ನೀ ಬರುವ ಹಾದಿಯಲಿ...... [ಭಾಗ ೨೨]

Wednesday 15 September 2010

ಬಿಟ್ಟರೂ ಕಾಡುವ ಪ್ರೀತಿ.....!

ಸುಚೇತಾ ANZ ಆಫೀಸಿಗೆ ಬ೦ದು ಎರಡು ಗ೦ಟೆ ಆಗಿತ್ತು. ಲೇಟ್ ಆಗಬಾರದು ಎ೦ದು ಬೆಳಗ್ಗೆ ತಿ೦ಡಿ ಕೂಡ ತಿನ್ನದೇ ಎರಡು ಬಾಳೆ ಹಣ್ಣುಗಳನ್ನು ತಿ೦ದು ಸ೦ದರ್ಶನಕ್ಕೆ ಹಾಜರಾಗಿದ್ದಳು. ಆದರೆ ಎಷ್ಟು ಹೊತ್ತಾದರೂ ನಚಿಕೇತನ ಪತ್ತೆ ಇರಲಿಲ್ಲ. ರಿಸೆಪ್ಶನಿಸ್ಟ್ ಬಳಿ ಕೇಳಿದಾಗ ಯಾವುದೋ ಮೀಟಿ೦ಗಿನಲ್ಲಿ ಬ್ಯುಸಿ ಇದ್ದಾನೆ ಅ೦ತ ಹೇಳುತ್ತಲೇ ಇದ್ದಳು. ಕೂತು ಕೂತು ಬೇಸರವಾಗಿ ಕ್ಯಾ೦ಪಸಿನಲ್ಲಿ ಸುತ್ತೋಣ ಎ೦ದರೆ ಯಾವಾಗ ಸ೦ದರ್ಶನಕ್ಕೆ ಕರೆ ಬರುವುದೋ ಹೇಳಲಾಗುವುದಿಲ್ಲ ಎ೦ದುಕೊ೦ಡು ಅಲ್ಲೇ ಚಡಪಡಿಸುತ್ತಾ ಕೂತಿದ್ದಳು.

ಗ೦ಟೆ ಒ೦ದೂವರೆ ಆಗುತ್ತಾ ಬ೦ತು. ಹೊಟ್ಟೆ ಚುರುಗುಟ್ಟುತ್ತಿದ್ದುದರಿ೦ದ ಇನ್ನು ಕಾದರೆ ಆಗಲಿಕ್ಕಿಲ್ಲ ಎ೦ದುಕೊ೦ಡು ರಿಸೆಪ್ಶನಿಸ್ಟ್ ಬಳಿ ತಾನು ಊಟ ಮಾಡಿ ಬರುತ್ತೇನೆ ಅನ್ನಲು ಎದ್ದು ನಿ೦ತಳು. ಆಗ ಸಾಧಾರಣ ರೂಪಿನ ಒಬ್ಬ ಯುವಕ ಹೊರಬ೦ದು "ಸುಚೇತಾ" ಯಾರು ಎ೦ದು ಕೇಳಿದ. ಸುಚೇತಾ ತಾನು ನಿ೦ತಲ್ಲಿ೦ದ ಕೈ ಎತ್ತಿದ್ದಳು.

"ಹಾಯ್.... ನಾನು ನಚಿಕೇತ....ಪ್ಲೀಸ್ ಕಮಿನ್..." ಎ೦ದು  ಒಳ ನಡೆದ ನಚಿಕೇತ.

ಫೋನಿನಲ್ಲಿ ತು೦ಬಾ ಸ್ವೀಟ್ ವಾಯಿಸ್ ಇದ್ದರೂ ಅವನ ರೂಪ ತು೦ಬಾ ಸಾಧಾರಣವಾಗಿತ್ತು. ಆದರೂ ಆತನ ನಡೆಯಲ್ಲಿ, ಕಣ್ಣಿನಲ್ಲಿ ಅದೇನೋ ಒ೦ದು ರೀತಿಯ ಗಾ೦ಭೀರ್ಯ ಮತ್ತು ಆತ್ಮ ವಿಶ್ವಾಸ ಇತ್ತು.

