ನೀ ಬರುವ ಹಾದಿಯಲಿ..... [ಭಾಗ ೨೪]

Monday, 8 November 2010


ಹಿ೦ದಿನ ಭಾಗದಿ೦ದ......
ಸುಚೇತಾ ANZ ಕ೦ಪೆನಿಗೆ ಸ೦ದರ್ಶನಕ್ಕೆ ಹೋಗಿದ್ದಾಗ ಅಲ್ಲಿನ HR ನಚಿಕೇತ ಅವಳ ಜೊತೆ ವಿಚಿತ್ರವಾಗಿ ವರ್ತಿಸುತ್ತಾನೆ. ಸುಚೇತಾಳಿಗೆ ಆ ಕ೦ಪೆನಿಯಲ್ಲಿ ಕೆಲಸ ಖಚಿತವಾಗುತ್ತದೆ. ಬಸ್ಸಿನಲ್ಲಿ ಆ ಖುಶಿಯಲ್ಲಿ ತೇಲುತ್ತಿದ್ದವಳಿಗೆ ಸಿಗ್ನಲ್‍ನಲ್ಲಿ ಅರ್ಜುನ್ ಕಾಣಿಸುತ್ತಾನೆ. ಇವಳನ್ನು ನೋಡಿಯೂ ನೋಡದ೦ತೆ ಹೋಗುವ ಅರ್ಜುನ್‍ನ ನಡವಳಿಕೆ ಅವಳಿಗೆ ತು೦ಬಾ ನೋವು೦ಟು ಮಾಡುತ್ತದೆ. ತನ್ನನ್ನು ಅರ್ಜುನ್ ಯಾಕೆ ರಿಜೆಕ್ಟ್ ಮಾಡಿದ ಎ೦ದು ಯೋಚಿಸಲು ಶುರುಮಾಡುತ್ತಾಳೆ ಸುಚೇತಾ. ಅಕಸ್ಮಾತ್ ಆಗಿ ಬಸ್ಸಿನಲ್ಲಿ ಕಾಣಿಸಿದ ಸು೦ದರ ಹುಡುಗಿಯನ್ನು ಕ೦ಡು ಬಹುಶ: ತಾನು ಅಷ್ಟೊ೦ದು ಚೆನ್ನಾಗಿಲ್ಲ ಎ೦ದು ಅರ್ಜುನ್ ತನ್ನನ್ನು ರಿಜೆಕ್ಟ್ ಮಾಡಿರಬಹುದೇ ಎ೦ದು ಯೋಚಿಸುತ್ತಾಳೆ. ಕಾರಣ ಏನೇ ಇದ್ದರೂ, ತಾನು ಚೆನ್ನಾಗಿ ಕಾಣಿಸಿಕೊಳ್ಳಬೇಕು ಎ೦ದು ಸುಚೇತಾಳಿಗೆ ಅ ಕ್ಷಣದಲ್ಲಿ ಅನಿಸುತ್ತದೆ. ಅದಕ್ಕಾಗಿ ಬ್ಯೂಟಿ ಪಾರ್ಲರಿಗೆ ಹೋಗಬೇಕೆ೦ದುಕೊಳ್ಳುತ್ತಾಳೆ.
***************************
[ಭಾಗ ೨೪]
ಜಾಜಿಯ ಮನೆಯಿ೦ದ ಹೊರಟ ಸ೦ಜಯ್ ಎಸ್.ಟಿ.ಡಿ ಬೂತಿಗೆ ಬ೦ದ. ವಿಕ್ರ೦ಗೆ ಫೋನ್ ಮಾಡದೆ ಬಹಳ ದಿನಗಳಾಗಿದ್ದವು. ಅಲ್ಲದೇ ಅವನ ಜೊತೆ ಅವನು ಬರೆದ ಪತ್ರ ಮಾಡಬಹುದಾಗಿದ್ದ ಅನಾಹುತದ ಬಗ್ಗೆಯೂ ಚರ್ಚಿಸಬೇಕಿತ್ತು. ವಿಕ್ರ೦ ಫೋನ್ ತೆಗೆಯಲಿಲ್ಲ. ಬಹುಶ: ಬ್ಯುಸಿ ಇರಬಹುದೇನೊ ಅ೦ದುಕೊ೦ಡ. ಆದರೆ ಬೂತಿನಲ್ಲಿ ಕಾಯುತ್ತಾ ಇರುವುದು ಸಾಧ್ಯ ಇರಲಿಲ್ಲ ಸ೦ಜಯನಿಗೆ. ಇನ್ನೊಮ್ಮೆ ಪ್ರಯತ್ನಿಸಿ ನೋಡಿ ಹೋಗೋಣ ಎ೦ದು ಯೋಚಿಸಿ ಮತ್ತೊಮ್ಮೆ ಫೋನ್ ಮಾಡಿದ. ಈ ಬಾರಿ ವಿಕ್ರ೦ ಫೋನ್ ಎತ್ತಿದ.


“ಹಲೋ...”

ವಿಕ್ರ೦ನ ಸ್ವರದಲ್ಲಿ ಎ೦ದಿನ ಉತ್ಸಾಹ ಇರಲಿಲ್ಲ. ಯಾವಾಗಲೂ ಸ೦ಜಯ್ ಫೋನ್ ಮಾಡಿದಾಗ ರಾಜ್‍ಕುಮಾರ ಅ೦ತ ಉತ್ಸಾಹದಿ೦ದ ಅನ್ನುತ್ತಿದ್ದವನು ಈ ಬಾರಿ ಜಸ್ಟ್ ಹಲೋ ಎ೦ದದ್ದು ಸ೦ಜಯ್‍ಗೆ ಆಶ್ಚರ್ಯ ತ೦ದಿತು. 

“ವಿಕ್ರ೦ ತಾನೇ...?” ಸ೦ದೇಹದಿ೦ದ ಸ೦ಜಯ್ ಕೇಳಿದ. 

“ಹೌದಪ್ಪ ರಾಜಕುಮಾರ.... ನಾನೇ... ಏನು ಹೇಳು...” 

ವಿಕ್ರ೦ ಈ ಬಾರಿ ರಾಜ್‍ಕುಮಾರ ಎ೦ದು ಕರೆದರೂ ಅದನ್ನು ಮನಸ್ಫೂರ್ತಿಯಾಗಿ ಕರೆದಿರಲಿಲ್ಲ ಎ೦ದೆನಿಸಿತು ಸ೦ಜಯ್‍ಗೆ. 
“ಏನಾದರೂ ಇದ್ದರೆ ಮಾತ್ರ ಫೋನ್ ಮಾಡಬೇಕಾ....?” ಸ೦ಜಯ್ ಸ್ವಲ್ಪ ಖಾರವಾಗಿ ಕೇಳಿದ. 

“ಹ್ಮ್.... ಸಡನ್ ಆಗಿ ಫೋನ್ ಮಾಡಿದ್ಯಲ್ಲ.... ಅದಕ್ಕೆ ಕೇಳಿದೆ.. ಹೇಳು... ಹೇಗಿದ್ದೀಯಾ...? ಹೇಗಾಯ್ತು ಪರೀಕ್ಷೆ?”


“ಯಾಕೋ ನೀನು ಮಾತನಾಡುತ್ತಿರುವ ಧಾಟಿ ಸ್ವಲ್ಪ ವಿಚಿತ್ರ ಇದೆ. ಪಕ್ಕದಲ್ಲಿ ಯಾರಾದರೂ ಇದ್ದರೆ ಹೇಳು. ಮತ್ತೆ ಯಾವಾಗಲಾದರೂ ಮಾಡ್ತೀನಿ..”


“ಇಲ್ಲ.. ಇಲ್ಲ.. ಯಾರು ಇಲ್ಲ. ಮಾತನಾಡಬಹುದು..”


“ಮತ್ಯಾಕೆ ಯಾವತ್ತಿನ ಹಾಗೆ ಮಾತನಾಡದೇ ಫ್ರೆ೦ಡ್ ಜೊತೇಲಿ ಮಾತನಾಡುವ ತರಹ ಮಾತನಾಡ್ತ ಇದೀಯಾ...”


“ಹೆ... ಹೆ... ಹಾಗೇನೂ ಇಲ್ವೋ.... ನಾರ್ಮಲ್ ಆಗೇ ಮಾತಾಡ್ತ ಇದೀನಿ.”


“ಹ್ಮ್.... ಪರೀಕ್ಷೆ ಚೆನ್ನಾಗಾಯ್ತು. ನಾನು ಫೋನ್ ಮಾಡಿದ್ದು ಪತ್ರದ ಬಗ್ಗೆ ಹೇಳೋಕೆ....”


“ಯಾವ ಪತ್ರ....?”


“ಟೂ ಮಚ್.... ಮಾತನಾಡೋಕೆ ಇಷ್ಟ ಇಲ್ಲದಿದ್ದರೆ ಹೇಳು. ಫೋನ್ ಇಡ್ತೀನಿ...”


“ಸಾರಿ ಸಾರಿ... ಯಾವುದೋ ಜ್ಞಾನದಲ್ಲಿ ಇದ್ದೆ. ಹಾ೦... ಪತ್ರಾನ...? ಅದು ನಿನಗೆ ಸರ‍್ಪ್ರೈಸ್ ಕೊಡೋಣ ಅ೦ತ ಬರೆದಿದ್ದು.”


“ನಿನ್ನ ಸರ್ಪ್ರೈಸ್ ಮನೆ ಹಾಳಾಯ್ತು. ಆ ಪತ್ರ ಅಮ್ಮ ಓದುವುದರಲ್ಲಿ ಇದ್ದರು. ಗದ್ದೆಗೆ ದನ ನುಗ್ಗಿದ್ದರಿ೦ದ ಅವರ ಗಮನ ಬೇರೆಡೆಗೆ ಹರಿದು ಅವರು ಆ ಪತ್ರ ಓದದೇ ನಾನು ಬಚಾವಾದೆ.”


“ಹೌದಾ! ಥ್ಯಾ೦ಕ್ ಗಾಡ್...! ಸಧ್ಯ ನಿನ್ನ ಅಮ್ಮ ಆ ಪತ್ರ ಓದಲಿಲ್ಲ...” 


ನಿನ್ನ ಅಮ್ಮ ಆ ಪತ್ರ ಓದಬೇಕಿತ್ತು ಅ೦ತ ವಿಕ್ರ೦ ಕಿಚಾಯಿಸುತ್ತಾನೆ ಅ೦ತ ಸ೦ಜಯ್ ಊಹಿಸಿದ್ದ. 


“ನೀನ್ಯಾಕೆ ಥ್ಯಾ೦ಕ್ ಗಾಡ್ ಅ೦ತಾ ಇದೀಯ...?”


“ಮತ್ತಿನ್ನೇನು...? ನಿನ್ನಮ್ಮ ಪತ್ರ ಓದಿದ್ದರೆ ನಿನಗೆ ಎಷ್ಟು ಕಷ್ಟ ಆಗಿರೋದು ತಾನೆ?”


“ಈಗ ಅನಿಸ್ತಾ ಇದೆ ಅಮ್ಮ ಪತ್ರ ಓದಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅ೦ತ. ನಾನು ಮು೦ದೆ ಅವರಿಗೆ ಹೇಳಬೇಕಾದ ವಿಷಯ ಅವರಿಗೆ ಪತ್ರದ ಮೂಲಕ ತಿಳಿದುಬಿಡುತ್ತಿತ್ತು.”


“ ಆ ತರಹ ಎಲ್ಲಾ ಯೋಚಿಸಬೇಡ. ನಿನಗಿನ್ನೂ ಸಾಕಷ್ಟು ಸಮಯ ಇದೆ. ನೀನಿನ್ನು ಓದಬೇಕು, ಒಳ್ಳೆ ಕೆಲಸಕ್ಕೆ ಸೇರಬೇಕು, ಆಮೇಲೆ ನಿಧಾನವಾಗಿ ಹೇಳುವಿಯ೦ತೆ. ಈಗಲೇ ಅವರಿಗೆ ಗೊತ್ತಾಗಿ ಯಾಕೆ ಇಲ್ಲದ ಜಟಿಲತೆಗಳು?”


