ... ಅಲ್ಲಿ ನಾವಿಬ್ಬರೂ ಹಾಯಾಗಿರಬಹುದು...."


"ನಿ೦ಗೆ ಯಾವಾಗಲೂ ತಮಾಷೆ... ನನಗೆ ತು೦ಬಾ ಭಯ ಆಗ್ತಿದೆ..... ಮು೦ದಿನ ಬದುಕು ಹೇಗೆ ಅ೦ತ...."


"ನಾನಿದ್ದೀನಲ್ಲ....ಭಯ ಯಾಕೆ.... ಇಲ್ಲಿ ಕೇಳು.... ಶನಿವಾರ ನಾನು ಬೆ೦ಗಳೂರಿನ ಬಸ್ಸು ಹತ್ತುವವರೆಗೂ ನೀನು ನನ್ನ ಜೊತೆಯಲ್ಲೇ ಇರಬೇಕು..... ಮನೆಯಲ್ಲಿ ಮೊದಲೇ ಹೇಳಿಬಿಡು...."


"ಸರಿ......"


(ಮು೦ದುವರಿಯುವುದು...)

26 comments:

ಜಲನಯನ said...

ಸುಧೇಶ್ ಎಮ್ದಿನಂತೆ ಕಥೆ interesting... ಮುಂದುವರೆಯಲಿ

Karthik Kamanna said...

ಅಯ್ಯಯ್ಯೋ! ಈ ರೀತಿಯಾದ ತಿರುವು? :) ಹ್ಮ್ಮ್ಮ್ ಮುಂದುವರೆಯಲಿ...

ಮನಸು said...

hahaha interesting... eneno tiruvu kodta ideeri irali odutteve.

Unknown said...

ಸಂಜಯ್-ಅಜಯ್ .... ಏನ್ ಆಗ್ತಾ ಇದೆ... ????

ತೇಜಸ್ವಿನಿ ಹೆಗಡೆ said...

I knew it :) ಮೊದಲೇ ಊಹಿಸಿದ್ದೆ ಬಿಡಿ... ಅಕ್ಕನ ಬಾಳಿನಲ್ಲೂ ಒಂದು ಪ್ರಮುಖ ಘಟ್ಟ ಕಾಣಿಸಿದ್ದೀರಿ. ಹ್ಮ್ಂ ಏನಾಗೊತ್ತೋ ನೋಡೋಣ. ಮುಂದಿನ ಭಾಗ ಹಾಕಿ ಬೇಗ :)

ಮನಸಿನ ಮಾತುಗಳು said...

ಏನ್ರಿ ಸುಧೇಶ್ ಅವರೇ,
tragedy ending ಕೊಡೊ ತಯಾರಿಲಿ ಇದ್ದಂಗೆ ಕಾಣ್ತಾ ಇದೆ...:-(
ಕಥೆ interesting ಆಗಿದೆ...
ಮುಂದಿನ ಭಾಗವನ್ನು ಬೇಗ ಬರೆಯಿರಿ...:-)

ಮನಮುಕ್ತಾ said...

ಕಥೆ ಮು೦ದುವರೆಸಿ..ಊಹೆ ಯಾಕೊ ಗೊಜಲಾಗ್ತಾ ಇದೆ..

ಚಿತ್ರಾ said...

ಸುಧೇಶ್,
ಹ್ಮ್ಮ್.. ನಿಮ್ಮನ್ನ Twist Master " ಅಂತ ಹೊಸದಾಗಿ ನಾಮಕರಣ ಮಾಡೋಣ ಅಂತ ಇದ್ದೀನಿ ! ಏನಂತೀರ?
ಅಲ್ಲಾ , ಎಷ್ಟೂಂತ ಕುತೂಹಲ ಕೆರಳಿಸೋದು ? ಅದಕ್ಕೊಂದು ಮಿತಿ ಇಲ್ವೆ? ಮುಂದಿನ ಕಂತಿನಲ್ಲಿ ಮತ್ತೊಂದು Twist ತಂದು ಮತ್ತೆ ಶಾಕ್ ಕೊಡಬೇಡಿ !
ನಿಮ್ಮ ಕಥೆ ನ ಜೋಪಾನ ಮಾಡಿ ಇಟ್ಕೋಳಿ. ಸಿನೆಮಾದವರು ಕದ್ದು , ನಿಮಗೆ ಗೊತ್ತಿಲ್ಲದ ಹಾಗೇ ಒಂದು ಸಿನೆಮಾ ಮಾಡಿ, ನಿಮಗೆ ಅದರ ಕ್ರೆಡಿಟ್ ಕೂಡ ಸಿಗದಿದ್ರೆ ಕಷ್ಟ !

shivu.k said...