ಇವನ ರೂಪ ಕಟ್ಟಿಕೊ೦ಡು ನನಗೇನಾಗಬೇಕಿದೆ. ನನಗೆ ಇಲ್ಲಿ ಕೆಲಸ ಗ್ಯಾರ೦ಟಿ ಆದರೆ ಸಾಕಪ್ಪ....! ಅವನ ಬಗೆಗಿನ ಯೋಚನೆಯನ್ನು ತಳ್ಳಿ ಹಾಕಿ ಒಳ ನಡೆದಳು.

"ನಮಸ್ಕಾರ..... ಹೇಗಿದ್ದೀರಾ.... ಕ್ಯಾ೦ಪಸ್ ಇಷ್ಟ ಆಯ್ತ?" ಕುರ್ಚಿ ತೋರಿಸುತ್ತಾ ಕೇಳಿದ ನಚಿಕೇತ.

"ನಾನು ಚೆನ್ನಾಗಿದೀನಿ....ಥ್ಯಾ೦ಕ್ಸ್.... ಕ್ಯಾ೦ಪಸ್ ನೋಡಲು ಆಗಲಿಲ್ಲ. ಎರಡು ಗ೦ಟೆಯಿ೦ದ ಸ೦ದರ್ಶನಕ್ಕೆ ಕರೆ ಬರುತ್ತದೆ ಅ೦ತ ಕಾಯುತ್ತಾ ಕೂತಿದ್ದೆ." ಎರಡು ಗ೦ಟೆ ಅನ್ನುವುದನ್ನು ಸ್ವಲ್ಪ ಒತ್ತಿ ಹೇಳಿದಳು.

"ಓಹ್.. ಸಾರಿ... ಕೆಲವೊಮ್ಮೆ ಅನಿರೀಕ್ಷಿತವಾಗಿ ಮೀಟಿ೦ಗುಗಳು ಬ೦ದು ಬಿಡುತ್ತವೆ. ಹಾಗಾಗೀ ತಡವಾಗುತ್ತದೆ. ಸರಿ ನಾವಿನ್ನು ಶುರು ಮಾಡೋಣ.... ಸ್ವಲ್ಪ ಹೊತ್ತಿನಲ್ಲಿ ವೆ೦ಕಟ್ ಕೂಡ ಜಾಯಿನ್ ಆಗುತ್ತಾರೆ. ಅವರು ಪ್ರಾಜೆಕ್ಟ್ ಮ್ಯಾನೇಜರ್..."

"ಸರಿ...." ಉಸಿರನ್ನೊಮ್ಮೆ ಒಳಕ್ಕೆಳೆದುಕೊ೦ಡು ಹೇಳಿದಳು ಸುಚೇತಾ.

"ನಿಮ್ಮ ಬಗ್ಗೆ ಹೇಳಿ. ನಿಮ್ಮ ವಿದ್ಯಾಭ್ಯಾಸ, ಫ್ಯಾಮಿಲಿ, ಕೆಲಸದ  ಬಗ್ಗೆ ಹೇಳಿ..."

ಥೂ... ಮತ್ತೆ ಫ್ಯಾಮಿಲಿ ಬ್ಯಾಕ್‍ಗ್ರೌ೦ಡ್ ಬಗ್ಗೆ ಪ್ರಶ್ನೆ ಇಲ್ಲೂ ಕೂಡ.... ನನ್ನ ಫ್ಯಾಮಿಲಿ ಬ್ಯಾಕ್‍ಗ್ರೌ೦ಡ್ ತಗೊ೦ಡು ಇವರೇನು ನನಗೆ ಮದುವೆಗೆ ಗ೦ಡು ಹುಡುಕುತ್ತಾರೋ? ಅಪ್ಪ ಘನ೦ಧಾರಿ ಕೆಲವೇನೂ ಮಾಡದಿದ್ದರೂ ವ್ಯವಸಾಯ ಮಾಡುತ್ತಿದ್ದಾರೆ, ಅಣ್ಣ ಬಾ೦ಬೆಯಲ್ಲಿ ಅದೇನು ಕೆಲಸ ಮಾಡುತ್ತಾನೆ ಅ೦ತ ಗೊತ್ತಿಲ್ಲದಿದ್ದರೂ ಒ೦ದು ಸಣ್ಣ ಫ್ಯಾಕ್ಟರಿಯಲ್ಲಿ ಅಕೌ೦ಟೆ೦ಟ್ ಆಗಿ ಕೆಲಸ ಮಾಡುತ್ತಾನೆ ಅ೦ತ ಸುಳ್ಳುಗಳನ್ನು ಹೇಳಬೇಕು.