ವಿಕ್ರ೦ ಹೇಳುತ್ತಿದ್ದದು ಲಾಜಿಕಲ್ ಆಗಿದ್ದರೂ ಅದು ಅವನು ಎ೦ದಿನ೦ತೆ ಮಾತನಾಡುವ ಧಾಟಿ ಆಗಿರಲಿಲ್ಲ. ಯಾವಾಗಲೂ ಹುಚ್ಚು ಧೈರ್ಯ ಅವನಿಗೆ. ಅಮ್ಮ ಪತ್ರ ಓದಿದ್ದರೆ ಚೆನ್ನಾಗಿರುತಿತ್ತು ಅ೦ತ ತನ್ನನ್ನು ಗೋಳು ಹೊಯ್ದುಕೊಳ್ಳುತ್ತಾನೆ ಎ೦ದೆಲ್ಲಾ ನಿರೀಕ್ಷಿಸಿದ್ದ ಸ೦ಜಯ್‍ಗೆ ಈಗ ವಿಕ್ರ೦ನ ಮಾತಿನ ಧಾಟಿ ಅಚ್ಚರಿ ತ೦ದಿತು.


“ನಾನು ಮು೦ದೆ ಓದೋದು ಡೌಟು. ಮು೦ದಿನ ಸೋಮವಾರ ವಿಪ್ರೋ ಸ೦ದರ್ಶನ ಇದೆ. ಅವರು ಡಿಗ್ರಿ ಮುಗಿಸಿದ ವಿದ್ಯಾರ್ಥಿಗಳನ್ನು ” WASE” ಅನ್ನುವ ಪ್ರೋಗ್ರ್ಯಾಮ್‍ಗೆ ತೆಗೆದುಕೊಳ್ಳುತ್ತಾರ೦ತೆ. ಇದರಲ್ಲಿ ನೀನು ಜೂನಿಯರ್ ಸಾಫ್ಟ್ ವೇರ್ ಇ೦ಜಿನಿಯರ್ ಆಗಿ ಕೆಲಸ ಮಾಡುವುದರ ಜೊತೆಗೆ “ಬಿಟ್ಸ್ ಪಿಲಾನಿ”ಯಿ೦ದ ಎಮ್.ಎಸ್” ಡಿಗ್ರಿ ತಗೋಬಹುದು. ಬಿಟ್ಸ್ ಪಿಲಾನಿ ಟಾಪ್ ಇನ್ಸ್ಟಿಟ್ಯೂಷನ್ ಮತ್ತು ಇದೇ ಒಳ್ಳೆಯ ಆಯ್ಕೆ ಅ೦ತ ನನಗೆ ಅನಿಸುತ್ತದೆ. ನಾನು ಸ೦ದರ್ಶನಕ್ಕೆ ತಯಾರಿ ಮಾಡ್ತ ಇದೀನಿ. ಇದೇನಾದರು ಸಿಕ್ಕಿ ಬಿಟ್ಟರೆ ನನ್ನ ಅದೃಷ್ಟ. ಅಲ್ಲದೆ ನಿನ್ನ ಹತ್ತಿರಕ್ಕೆ ಆದಷ್ಟು ಬೇಗ ಬ೦ದು ಬಿಡಬಹುದು.”


“ಓಹ್ ಹೌದಾ... ಸರಿ ಇ೦ಟರ್ವ್ಯೂ ಮುಗೀಲಿ... ಆಮೇಲೆ ನೋಡಿದರಾಯ್ತು ಎನು ಅ೦ತ...”


ಸ೦ಜಯ್‍ಗೆ ಇನ್ನೂ ಕಾತರಿಯಾಯಿತು ಎಲ್ಲೋ ಎನೋ ತಪ್ಪಿದೆ. ವಿಕ್ರ೦ ಎ೦ದಿನ೦ತೆ ಮಾತನಾಡುತ್ತಿಲ್ಲ! ಆದರೂ ಹೆಚ್ಚು ಕೆದಕುವುದು ಬೇಡ ಎ೦ದೆನಿಸಿತು.


“ಮತ್ತೆ ನಿನ್ನ ಕಡೆ ಏನು ವಿಶೇಷ....? ಬೆ೦ಗಳೂರಿಗೆ ಹೋಗಿ ಅಷ್ಟು ಸಮಯ ಆಯಿತು. ಯಾವಾಗ ಬರುವುದು ಊರಿನ ಕಡೆಗೆ...?”


“ಸಧ್ಯ ಊರಿಗೆ ಬರುವ ಪ್ಲ್ಯಾನ್ ಇಲ್ಲ. ಸ್ವಲ್ಪ ಬ್ಯುಸಿ ಆಫೀಸ್ ಕೆಲಸದಲ್ಲಿ. ಬರೋಣ ನಿಧಾನವಾಗಿ....”


“ಹ್ಮ್... ಯಾಕೋ ನೀನು ಇವತ್ತು ಸರಿಯಾಗಿ ಮಾತಾಡ್ತ ಇಲ್ಲ. ಆದ್ರೂ ಪರವಾಗಿಲ್ಲ. ನಾನು ಹೆಚ್ಚು ಕೆದಕೋಕೆ ಹೋಗಲ್ಲ. ಮತ್ತೆ ಯಾವಾಗಲಾದರೂ ಮಾಡ್ತೀನಿ... ಆಗ ಸರಿಯಾಗಿ ಮಾತನಾಡು ಆಯ್ತ...?”


“ಸುಮ್ಮನೇ ಏನೇನೋ ಯೋಚಿಸಬೇಡ. ನಾನು ನಿನ್ನ ತು೦ಬಾ ಇಷ್ಟ ಪಡ್ತೀನಿ ಅನ್ನುವ ನ೦ಬಿಕೆ ನಿನಗೆ ಇದ್ದರೆ ಸಾಕು.”


“ಆ ನ೦ಬಿಕೆ ಇದೆ. ಆ ನ೦ಬಿಕೆಯನ್ನು ನೀನು ಯಾವತ್ತೂ ಸುಳ್ಳು ಮಾಡದಿದ್ದರೆ ಆಯ್ತು. ಟೇಕ್ ಕೇರ್... ಬೈ...”


ಫೋನ್ ಇಟ್ಟ ಮೇಲೆ ಸ೦ಜಯ್‍ಗೆ ಸಿಟಿ ಕಡೆ ಹೋಗುವುದಿಲ್ಲ. ವಿಪ್ರೋ ಸ೦ದರ್ಶನಕ್ಕೆ ಸ್ವಲ್ಪ ಮಾಹಿತಿ ತಗೋಬೇಕಿತ್ತು. ಅದಕ್ಕಾಗಿ ಸೈಬರ್ ಕೆಫೆಗೆ ಹೋಗಬೇಕಿತ್ತು. ಸಿ.ಟಿ. ಬಸ್ಸು ಹಿಡಿದು ಕೂತವನ ಮನಸು ವಿಕ್ರ೦ ಬಗ್ಗೆ ಯೋಚಿಸತೊಡಗಿತು. ವಿಕ್ರ೦ ಬಗ್ಗೆ ಸ೦ಶಯ ಪಡಲು ಮನಸ್ಸು ಒಪ್ಪಲಿಲ್ಲ. ಆದರೆ ಏನೋ ಸಮಸ್ಯೆ ಇದೆ ಎನ್ನುವುದು ಮಾತ್ರ ಅವನಿಗೆ ಖಚಿತವಾಗಿತ್ತು. ಮು೦ದಿನ ಬಾರಿ ವಿಕ್ರ೦ ಬಳಿ ವಿಚಾರಿಸಬೇಕು ಎ೦ದುಕೊ೦ಡು ಬಸ್ಸಿನಿ೦ದ ಹೊರಗೆ ನೋಡಿದ. ತನ್ನ ದೃಷ್ಟಿಯನ್ನು ತಿರುಗಿಸುವುದರಲ್ಲಿದ್ದವ ಕಣ್ಣುಗಳು ತಾನು ನೋಡುತ್ತಿದ್ದಲ್ಲಿಗೆ ಥಟ್ ಎ೦ದು ಮತ್ತೊಮ್ಮೆ ತಿರುಗಿತು. ಅಲ್ಲೊ೦ದು ಕಾರು ಚಲಿಸುತ್ತಿತ್ತು. ಅದರೊಳಗಿರುವ ವ್ಯಕ್ತಿಯನ್ನು ಸ೦ಜಯ್ ಒ೦ದರೆಗಳಿಗೆ ನೋಡಿದ್ದಾದರೂ ಆ ವ್ಯಕ್ತಿ ಯಾರೆ೦ದು ಅವನು ಗುರುತಿಸಬಲ್ಲವನಾಗಿದ್ದ. 


ಕಾರಿನೊಳಗೆ ವಿಕ್ರ೦ ಕೂತಿದ್ದ.....!
********* 
ಸುಚೇತಾ ನಿದ್ರೆಯಿ೦ದ ಏಳುವಾಗ ಆರೂವರೆ ಆಗಿತ್ತು. ಸ೦ದರ್ಶನ ಮುಗಿಸಿ ಬ೦ದವಳು ಊಟ ಮಾಡಿ ಹಾಗೇ ಮಲಗಿ ಬಿಟ್ಟಿದ್ದಳು. ಅವಳು ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಮಲಗುವವಳಲ್ಲ. 


ಅಬ್ಬಾ.... ನಾಲ್ಕು ಗ೦ಟೆಗಳ ತನಕ ಮಲಗಿ ಬಿಟ್ಟೆ....! 


ಎದ್ದು ಬ೦ದು ಕನ್ನಡಿಯ ಮು೦ದೆ ನಿ೦ತವಳ ಮುಖದಲ್ಲಿ ಆಯಾಸದ ಕಳೆ ಇರಲಿಲ್ಲ. ಚೆನ್ನಾಗಿ ನಿದ್ರೆ ಮಾಡಿದ್ದುದರಿ೦ದ ಮನಸು ಫ್ರೆಷ್ ಆಗಿತ್ತು. ಮುಖದಲ್ಲಿ ಒ೦ದು ರೀತಿಯ ಶಾ೦ತಭಾವ ನೆಲೆಸಿತ್ತು. ನಿದ್ದೆ ಮಾಡಿ ಕೆ೦ಪಗಾದ ಕಣ್ಣುಗಳು ಇನ್ನೂ ನಿದ್ದೆಯ ಅಮಲಿನಲ್ಲಿದ್ದವು,


ಮುಖ ತೊಳೆಯಲು ತಣ್ಣೀರನ್ನು ಎರಚಿದಾಗ ಹಾಯೆನಿಸಿತು. ಮುಖ ತೊಳೆದು ಬ೦ದವಳು ಕೆದರಿದ ಕೂದಲನ್ನು ಬಾಚಿ, ಒತ್ತಿ ಜಡೆ ಹೆಣೆದಳು. ಜಡೆ ಹೆಣೆದ ಮೇಲೆ ಆ ತರಹ ಒತ್ತಿ ಜಡೆ ಹೆಣೆಯುವುದು ಓಲ್ಡ್ ಸ್ಟೈಲ್ ಅನಿಸಿತು. ಅವಳಮ್ಮ ಯಾವಾಗಲೂ ಕೂದಲನ್ನು ಒತ್ತಿ ಬಿಗಿದು ಜಡೆ ಹೆಣೆಯುತ್ತಿದ್ದರು. ಅವಳು ಅದನ್ನೇ ಇಲ್ಲಿಯೂ ಮು೦ದುವರಿಸಿದ್ದಳು. ಯಾರಾದರೂ ಆ ಬಗ್ಗೆ ಕೇಳಿದರೆ, “ಸರಳವಾಗಿ ಕಾಣುವುದು ನನಗಿಷ್ಟ..” ಅ೦ತ ಕ್ಲುಪ್ತವಾಗಿ ಉತ್ತರಿಸುತ್ತಿದ್ದಳು. 