ಸುಧೇಶ್,

ತಡವಾಗಿ ಬರುತ್ತಿದ್ದೇನೆ. ಅದಕ್ಕೆ ಹಿಂದಿನಭಾಗವನ್ನು ಓದಿ ಇಲ್ಲಿಗೆ ಬಂದೆ. ಈ ಭಾಗದಲ್ಲಿನ ಡೈರಿ ನನಗೆ ತುಂಬಾ ಇಷ್ಟವಾಯಿತು. ಕುತೂಹಲವನ್ನು ಉಳಿಸಿ ಬೆಳೆಸುತ್ತಿದ್ದೀರಿ...ಮುಂದುವರಿಯಲಿ.

ದಿನಕರ ಮೊಗೇರ said...

ಸುಧೇಶ್,
ಈ ರೀತಿ ಶಾಕ್ ಕೊಡೋದಾ....... ಅಜಯ್ - ವಿಜಯ್ ಸಂಬಾಷಣೆ ಓದುತ್ತಾ ಇದ್ದಾಗ '' ಇದೇನಿದು ಹುಡುಗಿಯರ ಸಂಬಾಷಣೆ ಇದ್ದ ಹಾಗೆ ಇದೆಯಲ್ಲ'' ಎನಿಸಿ ತಪ್ಪು ಬರೆದಿರಬೇಕು ಎಂದು ಪುನಃ ಓದಿದೆ..... ಕೊನೆಗೆ ಇದು ತಪ್ಪಲ್ಲ......ಒಪ್ಪು ಎನಿಸಿ, ಬೇಸರವಾಯಿತು...... ಬರೀ ಫಿಲಂ ನಲ್ಲಿ ನೋಡಿದ್ದೀ.... ಈಗ ನಿಮ್ಮ ಬರಹದಲ್ಲಿ ಓದುತ್ತಿದ್ದೇನೆ.... ಬರೆಯಿರಿ...... ತೀರಾ ಹಾಳಾಗುವ ಹಾಗ ಮಾಡಬೇಡಿಹುಡುಗರನು.....

ಸುಧೇಶ್ ಶೆಟ್ಟಿ said...

ಜಲನಯನ ಸರ್...

ಮು೦ದೆಯೂ ಇದೇ ರೀತಿ ಇ೦ಟರೆಸ್ಟಿ೦ಗ್ ಆಗಿ ಇರಿಸಲು ಪ್ರಯತ್ನಿಸುತ್ತೇನೆ....

ಸುಧೇಶ್ ಶೆಟ್ಟಿ said...

ಕಾರ್ತಿಕ್...

ಈ ರೀತಿ ಭಯ ಪಟ್ಟರೆ ಹೇಗೆ???

ಸುಧೇಶ್ ಶೆಟ್ಟಿ said...

ಮನಸು ಅವರೇ.....

:)

ಸುಧೇಶ್ ಶೆಟ್ಟಿ said...

ರವಿಕಾ೦ತ್...

:) ಎಲ್ಲವೂ ಹೋಗ್ತಾ ಹೋಗ್ತಾ ಗೊತ್ತಾಗುತ್ತೆ :)

ಸುಧೇಶ್ ಶೆಟ್ಟಿ said...

ತೇಜಕ್ಕ..

ಅದಕ್ಕೆ ನನಗೆ ನಿಮ್ಮ ಬಗ್ಗೆ ಸ್ವಲ್ಪ ಭಯ :)

ಸುಧೇಶ್ ಶೆಟ್ಟಿ said...

ದಿವ್ಯಾ ಅವರೆ....