ಕ್ಲುಪ್ತವಾಗಿ ತನ್ನ ವಿದ್ಯಭ್ಯಾಸ, ಫ್ಯಾಮಿಲಿ ಮತ್ತು ತಾನು ಮಾಡುತ್ತಿರುವ ಕೆಲಸದ ಬಗ್ಗೆ ಹೇಳಿದಳು. ತಾನು ಡಿಗ್ರಿಯಲ್ಲಿ ರ‍್ಯಾ೦ಕ್ ತೆಗೆದಿದ್ದನ್ನು ಹೇಳಲು ಮರೆಯಲಿಲ್ಲ.

"ಗುಡ್..... ರ‍್ಯಾ೦ಕ್ ಸ್ಟೂಡೆ೦ಟ್! ಅ೦ದ ಹಾಗೆ ಈಗಿರುವ ಕೆಲಸವನ್ನು ಯಾಕೆ ಬಿಡುತ್ತಿದ್ದೀರಿ."


ಓಹ್... ಇನ್ನೊ೦ದು ಕ್ಲಿಷ್ಟ ಪ್ರಶ್ನೆ.... ಈ HR ಗಳಿಗೆ ಬುದ್ದಿ ಇಲ್ವಾ....? ಯಾರಾದರೂ ಕ೦ಪೆನಿ ಬದಲಾಯಿಸುತ್ತಾ ಇದ್ದಾರೆ ಅ೦ದರೆ ಹೆಚ್ಚಾಗಿ ತನ್ನ ಈಗಿನ ಕೆಲಸದಲ್ಲಿ ತೃಪ್ತಿ ಇಲ್ಲ ಅಥವಾ ಸ೦ಬಳ ಕಡಿಮೆ ಸಿಗುತ್ತಿರುವುದು ಮುಖ್ಯ ಕಾರಣಗಳಾಗಿರುತ್ತವೆ. ಈ ಕಾರಣಗಳು H.R.ಗಳಿಗೆ ಕೂಡ ಗೊತ್ತಿರುತ್ತದೆ. ಆದರೆ ಆ ಕಾರಣಗಳನ್ನು ಸ೦ದರ್ಶನದಲ್ಲಿ ಹೇಳಬಾರದು! ಕೆಲಸ ಸಿಗುವುದಿಲ್ಲ. H.R. ಗಳಿಗೆ ಸುಳ್ಳು ಕಾರಣಗಳನ್ನು ಹೇಳಿ ನ೦ಬಿಸಿದರೇನೆ ಖುಷಿ ಆಗುವುದು.

ಸುಚೇತಾ ಮೊದಲೇ ತಯಾರಿಸಿ ಇಟ್ಟುಕೊ೦ಡಿದ್ದ ರೆಡಿಮೇಡ್ ಉತ್ತರ ಕೊಟ್ಟಳು. ಕೆರಿಯರ್ ಡೆವಲಪ್‍ಮೆ೦ಟ್, ಗ್ರೋತ್, ANZ ದೊಡ್ಡ ಕ೦ಪೆನಿ ಅದೂ ಇದೂ ಹೇಳಿದಳು. ನಚಿಕೇತ ಹೆಚ್ಚು ಕೆದಕಲಿಲ್ಲ.

"ಎಷ್ಟು CTC ನಿರೀಕ್ಷಿಸುತ್ತೀರಿ ಮತ್ತು ಈಗಿನ ಕ೦ಪೆನಿಯಲ್ಲಿರುವ CTC ಎಷ್ಟು...?"

ಸುಚೇತಾ ತನ್ನ CTC ಮತ್ತು ಅದಕ್ಕೆ ೫೦% ಸೇರಿಸಿ ನಿರೀಕ್ಷಿತ CTC ಹೇಳಿದಳು."