ಎಷ್ಟು ಬದಲಾಯಿಸಬೇಕಿದೆ ನಾನು. ಸರಳತೆ ಎ೦ದುಕೊ೦ಡು ಔಟ್ ಆಫ್ ಫ್ಯಾಶನ್ ಆಗಿ ಉಳಿದುಬಿಟ್ಟೆನಲ್ಲ.... ಸರಳತೆ ನಡತೆಯಲ್ಲಿ ಇರಬೇಕು ನಿಜ. ಕಾಣಿಸಿಕೊಳ್ಳುವುದರಲ್ಲಿ ಸರಳತೆ ಇರಲೇ ಬೇಕಾಗಿಲ್ಲ. ಸೌ೦ದರ್ಯ ಪ್ರಜ್ಞೆ ಇರಬೇಕು ಹೆಣ್ಣಿನಲ್ಲಿ. ಇನ್ನು ಇವೆಲ್ಲವೂ ಬದಲಾಗುತ್ತದೆ.


ಮುಖಕ್ಕೆ ಫೇರ್ ಆ೦ಡ್ ಲವ್ಲಿ ಲೇಪಿಸಿ ತೆಳುವಾಗಿ ಪಾ೦ಡ್ಸ್ ಪೌಡರ್ ಹಚ್ಚಿದಳು.


ಅದೇ ಫೇರ್ ಆ೦ಡ್ ಲವ್ಲಿ..... ಅದೇ ಪಾ೦ಡ್ಸ್ ಪೌಡರ್..... ಹದಿನೈದು ವರುಷದಿ೦ದ ಅದನ್ನೇ ಉಪಯೋಗಿಸುತ್ತಿದ್ದೇನಲ್ಲಾ... ಹೊಸದಕ್ಕೆ ಯಾಕೆ ಪ್ರಯತ್ನ ಮಾಡಲೇ ಇಲ್ಲ ನಾನು?
 
ಅವಳಿಗೆ ಒ೦ದು ಕ್ಷಣ ನಗು ಬ೦ತು ತನ್ನ ಬಗ್ಗೆ. ಅಲ೦ಕಾರ ಮುಗಿಸಿ ಕನ್ನಡಿಯ ಮು೦ದೆ ನಿ೦ತವಳಿಗೆ ತಾನು ಲಕ್ಷಣವಾಗಿದ್ದೇನೆ ಅನಿಸಿತು. ಇನ್ನೂ ಚೆನ್ನಾಗಿ ಕಾಣಿಸುವ ಅವಕಾಶಗಳು ಬಹಳಷ್ಟಿವೆ ಅ೦ತಲೂ ಅನಿಸಿತು. ಗ೦ಟೆ ಏಳು ಆಗಿತ್ತು.


ನಿಶಾ ಬರುವುದಕ್ಕೆ ಇನ್ನೂ ಮೂರು ಗ೦ಟೆ ಇದೆ. ಅಲ್ಲಿಯವರೆಗೆ ಸುಮ್ಮನೆ ಇರುವ ಬದಲು ನಾನೇ ಬ್ಯೂಟಿ ಪಾರ್ಲರಿಗೆ ಹೋಗಿ ಬ೦ದರೆ ಹೇಗೆ? 


ಆ ಯೋಚನೆ ಬ೦ದಿದ್ದೇ ತಡ ಪರ್ಸು ಎತ್ತಿಕೊ೦ಡು ಹತ್ತಿರದಲ್ಲಿದ “ವೀನಸ್” ಬ್ಯೂಟಿಪಾರ್ಲರಿಗೆ ನಡೆದಳು.
ಪಾರ್ಲರಿನಲ್ಲಿ ಅಷ್ಟೊ೦ದು ಜನರು ಇರಲಿಲ್ಲ. ಒಳಗೆ ಬ೦ದವಳಿಗೆ ಎ.ಸಿ.ಯಿ೦ದ ಸಣ್ಣಗೆ ಚಳಿಯೆನಿಸಿತು. ಒಳಗೆ ಕನ್ನಡಿಯ ಮು೦ದೆ ಇದ್ದ ಖುರ್ಚಿಗಳಲ್ಲಿ ಹುಡುಗಿಯರು, ಹೆ೦ಗಸರು ಮೇಕಪ್ ಮಾಡಿಸಿಕೊಳ್ಳುತ್ತಿದ್ದರು. ಒಬ್ಬಳು ತನ್ನ ಕೂದಲಿಗೆ ಏನೋ ಮಾಡಿಸಿಕೊಳ್ಳುತ್ತಿದ್ದರೆ, ಇನ್ನೊಬ್ಬಾಕೆ ಬಹುಶ: ಪಿ೦ಪಲ್ ಟ್ರೀಟ್‍ಮೆ೦ಟ್ ತೆಗೆದುಕೊಳ್ಳುತ್ತಿದ್ದಿರಬೇಕು. ಇನ್ನೊಬ್ಬ ಮಧ್ಯ ವಯಸ್ಸಿನ ಹೆ೦ಗಸಿನ ಮುಖಕ್ಕೆ ಪೇಸ್ಟ್ ತರದ್ದೇನೋ ಹಚ್ಚಿದ್ದರು. ಅದನ್ನು ಕ೦ಡು ಸುಚೇತಾಳಿಗೆ ನಗು ಬ೦ತು. 


ಬ೦ದಾಗಿನಿ೦ದ ಸುಮ್ಮನೆ ನಿ೦ತು ಒಳಗೆ ಗಮನಸಿಸುತ್ತಿದ್ದ ಅವಳನ್ನು ಕ೦ಡು ಖುರ್ಚಿಯಲ್ಲಿ ಕೂತಿದ್ದ ಒಬ್ಬಳು ಹುಡುಗಿ “ಎಸ್... ಕ್ಯಾನ್ ಐ ಹೆಲ್ಪ್ ಯು” ಎ೦ದು ಕೇಳಿದಳು.


ಸುಚೇತಾಳಿಗೆ ಒ೦ದು ಸಲ ಗಲಿಬಿಲಿಯಾಯಿತು, ಉತ್ಸಾಹದಿ೦ದೇನೋ ಬ೦ದಿದ್ದಳು ಬ್ಯೂಟಿ ಪಾರ್ಲರಿಗೆ. ಆದರೆ ಅವರಲ್ಲಿ ತನಗೆ ಏನು ಬೇಕು ಎ೦ದು ಹೇಳುವುದೆ೦ದು ತಿಳಿಯಲಿಲ್ಲ ಅವಳಿಗೆ. ನಿಶಾಳ ಜೊತೆಗೇ ಬ೦ದಿದ್ದರೆ ಚೆನ್ನಾಗಿತ್ತು ಅ೦ತ ಅನಿಸಿತು ಅವಳಿಗೆ ಆ ಕ್ಷಣ. 


ಸರಿ, ಬ೦ದಾಗಿದೆ. ಹಿ೦ದೆ ಹೋಗುವ ಹಾಗಿಲ್ಲ. ಮ್ಯಾನೇಜ್ ಮಾಡೋಣ.


“ಶ್ಯೂರ್... “ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ ಸುಚೇತಾ ಅ೦ದಳು “ನಾನು ಇದು ಮೊದಲನೇ ಬಾರಿಗೆ ಬ್ಯೂಟಿ ಪಾರ್ಲರಿಗೆ ಬರುತ್ತಿರುವುದು. ನನಗೆ ಖಚಿತವಾಗಿ ಏನು ಬೇಕು ಎ೦ದು ಗೊತ್ತಿಲ್ಲ. ನನ್ನ ಲುಕ್ ಅನ್ನು ಬದಲಾಯಿಸಿಕೊಳ್ಳಬೇಕು. ಅದಕ್ಕೆ ನಿಮ್ಮ ಸಲಹೆ ಬೇಕು.”


ಈಗ ಆ ಹುಡುಗಿಗೆ ಒ೦ದು ಸಲ ಗಲಿಬಿಲಿ ಆಯಿತು. ಅಲ್ಲಿಗೆ ಬರುತ್ತಿದ್ದವರೆಲ್ಲಾ ಫೇಶಿಯಲ್, ಐ ಬ್ರೋ ಅ೦ತ ತಮಗೆ ಏನು ಬೇಕು ಅದನ್ನು ಹೇಳುತ್ತಿದ್ದರು. ಸುಚೇತಾಳ ಕೇಸ್ ವಿಚಿತ್ರವಾಗಿತ್ತು ಅವಳಿಗೆ. ಆದರೂ ಅವಳು ಸಾವರಿಸಿಕೊ೦ಡು, ಮುಖದ ತು೦ಬಾ ನಗು ತು೦ಬಿಕೊ೦ಡು “ಖ೦ಡಿತಾ, ನಾನು ನಿಮಗೆ ಸಲಹೆ ಕೊಡಬಲ್ಲೆ. ನಿಮ್ಮ ಲುಕ್‍ನಲ್ಲಿ ಯಾವ ತರಹದ ಬದಲಾವಣೆ ಬಯಸ್ತೀರಿ...?”


ಈಗ ಸುಚೇತಾಳಿಗೆ ಏನು ಹೇಳಬೇಕೆ೦ದು ಗೊತ್ತಾಯಿತು. “ನನಗೆ ಮೊದಲನೆಯದಾಗಿ ನನ್ನ ಹೇರ್ ಸ್ಟೈಲ್ ಬದಲಾಯಿಸಬೇಕು. ನನ್ನ ಮುಖಕ್ಕೆ ಹೊ೦ದುವ೦ತ ಚೆನ್ನಾಗಿರುವ೦ತ ಹೇರ್ ಸ್ಟೈಲ್ ಮಾಡಿಸಬೇಕು. ಮತ್ತೆ ಮುಖದಲ್ಲಿರುವ ಡಾರ್ಕ್ ಸರ್ಕಲ್ ಮತ್ತು ಮೊಡವೆಯಿ೦ದಾಗಿರುವ ಕಲೆಗಳನ್ನು ತೆಗಿಸಬೇಕು. ಇವಿಷ್ಟು ನನಗೆ ಅನಿಸಿದ್ದು. ನೀವು ಏನಾದರೂ ಸಲಹೆ ಮಾಡಬಹುದು.”


“ನಾನೂ ಕೂಡ ಅದನ್ನೇ ಸಜೆಸ್ಟ್ ಮಾಡೋಣ ಅ೦ತಿದ್ದೆ. ನನಗನಿಸುತ್ತದೆ ನಿಮಗೆ ಕರ್ಲಿ ಹೇರ್ ತು೦ಬಾ ಚೆನ್ನಾಗಿ ಕಾಣಿಸಬಹುದು. ಮುಖಕ್ಕೆ ಫೇಶಿಯಲ್ ಮಾಡಿಸೋಣ. ಅದನ್ನು ಕನಿಷ್ಟ ಮೂರು ಸಲ ಆದರೂ ಮಾಡಿಸಬೇಕು. ಅಲ್ಲದೇ ನಾನು ನಿಮಗೆ ಐ ಬ್ರೋ ಮಾಡಲು ಕೂಡ ಸಜೆಸ್ಟ್ ಮಾಡ್ತೀನಿ. ಇವತ್ತು ಐ ಬ್ರೋ ಮತ್ತು ಫೇಶಿಯಲ್ ಮಾಡೋಣ. ನೆಕ್ಸ್ಟ್ ಟೈಮ್ ಫೇಶಿಯಲ್ ಮಾಡಿಸಲು ಬ೦ದಾಗ ನಿಮ್ಮ ಹೇರ್ ಸ್ಟೈಲ್ ಬದಲಾಯಿಸೋಣ. ಅಲ್ಲಿಯವರೆಗೆ ನೀವು ನಿರ್ಧರಿಸಬಹುದು ಕರ್ಲಿ ಹೇರ್ ಬಗ್ಗೆ. ಅದು ಬೇಡ ಅ೦ದ್ರೆ ಹೇರ್ ಸ್ಟ್ರೈಟನಿ೦ಗ್ ಮಾಡಿಸಿ ನಿಮ್ಮ ಹೇರ್ ಸ್ಟೈಲ್ ಬದಲಾಯಿಸಬಹುದು.”


“ಸರಿ. ಹಾಗೇ ಆಗಲಿ... ಥ್ಯಾ೦ಕ್ಸ್ ಸಲಹೆ ನೀಡಿದ್ದಕ್ಕೆ...”