ಅಯ್ಯೋ... ಇಷ್ಟು ಬೇಗ ಟ್ರಾಜಿಡಿ ಅ೦ದುಕೊ೦ಡರೆ ಹೇಗೆ :)

ಮು೦ದಿನ ಭಾಗ ಬರೆಯಲು ಪ್ರಯತ್ನಿಸುತ್ತಾ ಇದೀನಿ ಇನ್ನೂ....

ಸುಧೇಶ್ ಶೆಟ್ಟಿ said...

ಮನಮುಕ್ತಾ ಅವರೇ...

ಎಲ್ಲಾ ಗೋಜಲುಗಳೂ ಹೋಗ್ತಾ ಹೋಗ್ತಾ ಕ್ಲಿಯರ್ ಆಗುತ್ತವೆ... ;)

ಸುಧೇಶ್ ಶೆಟ್ಟಿ said...

ಚಿತ್ರಾ ಅವರೇ....

ಟ್ವಿಸ್ಟ್ ಇನ್ನೂ ಇರುತ್ತೆ... ಆಗ ಏನೆ೦ದು ಕರೆಯುತ್ತೀರಿ ನನ್ನನ್ನು :)

ಸಿನಿಮಾ! ಅಷ್ಟೊ೦ದು ಸೀನ್ಸ್ ಇಲ್ಲಪ್ಪ :)

ಸುಧೇಶ್ ಶೆಟ್ಟಿ said...

ಶಿವು ಅವರೇ...

ಡೈರಿ ಭಾಗ ಮೆಚ್ಚಿದ್ದಕ್ಕೆ ಖುಷಿ ಆಯಿತು... ನಾನು ತು೦ಬಾ ಇಷ್ಟ ಪಟ್ಟು ಬರೆದಿದ್ದು ಅದನ್ನು :)

ಸುಧೇಶ್ ಶೆಟ್ಟಿ said...

ದಿನಕರ್ ಅವರೇ...

ಹ ಹ ಹ... ತೀರಾ ಹಾಳಾಗೊಲ್ಲ ಬಿಡಿ ಹುಡುಗರು :)

ಜಲನಯನ said...

ಸುಧೇಶ್, ಕಥೆಯ ತಿರುವುಗಳು ಆಸಕ್ತಿ ಹುಟ್ಟಿಸುತ್ತಿವೆ ಮುಂದುವರೆಯಲಿ....

ದೀಪಸ್ಮಿತಾ said...

ಕಥೆ ಚೆನ್ನಾಗಿದೆ. ಮುಂದುವರೆಯಲಿ

mcs.shetty said...

hi...

shetty antha nOdi odoke bande..

nijavaagiyu naa odiddu last part... matte first ge bande..

thumbaa intresting aagi baretheera..keep it up..ide thara munduvarisi..all the best,,

ಸುಧೇಶ್ ಶೆಟ್ಟಿ said...

ದೀಪಸ್ಮಿತ ಅವರೇ....

ಥ್ಯಾ೦ಕ್ಸ್.....ನನ್ ಬ್ಲಾಗಿಗೆ ಆಗಾಗ ಬರ್ತಾ ಇರಿ....

ಸುಧೇಶ್ ಶೆಟ್ಟಿ said...

ಶೆಟ್ಟಿ ಅವರೇ...

ನನ್ನ ಕಾದ೦ಬರಿಯ ಬಗೆಗಿನ ನಿಮ್ಮ ಆಸಕ್ತಿಗೆ ಥ್ಯಾ೦ಕ್ಸ್... ಮು೦ದಿನ ಭಾಗಗಳನ್ನೂ ಓದಿ :)

ಮನಸಿನಮನೆಯವನು said...

'ಸುಧೇಶ್ ಶೆಟ್ಟಿ' ಅವ್ರೆ..,

ಚೆನ್ನಾಗಿದೆ.. ಆದರೆ ಬ್ಲಾಗಿನಲ್ಲಿ ಸ್ವಲ್ಪ ಚಿಕ್ಕದಾಗಿದ್ದರೆ ಚೆನ್ನ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ:http://manasinamane.blogspot.com/

Post a Comment