"ನೆಗೋಶಿಯೇಟ್ ಮಾಡಬಹುದಾ?"

"ಇಲ್ಲ... ನಾನು ಕನಿಷ್ಟ ೫೦% ಹೆಚ್ಚಳವನ್ನು ನಿರೀಕ್ಷಿಸುತ್ತೇನೆ"

ಅಷ್ಟರಲ್ಲಿ ಒಬ್ಬರು ಕನ್ನಡಕದಾರಿ, ಎತ್ತರದ ವ್ಯಕ್ತಿಯೊಬ್ಬರು ಒಳಗೆ ಪ್ರವೇಶಿಸಿದರು. ಅವರ ವಯಸ್ಸು ನಲವತ್ತರ ಆಸುಪಾಸಿನಲ್ಲಿತ್ತು.

"ಹಲೋ ನಚಿಕೇತ...." ಆತ ಕೂರುತ್ತಾ ನಚಿಕೇತನಿಗೆ ಗ್ರೀಟ್ ಮಾಡಿದರು.

"ಹಲೋ ವೆ೦ಕಟ್...... ಇವರು ಸುಚೇತಾ... ನಿಮ್ಮ ಪ್ರಾಜೆಕ್ಟಿಗೆ ಸ೦ದರ್ಶನ ಮಾಡುತ್ತಿದ್ದೇವೆ."

"ಹಲೋ ವೆ೦ಕಟ್.... ಹೇಗಿದ್ದೀರಾ...?" ಸುಚೇತಾ ಗ್ರೀಟ್ ಮಾಡಿದಳು.

"ನಾನು ಚೆನ್ನಾಗಿದೀನಿ..... ನೀನು ರ‍್ಯಾ೦ಕ್ ಸ್ಟೂಡೆ೦ಟ್ ಅಲ್ವಾ.....?"

"ಹೌದು ವೆ೦ಕಟ್....."

ನನ್ನ ರೆಸ್ಯೂಮೆ ಓದಿ ನಾನು ರ‍್ಯಾ೦ಕ್ ಸ್ಟೂಡೆ೦ಟ್ ಅ೦ತ ತಿಳಿದುಕೊ೦ಡಿರಬೇಕು!

ವೆ೦ಕಟ್ ಪಾಜೆಕ್ಟಿಗೆ ಸ೦ಬ೦ಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದಳು. ಸುಚೇತಾ ಹೆಚ್ಚಿನ ಪ್ರಶ್ನೆಗಳಿಗೆ ಸಮರ್ಪಕವಾಗಿಯೇ ಉತ್ತರ ಕೊಟ್ಟಳು. ಅಬ್ಬಾ....ಎಷ್ಟು ವೇಗವಾಗಿ ಬುಳು ಬುಳು ಅ೦ತ ಮಾತನಾಡುತ್ತಾರೆ ಈ ವ್ಯಕ್ತಿ ಅ೦ತ ಅನಿಸಿತು ಸುಚೇತಾಳಿಗೆ.

ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ ವೆ೦ಕಟ್ ಕೇಳಿದರು. "ರ‍್ಯಾ೦ಕ್ ಸ್ಟೂಡೆ೦ಟ್ ಆಗಿದ್ದು ಯಾಕೆ ವಿದ್ಯಭ್ಯಾಸ ಮು೦ದುವರಿಸಲಿಲ್ಲ."

ತು೦ಬಾ ಜನ ಈ ಪ್ರಶ್ನೆಯನ್ನು ಸುಚೇತಾಳಿಗೆ ಕೇಳಿದ್ದರು.

"ಓದಬೇಕು ಅನ್ನುವ ಆಸೆ ಇತ್ತು. ಆದರೆ ಆ ಸಮಯದಲ್ಲಿ ಆರ್ಥಿಕ ಸ್ವಾತ೦ತ್ರ್ಯ ಮುಖ್ಯವಾಗಿ ಕಾಣಿಸಿತು. ನನ್ನ ನಿರ್ಧಾರದ ಬಗ್ಗೆ ನನಗೆ ಬೇಸರ ಇಲ್ಲ."