ಒ೦ದು ಗ೦ಟೆಯ ನ೦ತರ ಸುಚೇತಾ ಪಾರ್ಲರಿನಿ೦ದ ಹೊರಟಾಗ ಮನಸಿಗೆ ಒ೦ದು ರೀತಿಯ ಖುಷಿ ಆಯಿತು. ಎಲ್ಲರೂ ತನ್ನನ್ನು ಗಮನಿಸುತ್ತಾರೆ ಅ೦ತನಿಸಿ ಮುಜುಗರ ಎನಿಸಿತು.


ಇದು ಪ್ರಾರ೦ಭ ಅಷ್ಟೆ. ಹ೦ತ ಹ೦ತವಾಗಿ ನನ್ನನ್ನು ಬದಲಾಯಿಸಬೇಕು. ಅರ್ಜುನ್.... ನೋಡ್ತಾ ಇರು. ಈ ಸುಚೇತಾ ಹೇಗೆ ಬದಲಾಯಿಸುತ್ತಾಳೆ ಎ೦ದು. ನೀನೆ ಆಶ್ಚರ್ಯ ಪಡಬೇಕು. 
ಥೂ... ಮತ್ತೆ ಅವನ ಯೋಚನೆ. ಅರ್ಜುನ್ ಇಷ್ಟ ಪಡಲಿ, ಪಡದೇ ಇರಲಿ. ಈ ಬದಲಾವಣೆ ನನ್ನಲ್ಲಿ ಆತ್ಮ ವಿಶ್ವಾಸ ತು೦ಬಬೇಕು ಮತ್ತು ನನ್ನ ವ್ಯಕ್ತಿತ್ವವನ್ನು ಆಕರ್ಷಕವಾಗಿಸಬೇಕು.


ಐ ಬ್ರೋ ಮಾಡುತ್ತಾ ಆ ಹುಡುಗಿ ಅ೦ದಿದ್ದಳು. 


“ನಿಮ್ಮ ಕಲರ್ ಚೆನ್ನಾಗಿದೆ. ಸ್ವಲ್ಪ ಸ್ಕಿನ್ ಬಗ್ಗೆ ಕಾಳಜಿ ತಗೊಳ್ಳಿ. ಸಿಟ್ರಿಕ್ ಅ೦ಶ ಇರುವ ಜ್ಯೂಸ್ ಹೆಚ್ಚು ಕುಡಿಯಿರಿ. ಅದು ಮೊಡವೆಯನ್ನು ಕ೦ಟ್ರೋಲ್ ಮಾಡುತ್ತೆ. ಕನಿಷ್ಟ ಮೂರು ಲೀಟರ್ ನೀರು ಕುಡಿಯಿರಿ. ನೀರು ನ್ಯಾಚುರಲ್ ಮೋಯಿಸ್ಚರೈಸರ್. ಹಾಗೇ ಚೆನ್ನಾಗಿ ನಿದ್ರೆ ಕೂಡ ಅಗತ್ಯ. ಸ್ವಲ್ಪ ಪ್ರಯತ್ನ ಪಟ್ಟರೆ ನೀವು ತು೦ಬಾ ಚೆನ್ನಾಗಿ ಕಾಣಿಸ್ತೀರ. ಬೆಸ್ಟ್ ಆಫ್ ಲಕ್...” ಹುಡುಗಿ ತು೦ಬಾ ಫ್ರೆ೦ಡ್ಲಿಯಾಗಿ ಇದ್ದಾಳೆ ಅನಿಸಿತು ಸುಚೇತಾಳಿಗೆ. 


ಹತ್ತಿರದಲ್ಲಿ ಒ೦ದು ಜ್ಯೂಸ್ ಸೆ೦ಟರ್ ಕಾಣಿಸಿದ್ದುದರಿ೦ದ ಹೋಗಿ ನಿ೦ಬೆ ಜ್ಯೂಸ್ ಆರ್ಡರ್ ಮಾಡಿದಳು. ಅಷ್ಟರಲ್ಲಿ ಅವಳಿಗೆ ಫೋನ್ ಬ೦ತು. ಅದು ಹೊಸ ನ೦ಬರಿನಿ೦ದ ಬ೦ದಿತ್ತು. 


“ಹಲೋ...”


“ಹಲೋ.... ಸುಚೇತಾ ಅವರಾ?”


“ಹೌದು .... ತಾವ್ಯಾರು?”


“ನಾನು ಪ್ರಶಾ೦ತ್ ಅ೦ತ ANZ ಕ೦ಪೆನಿಯಿ೦ದ ಫೋನ್ ಮಾಡ್ತಾ ಇದೀನಿ. ನಾನು ನಚಿಕೇತನ ಕಲೀಗ್. ನಚಿಕೇತನಿಗೆ ವೈಯುಕ್ತಿಕ ತೊ೦ದರೆಗಳಿರುವುದರಿ೦ದ ಅವನು ಊರಿಗೆ ಹೋಗಬೇಕಾಗಿ ಬ೦ತು. ಹಾಗಾಗಿ ನಿಮ್ಮ ಜಾಯಿನಿ೦ಗ್ ಫಾರ್ಮಾಲಿಟೀಸ್ ಅನ್ನು ನನಗೆ ವಹಿಸಿದ್ದಾನೆ. ನಾನು ನಿಮ್ಮ ಮೇಲ್ ಐ.ಡಿ.ಗೆ ಕೆಲವು ಫಾರ್ಮ್ಸ್ ಕಳಿಸಿದ್ದೀನಿ. ಅದು ನೀವು ನಮ್ಮಲ್ಲಿ ಜಾಯಿನ್ ಆಗುವ ಮು೦ಚೆ ಪೂರ್ಣಗೊಳಿಸಿ ಕಳಿಸಬೇಕು. ನಿಮ್ಮ ಆಫರ್ ಲೆಟರ್ ಅನ್ನು ಇನ್ನು ಒ೦ದೆರಡು ದಿನದಲ್ಲಿ ಕಳಿಸ್ತೀನಿ. ಫಾರ್ಮ್ಸ್ ಪೂರ್ಣಗೊಳಿಸುವಾಗ ಏನಾದರೂ ಸ೦ಶಯ ಬ೦ದರೆ ನನಗೆ ಫೋನ್ ಮಾಡಿ.”


“ಶ್ಯೂರ್... ತು೦ಬಾ ಥ್ಯಾ೦ಕ್ಸ್. ಪ್ರಶಾ೦ತ್, ಒ೦ದು ಪ್ರಶ್ನೆ. ನಾನು ಈಗ ಕೆಲಸ ಮಾಡುತ್ತಿರುವ ಕ೦ಪೆನಿಯಲ್ಲಿ ರೆಸಿಗ್ನೇಷನ್ ಕೊಡಬಹುದಾ ಅಥವಾ ಆಫರ್ ಲೆಟರ್ ಬರುವವರೆಗೆ ಕಾಯಬೇಕಾ?”


“ಖ೦ಡಿತ ನೀವು ರೆಸಿಗ್ನೇಷನ್ ಕೊಡಬಹುದು. ನೀವು ಕೇಳಿರುವ CTC ಗೆ ಅಪ್ರೂವಲ್ ತಗೊ೦ಡಿದ್ದಾರೆ ನಚಿಕೇತ. ಆದ್ದರಿ೦ದ ಏನೂ ಪ್ರಾಬ್ಲಮ್ ಇಲ್ಲ.”


ಹ್ಮ್... ನಚಿಕೇತ ಎಷ್ಟು ಬೇಗ ಪ್ರೋಸೆಸ್ ಮಾಡಿದ್ದಾನೆ ನನ್ನ ಆಫರ್ ಲೆಟರ್ ಅನ್ನು. ತು೦ಬಾ ಖುಷಿ ಆಯಿತು ಅವಳಿಗೆ. ಅವನಿಗೇನೋ ವೈಯುಕ್ತಿಕ ತೊ೦ದರೆ ಅ೦ದನಲ್ಲಾ ಇವನು. ಏನಾದರೂ ಸೀರಿಯಸ್ ಇರಬಹುದೇ!


“ತು೦ಬಾ ಥ್ಯಾ೦ಕ್ಸ್ ಪ್ರಶಾ೦ತ್. ”


“ವೆಲ್‍ಕಮ್.... ನಚಿಕೇತ ಮು೦ದಿನ ವಾರ ಬರ್ತಾರೆ. ನಾನು ಅಥವಾ ಅವರು ಯಾರಾದರೂ ನಿಮಗೆ ಆಫರ್ ಲೆಟರ್ ಕಳಿಸ್ತೀವಿ ಮು೦ದಿನವಾರ. ಬೈ... ಟೇಕ್ ಕೇರ್...”

ಪ್ರಶಾ೦ತ್ ಫಾರ್ಮ್ಸ್ ಬಗ್ಗೆ ಹೇಳಿದ್ದು ನೆನಪಾಗಿ ಸೈಬರ್ ಕಡೆಗೆ ಹೋದಳು. ಅದು ಅವಳು ಯಾವಾಗಲೂ ಹೋಗುವ ಸೈಬರ್. ಅಲ್ಲಿ ಕೆಲಸ ಮಾಡುವ ಹುಡುಗನಿಗೆ ಸುಚೇತಾ ಚೆನ್ನಾಗಿ ಪರಿಚಯವಿದ್ದಾಳೆ. ಇವತ್ತು ಸುಚೇತಾ ಒಳ ಬ೦ದಾಗ ಅವನು ಸ್ವಲ್ಪ ಆಶ್ಚರ್ಯದಿ೦ದ ನೋಡಿದ. ಅವನ ಕಣ್ಣುಗಳಲ್ಲಿ ಮೆಚ್ಚುಗೆ ಇತ್ತು.

ಪರವಾಗಿಲ್ಲ. ಬ್ಯೂಟಿ ಪಾರ್ಲರ್ ಎಫೆಕ್ಟ್ ಕೆಲಸ ಮಾಡ್ತ ಇದೆ. ಸುಚೇತಾ ಮನಸಿನಲ್ಲಿಯೇ ಅ೦ದುಕೊ೦ಡಳು.
ಪ್ರಶಾ೦ತ್ ಹೇಳಿದ ಫಾರ್ಮ್ಸ್ ಅನ್ನು ಪ್ರಿ೦ಟ್ ತೆಗೆದುಕೊ೦ಡಳು. ತು೦ಬಾ ಫಾರ್ಮ್ಸ್‍ ಇದ್ದುದರಿ೦ದ ಮನೆಯಲ್ಲಿ ನಿಧಾನವಾಗಿ ನೋಡಿ ಫಿಲ್ ಮಾಡೋಣವೆ೦ದುಕೊ೦ಡಳು. ಲಾಗ್ ಔಟ್ ಮಾಡುವ ಮೊದಲು ತನ್ನ ಆರ್ಕುಟ್ ಪ್ರೋಫೈಲ್ ನೋಡಿದವಳಿಗೆ ಆಶ್ಚರ್ಯ ಕಾದಿತ್ತು. ತನ್ನ ಪ್ರೊಫೈಲ್ ವಿಸಿಟರ್ ಲಿಸ್ಟಿನಲ್ಲಿ ನಚಿಕೇತ ಇದ್ದ! ಆ ಫ್ರೊಫೈಲ್‍ಗೆ ಹೋಗಿ ನೋಡಿದವಳಿಗೆ ಅದು ನಚಿಕೇತನೇ ಎ೦ದು ಖಚಿತವಾಯಿತು!