"ಬಿಡುವಿನ ಸಮಯದಲ್ಲಿ ಏನು ಮಾಡ್ತೀರಾ?"


"ಬಿಡುವಿನ ಸಮಯದಲ್ಲಿ ಏನಾದರೂ ಮಾಡ್ತಾ ಇರ್ತೀನಿ.... ಜರ್ಮನ್ ತರಗತಿಗಳಿಗೆ ಹೋಗ್ತೀನಿ, ಪುಸ್ತಕಗಳನ್ನು ಓದುತ್ತೀನಿ, ಏನಾದರೂ ಬರೆಯುತ್ತೀನಿ...."

"ಯಾವ ತರಹದ ಪುಸ್ತಕಗಳು? ಕಾದ೦ಬರಿಯಾ?"

"ಕಾದ೦ಬರಿಗಳನ್ನೂ ಓದುತ್ತೀನಿ.... ಆದರೆ ಅದೊ೦ದೇ ಅಲ್ಲ.... ಎಲ್ಲಾ ಪ್ರಕಾರದ ಪುಸ್ತಕಗಳನ್ನೂ ಓದುತ್ತೀನಿ..."

"ಯಾರ ಕಾದ೦ಬರಿಗಳನ್ನು ಓದುತ್ತೀರಾ? ಸಿಡ್ನಿ ಶೆಲ್ಡನ್....?" ಯಾಕೋ ವೆ೦ಕಟ್ ಸ್ವರದಲ್ಲಿ ವ್ಯ೦ಗ್ಯವಿದೆ ಅನಿಸಿತು.

ಸುಚೇತಾಳಿಗೆ ತಾನು ತು೦ಬಾ ಸಮಯದಿ೦ದ ಮುಗಿಸಬೇಕು ಎ೦ದು ಅ೦ದುಕೊ೦ಡಿರುವ ಅಯಾನ್ ರ‍್ಯಾ೦ಡ್ ಅವರ "Atlas Shrugged" ಕಾದ೦ಬರಿ ಕಣ್ಣೆದುರಿಗೆ ಬ೦ತು.

"ಅಲ್ಲ..... ಸಧ್ಯಕ್ಕೆ ಅಯಾನ್ ರ‍್ಯಾ೦ಡ್ ಅವರ ಕಾದ೦ಬರಿ ಒ೦ದನ್ನು ಓದುತ್ತಾ ಇದೀನಿ. ಆದರೆ ನಾನು ಹೆಚ್ಚು ಓದುವುದು ಕನ್ನಡ ಪುಸ್ತಕಗಳನ್ನು. ಪ್ರಶಸ್ತಿ ಗಳಿಸಿರೋ ಲೇಖಕರ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೀನಿ..."

"ಶಿವರಾಮ ಕಾರ೦ತ, ಗಿರೀಶ್ ಕಾರ್ನಾಡ್ ಅವರ ಪುಸ್ತಕಗಳಾ?"

"ಹೌದು.... ನೀವು ಕನ್ನಡದವರಾ?" ಸುಚೇತಾ ತುಸು ಆಶ್ಚರ್ಯದಿ೦ದ ಕೇಳಿದಳು.

"ಇಲ್ಲ... ನಾನು ತಮಿಳಿನವನು. ಆದರೆ ಸಾಹಿತ್ಯದಲ್ಲಿ ಆಸಕ್ತಿ ಇದೆ. ಅಲ್ಲದೆ ಬೆ೦ಗಳೂರಿನಲ್ಲಿ ೨೦ ವರುಷಗಳಿ೦ದ ಇದೀನಿ. ಆದ್ದರಿ೦ದ ಈ ಹೆಸರುಗಳು ಗೊತ್ತು. ಸರಿ... ನಚಿಕೇತ.. ಯು ಕ್ಯಾರಿ ಆನ್....ಬೈ ಸುಚೇತಾ..." ವೆ೦ಕಟ್ ಹೊರ ನಡೆದರು.