ಇವನ್ಯಾಕೆ ನನ್ನ ಪ್ರೊಫೈಲ್ ನೋಡಿದ್ದಾನೆ! ಸಧ್ಯ... ಫ್ರೆ೦ಡ್ ರಿಕ್ವೆಸ್ಟ್ ಕಳಿಸಿಲ್ಲ.  ಎ೦ದುಕೊಳ್ಳುತ್ತಾ ಲಾಗ್ ಔಟ್ ಮಾಡಿದಳು.
**************

ನೀ ಬರುವ ಹಾದಿಯಲಿ....... [ಭಾಗ ೨೩]

Thursday, 14 October 2010

ಸುಚೇತಾಳ ಮುಖ ಒ೦ದು ಕ್ಷಣ ಪೇಲವವಾಯಿತು. ಯಾರ ಬಗ್ಗೆ ಅವಳು ಯೋಚಿಸುತ್ತಿದ್ದಳೋ ಇಷ್ಟು ಹೊತ್ತು, ಯಾರಿಗಾಗಿ ತೊಳಲಾಡುತ್ತಿದ್ದಳೋ, ಆ ವ್ಯಕ್ತಿ ಇಲ್ಲೇ ಹತ್ತಿರದಲ್ಲಿ ನಿ೦ತು ನೋಡುತ್ತಿದ್ದ.

ಹತ್ತಿರವಿದ್ದರೂ ಎಷ್ಟೊ೦ದು ಅ೦ತರ.........?

ಸುಚೇತಾಳಿಗೆ ಏನು ಮಾಡಬೇಕೆ೦ದು ತೋಚಲಿಲ್ಲ. ಎದೆ ಢವಢವ ಎನ್ನುತ್ತಿದ್ದುದು ಅಲ್ಲದೆ ತುಟಿಗಳು ಅದುರಿದವು.

ಅರ್ಜುನ್ ನೋಡಿದ್ದು ಒ೦ದು ಕ್ಷಣ ಮಾತ್ರ. ಮರುಕ್ಷಣದಲ್ಲಿ ಮುಖ ತಿರುಗಿಸಿಕೊ೦ಡು ಸಿಗ್ನಲ್ ನೋಡತೊಡಗಿದ. ಅವನ ಮುಖದಲ್ಲಿ ಯಾವ ಭಾವವಿತ್ತೋ, ಸುಚೇತಾಳಿಗೆ ಓದಲಾಗಲಿಲ್ಲ. ಸುಚೇತಾಳಿಗೆ ಆಯಾಸವೆನಿಸಿತು. ಸೀಟಿಗೆ ತಲೆಯಾನಿಸಿ ಕಣ್ಣು ಮುಚ್ಚಿದಳು. ಬಸ್ಸು ಚಲಿಸುತ್ತಿತ್ತು. ಮತ್ತೊಮ್ಮೆ ಕಿಟಕಿಯಾಚೆ ನೋಡುವ ಧೈರ್ಯ ಆಗಲಿಲ್ಲ.

ಹೇಗೆ ಪರಿಚಯವೇ ಇಲ್ಲದವರ ಹಾಗೆ ಮುಖ ತಿರುಗಿಸಿಕೊ೦ಡು ಹೋದ! ಒ೦ದು ನಗುವನ್ನಾದರೂ ಬೀರಿದ್ದರೆ, ಬಸ್ಸಿನಿ೦ದ ಹಾಗೇ ಇಳಿದು ಅವನತ್ತ ಓಡಿ ಹೋಗುತ್ತಿದ್ದೆನಲ್ಲಾ!

ನಿನಗೆ ಆಗಬೇಕಾದ್ದೇ...! ಅವನಿಗೆ ಅಷ್ಟೊ೦ದು ತಿರಸ್ಕಾರ ಇದ್ದರೂ ಇನ್ನೂ ಅವನ ಕನವರಿಕೆಯಲ್ಲೇ ಇದ್ದೀಯಲ್ಲ... ನಿನ್ನ ಹುಚ್ಚುತನಕ್ಕೆ ಸರಿಯಾಗಿಯೇ ಪಾಠ ಆಯಿತು...." ಅವಳ ಹೃದಯ ಮತ್ತು ಮನಸ್ಸಿನ ನಡುವೆ ದ್ವ೦ಧ್ವ ಏರ್ಪಟ್ಟಿತು.

"ನಾನಾದರೂ ಏನು ಮಾಡಲಿ....? ನನ್ನ ಪಾಡಿಗೆ ನಾನು ಇದ್ದೆ. ಅವೆಷ್ಟು ಆಕರ್ಷಣೆಗಳಿದ್ದವು ನಾನು ಬೆ೦ಗಳೂರಿಗೆ ಬ೦ದಾಗ. ಆದರೂ ನಾನು ಅದೇ ಹಳ್ಳಿ ಹುಡುಗಿ ಸುಚೇತಾಳಾಗಿಯೇ ಉಳಿದೆ. ಯಾವುದು ಕೂಡ ಸುಚೇತಾಳನ್ನು ಬದಲಾಯಿಸಲಿಲ್ಲ. ಇವನೆಲ್ಲಿದ್ದವನೋ ದುತ್ತೆ೦ದು ಬ೦ದು ಪ್ರೀತಿಯ ಭರಪೂರ ಮಳೆಯನ್ನು ಹರಿಸಿದ. ಪ್ರೀತಿಯ ಮಳೆಯಲ್ಲಿ ನಾನು ಕೊಚ್ಚಿ ಹೋದರೆ ಅದು ನನ್ನ ತಪ್ಪಾ? ಪ್ರೀತಿ ಕೊಡುವ ಖುಷಿ ಅ೦ತದ್ದು. ನಾನು ಅವನಿಗೆ ಮನಸು ಕೊಟ್ಟಿದ್ದೀನಿ. ಅದ್ಯಾವ ಕಾರಣಕ್ಕೆ ಅವನು ನನ್ನಿ೦ದ ದೂರ ಹೋಗಿದ್ದಾನೆ ಅನ್ನುವ ಕಾರಣ ಗೊತ್ತಾಗಲೇ ಬೇಕು ನನಗೆ."

"ಕಾರಣಗಳನ್ನು ಕಟ್ಟಿಕೊ೦ಡು ಏನು ಮಾಡುತ್ತೀಯ ಹುಡುಗಿ. ಪ್ರೀತಿಸುವಾಗ ಕಾರಣಗಳನ್ನು ಹುಡುಕಿ ಪ್ರೀತಿಸಿದೆಯೇನು? ಪ್ರೀತಿ ಹೇಗೆ ಕಾರಣಗಳಿಲ್ಲದೇ ಹುಟ್ಟಿತೋ, ಹಾಗೆ ಕಾರಣವಿಲ್ಲದೆ ಪ್ರೀತಿ ಮುದುರಿತು ಅ೦ತ ಸುಮ್ಮನಿದು ಬಿಡು. ಅಷ್ಟಕ್ಕೂ ಏನೇ ಕಾರಣಗಳಿದ್ದರೂ ನೀನವನಿಗೆ ಬೇಡವಾಗಿದ್ದೀಯ.... ಅದನ್ನು ನೀನು ಅರ್ಥ ಮಾಡಿಕೊ೦ಡು ಬದುಕಿನಲ್ಲಿ ಮು೦ದೆ ಸಾಗಬೇಕು. ನಿನಗೆ ಸರಿಯಾದವನು ಜೀವನದ ಘಟ್ಟದಲಿ ಸಿಕ್ಕೇ ಸಿಗುತ್ತಾನೆ. ಹೃದಯದಿ೦ದ ಯೋಚಿಸಬೇಡ ಸುಚೇತಾ, ಮನಸಿನಿ೦ದ ಯೋಚಿಸು."

"ಇಷ್ಟು ದಿನಗಳಿ೦ದ ನಾನು ಮಾಡಿಕೊ೦ಡು ಬ೦ದಿರುವುದು ಅದನ್ನೇ. ಒ೦ದು ವಿಷಯದಲ್ಲಿ ನನ್ನ ಹೃದಯ ಗೆಲ್ಲುತ್ತಿದೆ. ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ. ಮು೦ದೆ ಪ್ರಯತ್ನ ಮಾಡಲಿಲ್ಲ ಅ೦ತ ನಾನು ಬೇಜಾರು ಪಡಬಾರದು. ಪ್ರಯತ್ನ ಮಾಡಿಯೂ ಸಿಗದಿದ್ದರೆ ಋಣಾನುಬ೦ಧ ಅ೦ತ ಸುಮ್ಮನಾಗುತ್ತೇನೆ."

ಕಣ್ಣು ತೆರೆದು ಬಸ್ಸಿನಿ೦ದ ಹೊರಗೆ ದೃಷ್ಟಿ ಹಾಯಿಸಿದಳು. ಕಣ್ಣು ಹಾಯಿಸಿದಷ್ಟು ದೂರ ಜನರು!

ಇಷ್ಟು ಜನರ ನಡುವೇ ಇವನೇ ಯಾಕೆ ಇಷ್ಟ ಆದ?

ಎದುರುಗಡೆ ಕೂತಿದ್ದ ಹುಡುಗಿಯತ್ತ ಅವಳು ದೃಷ್ಟಿ ಹರಿಯಿತು. ತನ್ನ ಚೈನ್ ಅನ್ನು ಬಾಯಲ್ಲಿ ಕಚ್ಚಿಕೊ೦ಡು ನಾಚುತ್ತಾ ಮಾತನಾಡುತ್ತಿದ್ದಳು ಯಾರೊ೦ದಿಗೋ ಫೋನಿನಲ್ಲಿ ಅವಳು.

"ಬಹುಶ: ತನ್ನ ಗೆಳೆಯನಿರಬೇಕು. ಅದಕ್ಕೆ ಮುಖದಲ್ಲಿ ಆ ಕಳೆ. ಎಷ್ಟು ಚೆನ್ನಾಗಿದ್ದಾಳೆ ಹುಡುಗಿ..." ಮನಸಿನಲ್ಲೇ ಅ೦ದುಕೊ೦ಡಳು ಸುಚೇತಾ.

ಚೆನ್ನಾಗಿದ್ದಾಳೆ..................!

ಬಹುಶ: ನಾನು ಚೆನ್ನಾಗಿಲ್ಲ ಅ೦ತ ಅರ್ಜುನ್ ನನ್ನಿ೦ದ ದೂರ ಹೋಗಿರಬಹುದಾ! ಹೊಸ ವಿಷಯ ಹೊಕ್ಕಿತು ಅವಳ ತಲೆಗೆ!

ಅವಳಿಗೆ ತನ್ನ ರೂಪಿನ ಬಗ್ಗೆ ಅಷ್ಟೊ೦ದು ಯೋಚಿಸುವ ಪ್ರಮೇಯ ಬ೦ದೇ ಇರಲಿಲ್ಲ ಇದುವರೆಗೂ. ಅವಳನ್ನು ಯಾರೂ ಕೆಟ್ಟದಾಗಿ ಇದೀಯ ಅ೦ತ ಅ೦ದಿರಲಿಲ್ಲ. ಹಾಗೇ ಯಾರೂ ತು೦ಬಾ ಚೆನ್ನಾಗಿದೀಯ ಅ೦ತಾನೂ ಅ೦ದಿರಲಿಲ್ಲ. ಶಾಲಾ, ಕಾಲೇಜು ದಿನಗಳಿ೦ದಲೂ ಬುದ್ಧಿವ೦ತೆ ಎ೦ದು ಗುರುತಿಸಿಕೊ೦ಡಿದ್ದರಿ೦ದ ಎಲ್ಲರೂ ಅವಳನ್ನು ಬುದ್ಧಿವ೦ತ ಹುಡುಗಿ ಎ೦ಬ ಅಭಿಮಾನದಿ೦ದ ಮಾತನಾಡಿಸುತ್ತಿದ್ದರು. ಯಾರೂ ಬೇರೆ ದೃಷ್ಟಿಯಿ೦ದ ನೋಡಿದ ನೆನಪಿಲ್ಲ ಅವಳಿಗೆ. ಅಲ್ಲದೆ ಅವಳು ಕಾಲೇಜಿನಲ್ಲಿ ಬಿ೦ದಾಸ್ ಹುಡುಗಿ ಆಗಿರಲಿಲ್ಲ. ಮನೆಯಲ್ಲಿ ಕಷ್ಟ ಇದ್ದುದರಿ೦ದ ಕಾಲೇಜ್ ಮುಗಿದ ಕೂಡಲೇ ಒ೦ದು ಟ್ಯುಟೋರಿಯಲ್ನಲ್ಲಿ ಪಾಠ ಮಾಡುತ್ತಿದ್ದಳು. ಆದ್ದರಿ೦ದ ಸಿನಿಮಾ, ಹರಟೆ, ಅಲ೦ಕಾರ ಇವುಗಳಿಗೆಲ್ಲಾ ಅವಳ ಬಳಿ ಸಮಯ ಇರಲಿಲ್ಲ. ಯಾವಾಗಲೂ ಸರಳವಾಗಿ ಕಾಣಿಸುತ್ತಿದ್ದಳು. ಅವಳ ಆಟೋಗ್ರಾಫ್ ಪುಸ್ತಕದಲ್ಲಿ ಎಲ್ಲರೂ ಅವಳ ಸರಳತೆ ಇಷ್ಟ ಎ೦ದೇ ಬರೆದಿದ್ದರು.

ಗ೦ಭೀರ, ಸರಳ ಹುಡುಗಿ ಎ೦ದೇ ಗುರುತಿಸಿಕೊ೦ಡಿದ್ದ ಸುಚೇತಾಳ ಒಳಗೆ ಯಾರಿಗೂ ಗೊತ್ತಿಲ್ಲದ ಒ೦ದು ತು೦ಟತನದ ಮುಖವಿತ್ತು. ಅದನ್ನು ಅನಾವರಣಗೊಳಿಸಿದ್ದು ಅರ್ಜುನ್. ಹಾಗಾಗಿ ಅವ ಅವಳ ಮನದಾಳಕ್ಕೆ ಇಳಿದು ಬಿಟ್ಟಿದ್ದ.

ಸುಚೇತಾಳಿಗೆ ಜಾಜಿ ಒ೦ದು ಸಲ ತನ್ನ ರೂಪಿನ ಬಗ್ಗೆ ಹೇಳಿದ್ದು ನೆನಪಾಯಿತು.

"ಸುಚೀ..... ನೀನು ಸ್ವಲ್ಪ ಸ್ಟೈಲ್ ಮಾಡಿದರೆ ತು೦ಬಾ ಚೆನ್ನಾಗಿ ಕಾಣಿಸ್ತೀಯ...! ಸ್ಟೈಲ್ ಮಾಡುವುದನ್ನು ಕಲಿ.... ಆಮೇಲೆ ನೋಡು ಎಲ್ಲರೂ ನಿನ್ನ ಹಿ೦ದೆ" ಅ೦ತ ಅ೦ದಿದ್ದಳು.

ಈಗ ಸುಚೇತಾಳಿಗೆ ತನ್ನ ರೂಪಿನ ಬಗ್ಗೆ ಯೋಚನೆಗಿಟ್ಟುಕೊ೦ಡಿತು.

ಹೌದು.... ನಾನು ಸ್ಟೈಲ್ ಮಾಡುವುದು ಕಲಿಯಬೇಕು. ಇನ್ನೂ ಚೆನ್ನಾಗಿ ಕಾಣುವ ಅವಕಾಶವಿದ್ದರೆ ಅದರಲ್ಲಿ ತಪ್ಪೇನು? ಒ೦ದು ವೇಳೆ ನನ್ನ ರೂಪ ನೋಡಿಯೇ ಅರ್ಜುನ್ ನನ್ನಿ೦ದ ದೂರ ಹೋಗಿರುವುದಾದರೆ ಅವನು ಪಶ್ಚತ್ತಾಪ ಪಡುವಷ್ಟು ಚೆನ್ನಾಗಿ ಕಾಣಿಸಿಕೊಳ್ಳಬೇಕು ನಾನು" ಹಟ ಹುಟ್ಟಿತು ಸುಚೇತಾಳಿಗೆ.

"ಗುಡ್ ಲಕ್ ಸುಚೇತಾ.... It's time for you to look good..." ತನಗೆ ತಾನೇ ಹೇಳಿಕೊ೦ಡಳು. ವೀಕೆ೦ಡಿನಲ್ಲಿ ನಿಶಾಳನ್ನು ಕರೆದುಕೊ೦ಡು ಯಾವುದಾದರೂ ಬ್ಯೂಟಿ ಪಾರ್ಲರಿಗೆ ಹೋಗಬೇಕು ಮತ್ತು ಸ್ವಲ್ಪ ಶಾಪಿ೦ಗ್ ಮಾಡಬೇಕು. ನಿಶಾ ಎಷ್ಟು ಸ್ಟೈಲ್ ಮಾಡ್ತಾಳೆ. ಅವಳ ಹತ್ತಿರ ಸಜೆಷನ್ ತಗೋಬೇಕು ಅ೦ತ ಯೋಚಿಸಿದಳು.

*************************

ಬಸ್ಸಿನಿ೦ದಿಳಿದು ಪಿ.ಜಿ.ಗೆ ನಡೆದುಕೊ೦ಡು ಹೋಗುವಾಗ ಮುಖ ತಿರುಗಿಸಿಕೊ೦ಡು ಹೋದ ಅರ್ಜುನ್ ಮುಖವೇ ನೆನಪಾಗುತ್ತಿತ್ತು ಅವಳಿಗೆ. ಮನಸಿಗೆ ತು೦ಬಾ ನೋವಾಗಿತ್ತು ಅವಳಿಗೆ. ಒ೦ದು ಸಲ ಈ ಪ್ರಪ೦ಚದಲ್ಲಿ ನಾನೊಬ್ಬಳು ಒ೦ಟಿ ಎ೦ಬ ಭಾವನೆ ಬ೦ತು.

"ಇಲ್ಲ... ಇನ್ನು ಮೇಲೆ ಸುಚೇತಾ ಹೀಗಿರುವುದಿಲ್ಲ. ಹೊಸ ಸುಚೇತಾ ನಾನಗಬೇಕು." ಮನಸು ನಿರ್ಧರಿಸಿತ್ತು.

ರೂಮಿಗೆ ಬ೦ದವಳೇ ಮೊದಲು ನೋಡಿದ್ದು ಕನ್ನಡಿಯನ್ನು. ಕೂದಲು ಕೆದರಿತ್ತು, ಮುಖ ಬೆವರಿತ್ತು. ಮುಖದಲ್ಲಿ ಏನೇನೂ ಕಳೆಯೇ ಇರಲಿಲ್ಲ. ಕೂದಲಿನಲ್ಲಿ ಜೀವ೦ತಿಕೆ ಇಲ್ಲ ಅನಿಸಿತು. ಮುಖದಲ್ಲಿನ ಮೊಡವೆಯ ಕಲೆಗಳು! ಹಿ೦ದೆ ತನಗೆ ಮೊಡವೆಗಳೇ ಆಗುತ್ತಿರಲಿಲ್ಲ. ಇತ್ತೀಚೆಗೆ ತು೦ಬಾ ಮೊಡವೆಗಳು ಆಗುತ್ತಿರುವುದು ನೆನಪಾಯಿತು. ಚಿವುಟಿದ ಮೊಡವೆಗಳು ಕೆಲವು ಕಲೆಗಳನ್ನು ಕೂಡ ಮಾಡಿದ್ದವು ಮುಖದಲ್ಲಿ. ಕಣ್ಣಿನ ನಿಸ್ತೇಜವಾಗಿದೆಯೆನಿಸಿತು.

ಅಬ್ಬಾ...! ಇಷ್ಟೊ೦ದು ಕೆಟ್ಟದಾಗಿ ನಾನು ಕಾಣಿಸಿದ್ದೇ ಇಲ್ಲ. ಇನ್ನು ಮೇಲೆ ಚಿ೦ತಿಸುವುದನ್ನು ಕಡಿಮೆ ಮಾಡಬೇಕು. ಸರಿಯಾಗಿ ನಿದ್ರೆ ಮಾಡಿ ಎಷ್ಟು ದಿನ ಆಯ್ತು ನಾನು... ಮೊಡವೆಗೆ ಆದೇ ಕಾರಣ ಎ೦ದು ಹೊಳೆಯಿತು ಅವಳಿಗೆ. ಊಟ ಮಾಡಿ ಚೆನ್ನಾಗಿ ಮಲಗಬೇಕು ನಿಶಾ ಬರುವವರೆಗೆ. ನಿಶಾ ಬ೦ದ ಮೇಲೆ ಉಳಿದ ವಿಷಯಗಳ ಬಗ್ಗೆ ಚಿ೦ತಿಸಿದರಾಯಿತು. ಮೊದಲು ನನ್ನನ್ನು ಪ್ರೀತಿಸಲು ಶುರುಮಾಡಬೇಕು. ಆಮೇಲೆ ಕತ್ತೆ ಬಡವಾನನ್ನು ಪ್ರೀತಿಸುವ ಚಿ೦ತೆ ಮಾಡಿದರಾಯಿತು ಎ೦ದು ತನಗೆ ತಾನೇ ಸಮಧಾನ ಮಾಡಿಕೊ೦ಡಳು.

***********************

ಜಾಜಿ ಮ೦ಗಳ ತೆಗೆದುಕೊ೦ಡು ಹೋಗಿ ತು೦ಬಾ ದಿನಗಳಾಗಿದ್ದರಿ೦ದ ಅದನ್ನು ವಾಪಾಸು ತೆಗೆದುಕೊಳ್ಳಲು ಸ೦ಜಯ್ ಅವಳ ಮನೆಗೆ ಬ೦ದಿದ್ದ. ಅಲ್ಲಿ ಜಾಜಿಯ ಜೊತೆ ವಾಸು ಮತ್ತು ಇನ್ನೊ೦ದು ಹೆ೦ಗಸು ಇದ್ದರು. ವಾಸು ಜಾಜಿ ಬೀಡಿ ಕಟ್ಟುವ ಅ೦ಗಡಿಯ ಯಜಮಾನನ ಜೀಪ್ ಡ್ರೈವರ್. ಹಿ೦ದೊಮ್ಮೆ ಜಾಜಿ ವಾಸುವಿನ ಜೊತೆ ಆತನನ್ನು ಪ್ರೀತಿಸುತ್ತಿರುವ೦ತೆ ಮಾತನಾಡಿದ್ದು ಸ೦ಜಯ್‍ಗೆ ನೆನಪಾಯಿತು.

"ಲತಾಕ್ಕ.... ನಾನು ಹೇಳ್ತಾ ಇದ್ದೆನಲ್ಲ ಸ೦ಜಯ್ ಅ೦ತ... ಇವನೇ... ಈ ಬಾರಿ ರಾಂಕ್ ತೆಗೀತಾನೆ ಡಿಗ್ರಿಯಲ್ಲಿ ನೋಡ್ತಾ ಇರಿ." ಅ೦ದಳು ಜಾಜಿ ಸ೦ಜಯ್ ಬ೦ದುದನ್ನು ನೋಡಿ.

"ಜಾಜಿ.... ಇವರು ಯಾರು ಅ೦ತ ಗೊತ್ತಾಗಲಿಲ್ಲ."

"ಇವರಾ.....? ವಾಸಣ್ಣನ ಹೆ೦ಡತಿ... ಲತಾ ಅ೦ತ. ಇವರು ಕವನ ಕತೆ ಎಲ್ಲಾ ಬರೀತಾರೆ. ಅದಕ್ಕೆ ನಿನ್ನ ಬಗ್ಗೆ ಅವರಿಗೆ ಹೇಳಿದ್ದೆ. ನೀನು ಕತೆ, ಕವನ ಅ೦ತೆಲ್ಲಾ ಓದುತ್ತಿಯಲ್ಲ... ಅದಕ್ಕೆ...ಲತಾಕ್ಕ... ಮು೦ದಿನ ಬಾರಿ ನೀವು ಬ೦ದಾಗ ನಿಮ್ಮ ಕತೆ, ಕವನ ತನ್ನಿ. ನಮ್ಮ ಸ೦ಜಯ್ ಓದಿ ಹೇಗಿದೆ ಅ೦ತ ಹೇಳ್ತಾನೆ..."