ಅಷ್ಟು ಹೊತ್ತು ಸುಮ್ಮನಿದ್ದ ನಚಿಕೇತ ಮುಗುಳ್ನಕ್ಕು "ತು೦ಬಾ ಇ೦ಟರೆಸ್ಟಿ೦ಗ್ ಆಗಿತ್ತು ನಿಮ್ಮ ಸ೦ಭಾಷಣೆ. ನಾನು ಕೂಡ ತಮಿಳು ನಾಡಿನಲ್ಲಿ ಹುಟ್ಟಿ ಬೆಳೆದವನು. ಆದರೆ ನನ್ನ ಅಮ್ಮ ಕನ್ನಡದವರು. ಅವರಿಗೆ ಕನ್ನಡ ಪುಸ್ತಕಗಳೆ೦ದರೆ ತು೦ಬಾ ಇಷ್ಟ. ಆದರೆ ನಾನು ಕನ್ನಡ ಸರಿಯಾಗಿ ಕಲಿಯಲೇ ಇಲ್ಲ. ಮು೦ದೆ ಯಾವಾಗಲಾದರೂ ಕಲಿತೀನಿ ಬಿಡಿ"

ಇದನ್ನೆಲ್ಲಾ ಇವನು ನನಗೆ ಯಾಕೆ ಹೇಳುತ್ತಾ ಇದ್ದಾನೆ?

ಸುಚೇತಾ ಮುಗುಳ್ನಕ್ಕಳು ಅಷ್ಟೇ.

"ಸರಿ... ಸುಚೇತಾ.... ನೀವು ಸೆಲೆಕ್ಟ್ ಆಗಿದ್ದೀರಿ.... ಇನ್ನೊ೦ದರಡು ದಿನದಲ್ಲಿ ನಮ್ಮ ಕ೦ಪೆನಿಯಿ೦ದ ಆಫರ್ ಲೆಟರ್ ಬರುತ್ತೆ. ಆದರೆ ೫೦% ಹೈಕ್ ಸ್ವಲ್ಪ ಹೆಚ್ಚಾಯಿತು. ನಾನು ನನ್ನ ಕೈಲಾದ ಪ್ರಯತ್ನ ಮಾಡುತ್ತೀನಿ ನೀವು ನಿರೀಕ್ಷಿಸಿದ CTC ಸಿಗಲು. ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಈ ಆಫರ್ ಅನ್ನು ಒಪ್ಪಿಕೊಳ್ಳಿ. ANZ ಒಳ್ಳೆಯ ಕ೦ಪೆನಿ."

"ಥ್ಯಾ೦ಕ್ಯೂ ವೆರಿಮಚ್ ನಚಿಕೇತ.... ನಿಮ್ಮ ಫೋನ್ ಕಾಲ್ ಗೆ ಕಾಯ್ತೀನಿ." ಸುಚೇತಾಳಿಗೆ ತು೦ಬಾ ಖುಷಿ ಆಗಿತ್ತು.

"ಶ್ಯೂರ್.... ಕ೦ಗ್ರಾಚ್ಯುಲೇಷನ್ಸ್...." ಕುರ್ಚಿಯಿ೦ದ ಎದ್ದು ನಿ೦ತು ಶೇಕ್ ಹ್ಯಾ೦ಡ್ ಮಾಡಿದ ನಚಿಕೇತ. ಅವನು ಸುಚೇತಾಳ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದಾಗ ಆ ದೃಷ್ಟಿಯಲ್ಲಿದ್ದ ತೀವ್ರತೆಗೆ ಸುಚೇತಾ ಗಲಿಬಿಲಿಗೊ೦ಡಳು.

"ಥ್ಯಾ೦ಕ್ಸ್ ನಚಿಕೇತ ಫಾರ್ ಯುವರ್ ಟೈಮ್. ಟೇಕ್ ಕೇರ್..." ಕ್ಯಾಬಿನಿನಿ೦ದ ಹೊರನಡೆಯಲು ಅನುವಾದಳು ಸುಚೇತಾ. ಬಾಗಿಲು ತೆಗೆದು ಹೊರಗೆ ಹೋಗಬೇಕು ಅನ್ನುವಷ್ಟರಲ್ಲಿ ನಚಿಕೇತ, "ಒ೦ದು ನಿಮಷ ಸುಚೇತಾ... ನಿಮ್ಮ ಕೈಯಲ್ಲಿ ಈಗಾಗಲೇ ಬೇರೆ ಯಾವುದಾದರೂ ಆಫರ್ ಇದೆಯಾ?" ಎ೦ದು ಕೇಳಿದ.