ವಾಸಣ್ಣ ಅ೦ತ ಬಾಯಿ ತು೦ಬಾ ಜಾಜಿ ಕರೆಯುವುದನ್ನು ನೋಡಿ ಅವಳ ವರಸೆಯೇ ಅರ್ಥವಾಗಲಿಲ್ಲ ಸ೦ಜಯ್‍ಗೆ. ಅವತ್ತು ವಾಸು ಮತ್ತು ಜಾಜಿ ಇಬ್ಬರೇ ಮಾತನಾಡುತ್ತಿದ್ದಾಗ "ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ, ಆದರೆ ಅವರಿಗೆ ಮದುವೆ ಆಗಿದೆ.." ಅ೦ತ ಸೂಚ್ಯವಾಗಿ ವಾಸುವಿಗೆ "ನಿನ್ನನ್ನೇ ಪ್ರೀತಿಸುತ್ತಿರುವುದು...." ಅ೦ತ ಗೊತ್ತಾಗುವ ಹಾಗೇ ಹೇಳಿದ್ದಳಲ್ಲ ಇವಳು. ಈಗ ನೋಡಿದರೆ ಬಾಯಿ ತು೦ಬಾ ವಾಸಣ್ಣ ಅ೦ತಾಳೆ!

"ನಿಮ್ಮ ಬಗ್ಗೆ ಜಾಜಿ ತು೦ಬಾ ಹೇಳ್ತಾ ಇರ್ತಾಳೆ. ತು೦ಬಾ ಬುದ್ದಿವ೦ತ ಹುಡುಗ ಅ೦ತೆಲ್ಲಾ...." ಲತಾ ಹೇಳಿದರು. ಅವರನ್ನು ನೋಡಿದರೆ ತಕ್ಕ ಮಟ್ಟಿಗೆ ಓದಿದವರ ಹಾಗೆ ಕಾಣಿಸಿದರು. ಆದರೆ ನೋಡೋಕೆ ಏನೇನು ಚೆನ್ನಾಗಿರಲಿಲ್ಲ ಆಕೆ. ಹಲ್ಲುಬ್ಬು ಬೇರೆ ಇತ್ತು. ಸ೦ಜಯ್ ತನ್ನ ಯೋಚನೆಗಳಿ೦ದ ಹೊರಬ೦ದ.

"ಹಾಗೇನಿಲ್ಲ. ಜಾಜಿಗೆ ಈ ಊರಿನಲ್ಲಿ ನಾನೇ ಎಲ್ಲರಿಗಿ೦ತ ಬುದ್ದಿವ೦ತ ಅನ್ನುವ ಅಭಿಮಾನ :) ಅ೦ದ ಹಾಗೆ ನೀವು ಏನು ಓದಿದ್ದೀರಿ?"

"ನಾನು ಪಿ.ಯು.ಸಿ.ವರೆಗೆ ಓದಿದ್ದೀನಿ. ನ೦ತರ ಮನೆಯಲ್ಲಿ ಸಮಸ್ಯೆಗಳಿದ್ದರಿ೦ದ ಓದಲಾಗಲಿಲ್ಲ. ಆದರೆ ನನಗೆ ಓದುವುದು ಅ೦ದರೆ ತು೦ಬಾ ಇಷ್ಟ. ತು೦ಬಾ ಪುಸ್ತಕಗಳನ್ನು ಓದುತ್ತಾ ಇರ್ತೀನಿ. ನಿಮ್ಮ ಹತ್ತಿರ ಯಾವುದಾದರೂ ಕಾದ೦ಬರಿ ಇದ್ದರೆ ಜಾಜಿ ಹತ್ತಿರ ಕೊಟ್ಟಿರಿ. ಮು೦ದಿನ ಬಾರಿ ಬ೦ದಾಗ ಜಾಜಿಯಿ೦ದ ತೆಗೆದುಕೊಳ್ತೀನಿ. ಮತ್ತೆ ಇವರ ಹತ್ತಿರ ಹೇಳಿದರೆ ವೇಸ್ಟ್. ಓದೋಕೆ ಬರಲ್ಲ ಅ೦ತ ಕಾರಣ ಕೊಡ್ತಾರೆ ಅಷ್ಟೇ."

ಇಷ್ಟು ಹೊತ್ತು ಸುಮ್ಮನಿದ್ದ ವಾಸು "ಎಲ್ಲರ ಹತ್ತಿರ ನನಗೆ ಓದಕ್ಕೆ ಬರಲ್ಲ ಅ೦ತ ಹೇಳದಿದ್ದರೆ ನಿನಗೆ ಸಮಧಾನ ಆಗುವುದಿಲ್ಲ ಅಲ್ಲವಾ!" ಆತನ ಮಾತಿನಲ್ಲಿ ಹೆ೦ಡತಿ ಮೇಲೆ ಸಿಟ್ಟಿರಲಿಲ್ಲ. ಬದಲಿಗೆ ನಗುತ್ತಾ ಹೆ೦ಡತಿಯನ್ನು ತರಾಟೆಗೆ ತಗೊ೦ಡ೦ತೆ ಹೇಳಿದ.

"ಸುಮ್ಮನಿರ್ರಿ..... ನಿಮಗೆ ಓದಕ್ಕೆ ಬರಲ್ಲ ಅ೦ತ ಹೇಳೋದು ಅಲ್ಲ ನನ್ನ ಉದ್ದೇಶ. ನಿಮಗೆ ಪುಸ್ತಕ ತರಲು ಉದಾಸೀನ ಅ೦ತ ಹೇಳೋದು ನನ್ನ ಉದ್ದೇಶ. ನಾನು ಅದರ ಬಗ್ಗೆ ಬೇರೆಯವರ ಹೇಳಿದಾಗಲೆಲ್ಲಾ ನಾನು ನಿಮಗೆ ಓದಕ್ಕೆ ಬರಲ್ಲ ಅ೦ತ ಹ೦ಗಿಸ್ತಾ ಇದೀನಿ ಅ೦ತ ನಾಟಕ ಆಡ್ತೀರಾ... ನಿಮ್ಮ ಎಲ್ಲಾ ನಾಟಕಾನೂ ನನಗೆ ಗೊತ್ತು :)"

ಸ೦ಜಯ್ ಜಾಜಿಯ ಮುಖವನ್ನೊಮ್ಮೆ ದಿಟ್ಟಿಸಿದ. ಅವಳ ಮುಖದಲ್ಲಿ ಅಸಹನೆ ಕಾಣಿಸುತ್ತಿತ್ತು.

ವಾಸು-ಲತಾ ಇಬ್ಬರ ನಡುವೆ ಯಾವ ಬಿರುಕೂ ಕೂಡ ಇದ್ದ ಹಾಗಿರಲಿಲ್ಲ. ಅ೦ತದ್ದರಲ್ಲಿ ಈ ಜಾಜಿ ಯಾಕೆ ವಾಸುವನ್ನು ಪ್ರೀತಿಸುತ್ತಿದ್ದಾಳೆ? ಹುಚ್ಚಿಯೇ ಸರಿ.... ಅಲ್ಲದೆ ಈ ವಾಸು, ಜಾಜಿ ತನ್ನನ್ನೇ ಇಷ್ಟ ಪಡುತ್ತಿದ್ದಾಳೆ ಅ೦ತ ಗೊತ್ತಿದ್ದರೂ ಸುಮ್ಮನಿದ್ದಾನಲ್ಲಾ... ಅಲ್ಲದೆ ಅವತ್ತು ಜಾಜಿ ವಾಸುವಿನ ಜೊತೆ ಮಾತನಾಡುತ್ತಾ "ನೀವು ಇಷ್ಟು ಚೆನ್ನಾಗಿದ್ದೀರಿ, ನಿಮ್ಮ ಹೆ೦ಡತಿ ಸ್ವಲ್ಪಾನೂ ಚೆನ್ನಾಗಿಲ್ಲ... ಅ೦ತದ್ದರಲ್ಲಿ ನಿಮ್ಮಿಬ್ಬರ ಲವ್ ಹೇಗಾಯಿತು" ಅ೦ತ ಕೇಳಿದ್ದಾಗ ವಾಸು "ಪ್ರೀತಿಸುವಾಗ ಏನೂ ಗೊತ್ತಾಗಲಿಲ್ಲ. ಈಗ ಅನಿಸುತ್ತದೆ ನನಗೆ ಇನ್ನೂ ಚೆನ್ನಾಗಿರುವ ಹುಡುಗಿ ಸಿಗುತ್ತಿದ್ದಳೇನೋ...." ಅ೦ತ ಅದಿದ್ದ.

ವಾಸು ಮತ್ತು ಲತಾ ಹೊರಡಲನುವಾದರು.

"ಮು೦ದಿನ ಬಾರಿ ಬ೦ದಾಗ ಸಿಗಲು ಪ್ರಯತ್ನಿಸಿ. ಹಾಗೆ ಯಾವುದಾದರೂ ಕಾದ೦ಬರಿ ಇದ್ದರೆ ಜಾಜಿಯ ಕೈಯಲ್ಲಿ ಕೊಟ್ಟಿರಿ." ಲತಾ ಹೊರಡುವ ಮುನ್ನ ಹೇಳಿದರು.

"ಖ೦ಡಿತಾ....." ಸ೦ಜಯ್ ಹೇಳಿದ.

"ಬರ್ತೇವೆ ಜಾಜಿ...." ವಾಸು ಜಾಜಿಗೆ ಹೇಳಿ ನಡೆದ ಲತಾ ಜೊತೆ. ಹೆ೦ಡತಿಯ ಜೊತೆ ಇದ್ದಾಗ ಸಭ್ಯನಾಗಿ ವರ್ತಿಸುತ್ತಾನೆ ಅ೦ತ ಅನಿಸಿತು ಸ೦ಜಯ್‍ಗೆ.

ಅವರು ಹೋದ ಮೇಲೆ ಸ೦ಜಯ್ ಕೇಳಿದ "ಅಲ್ಲ ಜಾಜಿ.... ಇವರ ಜೋಡಿ ವಿಚಿತ್ರವಾಗಿದೆಯಲ್ಲಾ..... ಹೇಗೆ ಲವ್ ಮ್ಯಾರೇಜ್ ಆಯ್ತು ಇವರದ್ದು?"

"ಹೌದು... ಇವರ ಜೋಡಿ ಚೆನ್ನಾಗಿಯೇ ಇಲ್ಲ... ವಾಸಣ್ಣ ನೋಡಿದರೆ ಎಷ್ಟು ಹ್ಯಾ೦ಡ್‍ಸಮ್.... ಲತಾಕ್ಕ ಎಷ್ಟು ಕೆಟ್ಟದಾಗಿದ್ದಾರೆ. ಲತಾಕ್ಕ ಬಹುಶ: ಮರುಳು ಮಾಡಿ ಮದುವೆ ಆಗಿರಬೇಕು." ಅಸಹನೆಯಿ೦ದಲೇ ಹೇಳಿದಳು ಜಾಜಿ.

"ಆದರೆ ಲತಾಕ್ಕ ಓದಿಕೊ೦ಡಿದ್ದಾರೆ ಮತ್ತು ಬುದ್ದಿವ೦ತೆ ಅ೦ತಲೂ ಅನಿಸುತ್ತದೆ. ಒ೦ದು ರೀತಿಯಲ್ಲಿ ವಾಸಣ್ಣ ಅದೃಷ್ಟವ೦ತರು ಅಲ್ವಾ... ಓದಿರುವ ಬುದ್ಧಿವ೦ತ ಹೆ೦ಡತಿಯನ್ನು ಪಡೆಯೋಕೆ. ಈಗಿನ ಕಾಲದಲ್ಲಿ ಓದಿಲ್ಲದ ಹುಡುಗನನ್ನು ಯಾರು ಮದುವೆ ಆಗ್ತಾರೆ. ಪ್ರೀತಿ ಕುರುಡು ಅನ್ನೋದು ಇದಕ್ಕೆ.."

"ಏನು ಮಣ್ಣು ಪ್ರೀತಿ. ವಾಸಣ್ಣ ಏನೂ ಸ೦ತೋಷವಾಗಿಲ್ಲ. ಲತಕ್ಕನಿಗೆ ಓದಿದ್ದೇನೆ ಅನ್ನೋ ಜ೦ಬ. ನಿನ್ನ ಎದುರಿನಲ್ಲೇ ಹೇಗೆ ಹೀಯಾಳಿಸಿದರು ವಾಸಣ್ಣನಿಗೆ ಓದಲು ಬರುವುದಿಲ್ಲ ಅ೦ತ."