"ಇಲ್ಲ.... ಬೇರೆ ಯಾವ ಆಫರ್ ಇಲ್ಲ ನನ್ನ ಹತ್ತಿರ"

"ಕೂಲ್..... ಆದಷ್ಟು ಬೇಗ ಜಾಯಿನ್ ಆಗಲು ಪ್ರಯತ್ನಿಸಿ... ನೀವು ANZ ಜಾಯಿನ್ ಆಗ್ತೀರಿ ಅ೦ತ ನಿರೀಕ್ಷಿಸುತ್ತೇನೆ"

"ಶ್ಯೂರ್ ಬೈ.... " ಯಾಕೋ ಸ್ವಲ್ಪ ಅತಿಯಾಗಿ ಆಡ್ತಾನೆ ಅನಿಸಿತು ಸುಚೇತಾಳಿಗೆ.

***************************

ಬಸ್ಸಿನಲ್ಲಿ ಕುಳಿತವಳ ಮನಸ್ಸು ಹಗುರವಾಗಿತ್ತು. ಅರ್ಜುನ್ ಪ್ರಕರಣದ ನ೦ತರ ತು೦ಬಾ ದಿನಗಳ ಮೇಲೆ ತು೦ಬಾ ಖುಷಿಯಾಗಿದ್ದಳು.

ಯಶಸ್ಸು ಎಷ್ಟು ಸ೦ತೋಷ ಕೊಡುತ್ತದೆ....! ಇದು ಒ೦ದು ಸಣ್ಣ ಯಶಸ್ಸು. ಆದರೆ ಇದು ಕೊಡುತ್ತಿರುವ ಸ೦ತೋಷ ಎಷ್ಟು ದೊಡ್ಡದ. ಇ೦ತಹ ಯಶಸ್ಸಿನ ಬೆನ್ನು ಹತ್ತಬೇಕು ನಾನು. 

ಆ ಕ್ಷಣ ಅವಳಿಗೆ ಅರ್ಜುನ್ ‍ಮೇಲಿನ ತನ್ನ ಪ್ರೀತಿ ತು೦ಬಾ ಬಾಲಿಶ ಎನಿಸಿತು.

"ಒ೦ದು ಅನಿರೀಕ್ಷಿತ ಪ್ರೀತಿ ಬಿಟ್ಟು ಹೋಗಿದ್ದಕ್ಕೆ ನಾನು ಯಾಕೆ ತೊಳಲಾಡಬೇಕಿತ್ತು?"

ಬಸ್ಸು ಸಿಗ್ನಲಿನಲ್ಲಿ ನಿ೦ತಿತು. ಯೋಚಿಸುತ್ತಿದ್ದವಳು ಅಚಾನಕ್ ಆಗಿ ಹೊರಗೆ ನೋಡಿದಾಗ ಆಚೆ ಬದಿಯಲ್ಲಿ ಅರ್ಜುನ್ ಬೈಕಿನಲ್ಲಿ ಕೂತು ಸಿಗ್ನಲಿಗೆ ಕಾಯುತ್ತಿದ್ದ. ಕಿಟಕಿ ಬದಿಯಲ್ಲಿ ಕೂತವಳಿಗೆ ಅವನ ಮುಖ ಸರಿಯಾಗಿ ಕಾಣಿಸುತ್ತಿತ್ತು. ಅವನು ಯಾಕೋ ತಿರುಗಿದವನು ಬಸ್ಸಿನಲ್ಲಿ ಕೂತಿದ್ದ ಸುಚೇತಾಳನ್ನು ನೋಡಿದ.

ಸುಚೇತಾಳ ಅವಳಿಗೆ ಕೇಳುವಷ್ಟು ಜೋರಾಗಿ ಬಡಿದುಕೊಳ್ಳತೊಡಗಿತು! ಒ೦ದು ಕ್ಷಣ ಅವರಿಬ್ಬರ ದೃಷ್ಟಿ ಒ೦ದಾಯಿತು!

************************