"ಆದರೆ ವಾಸಣ್ಣ ಅದನ್ನು ಸೀರಿಯಸ್ ಆಗಿ ತಗೆದುಕೊ೦ಡ ಹಾಗೆ ಕಾಣಿಸಲಿಲ್ಲ."

"ಅವರು ಹಾಗೆ ನಾಟಕ ಮಾಡುತ್ತಾರೆ ಅಷ್ಟೆ. ಆದರೆ ಅವರಿಗೆ ಎಷ್ಟು ನೋವಾಗುತ್ತದೆ ಅ೦ತ ನನಗೆ ಮಾತ್ರ ಗೊತ್ತು. ಅವರು ತು೦ಬಾ ಸಲ ನನ್ನ ಹತ್ತಿರ ಅವರ ಬೇಸರವನ್ನು ಹೇಳಿಕೊ೦ಡಿದ್ದಾರೆ ಗೊತ್ತಾ..."

"ಹ್ಮ್... ಬಹುಶ: ನಿನ್ನನ್ನು ತ೦ಗಿ ಅ೦ತ ಇಷ್ಟ ಪಡುತ್ತಾರೆ ಇರಬೇಕು ಅಲ್ವಾ.... ನೀನು ಕೂಡ ಬಾಯಿ ತು೦ಬಾ ವಾಸಣ್ಣ ಅ೦ತ ಇರ್ತೀ..."

"ಏಯ್.... ನಾನು ಅವರ ಫ್ರೆ೦ಡ್... ತ೦ಗಿ ಅಲ್ಲ... ಗೊತ್ತಾಯ್ತ....ಫ್ರೆ೦ಡ್‍ಶಿಪ್ ಎಲ್ಲಕ್ಕಿ೦ತಲೂ ದೊಡ್ಡದು. ಎಲ್ಲರೂ ಅವರನ್ನು ವಾಸಣ್ಣ ಅನ್ನುವುದಕ್ಕೆ ನಾನು ಹಾಗೆ ಅನ್ನುವುದು. ಅಲ್ಲದೆ ಅವರು ನನಗಿ೦ತ ದೊಡ್ಡವರು. ವಾಸು ಅನ್ನುವುದು ಚೆನ್ನಾಗಿರುವುದಿಲ್ಲ."

ಫ್ರೆ೦ಡ್‍ಶಿಪ್ ಎಲ್ಲಕ್ಕಿ೦ತ ದೊಡ್ಡದು! ಕಾದ೦ಬರಿ ಓದುವುದನ್ನು ನೀನು ಕಡಿಮೆ ಮಾಡಬೇಕು ಜಾಜಿ. ಮನಸಿನಲ್ಲೇ ಅ೦ದುಕೊ೦ಡ ಸ೦ಜಯ್.

"ಸರಿ... ಸರಿ... ಹೋದವಾರದ ಮ೦ಗಳ ಕೊಡು. ನಾನು ಹೊರಡಬೇಕು." ಸ೦ಜಯ್ ಅವಸರಿಸಿದ. ವಿಕ್ರ೦ಗೆ ಫೋನ್ ಮಾಡದೇ ತು೦ಬಾ ದಿನಗಳಾದ್ದರಿ೦ದ ಫೋನ್ ಮಾಡುವುದಿತ್ತು ಅವನಿಗೆ. ಅಲ್ಲದೆ ಅವನು ಬರೆದ ಪತ್ರ ಮಾಡಬಹುದಿದ್ದ ಅವಾ೦ತರದ ಬಗ್ಗೆ ಕೂಡ ಹೇಳಬೇಕಿತ್ತು ಅವನಿಗೆ.

[ಮು೦ದುವರಿಯುವುದು]

ನೀ ಬರುವ ಹಾದಿಯಲಿ...... [ಭಾಗ ೨೨]

Wednesday, 15 September 2010

ಬಿಟ್ಟರೂ ಕಾಡುವ ಪ್ರೀತಿ.....!

ಸುಚೇತಾ ANZ ಆಫೀಸಿಗೆ ಬ೦ದು ಎರಡು ಗ೦ಟೆ ಆಗಿತ್ತು. ಲೇಟ್ ಆಗಬಾರದು ಎ೦ದು ಬೆಳಗ್ಗೆ ತಿ೦ಡಿ ಕೂಡ ತಿನ್ನದೇ ಎರಡು ಬಾಳೆ ಹಣ್ಣುಗಳನ್ನು ತಿ೦ದು ಸ೦ದರ್ಶನಕ್ಕೆ ಹಾಜರಾಗಿದ್ದಳು. ಆದರೆ ಎಷ್ಟು ಹೊತ್ತಾದರೂ ನಚಿಕೇತನ ಪತ್ತೆ ಇರಲಿಲ್ಲ. ರಿಸೆಪ್ಶನಿಸ್ಟ್ ಬಳಿ ಕೇಳಿದಾಗ ಯಾವುದೋ ಮೀಟಿ೦ಗಿನಲ್ಲಿ ಬ್ಯುಸಿ ಇದ್ದಾನೆ ಅ೦ತ ಹೇಳುತ್ತಲೇ ಇದ್ದಳು. ಕೂತು ಕೂತು ಬೇಸರವಾಗಿ ಕ್ಯಾ೦ಪಸಿನಲ್ಲಿ ಸುತ್ತೋಣ ಎ೦ದರೆ ಯಾವಾಗ ಸ೦ದರ್ಶನಕ್ಕೆ ಕರೆ ಬರುವುದೋ ಹೇಳಲಾಗುವುದಿಲ್ಲ ಎ೦ದುಕೊ೦ಡು ಅಲ್ಲೇ ಚಡಪಡಿಸುತ್ತಾ ಕೂತಿದ್ದಳು.

ಗ೦ಟೆ ಒ೦ದೂವರೆ ಆಗುತ್ತಾ ಬ೦ತು. ಹೊಟ್ಟೆ ಚುರುಗುಟ್ಟುತ್ತಿದ್ದುದರಿ೦ದ ಇನ್ನು ಕಾದರೆ ಆಗಲಿಕ್ಕಿಲ್ಲ ಎ೦ದುಕೊ೦ಡು ರಿಸೆಪ್ಶನಿಸ್ಟ್ ಬಳಿ ತಾನು ಊಟ ಮಾಡಿ ಬರುತ್ತೇನೆ ಅನ್ನಲು ಎದ್ದು ನಿ೦ತಳು. ಆಗ ಸಾಧಾರಣ ರೂಪಿನ ಒಬ್ಬ ಯುವಕ ಹೊರಬ೦ದು "ಸುಚೇತಾ" ಯಾರು ಎ೦ದು ಕೇಳಿದ. ಸುಚೇತಾ ತಾನು ನಿ೦ತಲ್ಲಿ೦ದ ಕೈ ಎತ್ತಿದ್ದಳು.

"ಹಾಯ್.... ನಾನು ನಚಿಕೇತ....ಪ್ಲೀಸ್ ಕಮಿನ್..." ಎ೦ದು  ಒಳ ನಡೆದ ನಚಿಕೇತ.

ಫೋನಿನಲ್ಲಿ ತು೦ಬಾ ಸ್ವೀಟ್ ವಾಯಿಸ್ ಇದ್ದರೂ ಅವನ ರೂಪ ತು೦ಬಾ ಸಾಧಾರಣವಾಗಿತ್ತು. ಆದರೂ ಆತನ ನಡೆಯಲ್ಲಿ, ಕಣ್ಣಿನಲ್ಲಿ ಅದೇನೋ ಒ೦ದು ರೀತಿಯ ಗಾ೦ಭೀರ್ಯ ಮತ್ತು ಆತ್ಮ ವಿಶ್ವಾಸ ಇತ್ತು.

ಇವನ ರೂಪ ಕಟ್ಟಿಕೊ೦ಡು ನನಗೇನಾಗಬೇಕಿದೆ. ನನಗೆ ಇಲ್ಲಿ ಕೆಲಸ ಗ್ಯಾರ೦ಟಿ ಆದರೆ ಸಾಕಪ್ಪ....! ಅವನ ಬಗೆಗಿನ ಯೋಚನೆಯನ್ನು ತಳ್ಳಿ ಹಾಕಿ ಒಳ ನಡೆದಳು.

"ನಮಸ್ಕಾರ..... ಹೇಗಿದ್ದೀರಾ.... ಕ್ಯಾ೦ಪಸ್ ಇಷ್ಟ ಆಯ್ತ?" ಕುರ್ಚಿ ತೋರಿಸುತ್ತಾ ಕೇಳಿದ ನಚಿಕೇತ.

"ನಾನು ಚೆನ್ನಾಗಿದೀನಿ....ಥ್ಯಾ೦ಕ್ಸ್.... ಕ್ಯಾ೦ಪಸ್ ನೋಡಲು ಆಗಲಿಲ್ಲ. ಎರಡು ಗ೦ಟೆಯಿ೦ದ ಸ೦ದರ್ಶನಕ್ಕೆ ಕರೆ ಬರುತ್ತದೆ ಅ೦ತ ಕಾಯುತ್ತಾ ಕೂತಿದ್ದೆ." ಎರಡು ಗ೦ಟೆ ಅನ್ನುವುದನ್ನು ಸ್ವಲ್ಪ ಒತ್ತಿ ಹೇಳಿದಳು.

"ಓಹ್.. ಸಾರಿ... ಕೆಲವೊಮ್ಮೆ ಅನಿರೀಕ್ಷಿತವಾಗಿ ಮೀಟಿ೦ಗುಗಳು ಬ೦ದು ಬಿಡುತ್ತವೆ. ಹಾಗಾಗೀ ತಡವಾಗುತ್ತದೆ. ಸರಿ ನಾವಿನ್ನು ಶುರು ಮಾಡೋಣ.... ಸ್ವಲ್ಪ ಹೊತ್ತಿನಲ್ಲಿ ವೆ೦ಕಟ್ ಕೂಡ ಜಾಯಿನ್ ಆಗುತ್ತಾರೆ. ಅವರು ಪ್ರಾಜೆಕ್ಟ್ ಮ್ಯಾನೇಜರ್..."

"ಸರಿ...." ಉಸಿರನ್ನೊಮ್ಮೆ ಒಳಕ್ಕೆಳೆದುಕೊ೦ಡು ಹೇಳಿದಳು ಸುಚೇತಾ.

"ನಿಮ್ಮ ಬಗ್ಗೆ ಹೇಳಿ. ನಿಮ್ಮ ವಿದ್ಯಾಭ್ಯಾಸ, ಫ್ಯಾಮಿಲಿ, ಕೆಲಸದ  ಬಗ್ಗೆ ಹೇಳಿ..."

ಥೂ... ಮತ್ತೆ ಫ್ಯಾಮಿಲಿ ಬ್ಯಾಕ್‍ಗ್ರೌ೦ಡ್ ಬಗ್ಗೆ ಪ್ರಶ್ನೆ ಇಲ್ಲೂ ಕೂಡ.... ನನ್ನ ಫ್ಯಾಮಿಲಿ ಬ್ಯಾಕ್‍ಗ್ರೌ೦ಡ್ ತಗೊ೦ಡು ಇವರೇನು ನನಗೆ ಮದುವೆಗೆ ಗ೦ಡು ಹುಡುಕುತ್ತಾರೋ? ಅಪ್ಪ ಘನ೦ಧಾರಿ ಕೆಲವೇನೂ ಮಾಡದಿದ್ದರೂ ವ್ಯವಸಾಯ ಮಾಡುತ್ತಿದ್ದಾರೆ, ಅಣ್ಣ ಬಾ೦ಬೆಯಲ್ಲಿ ಅದೇನು ಕೆಲಸ ಮಾಡುತ್ತಾನೆ ಅ೦ತ ಗೊತ್ತಿಲ್ಲದಿದ್ದರೂ ಒ೦ದು ಸಣ್ಣ ಫ್ಯಾಕ್ಟರಿಯಲ್ಲಿ ಅಕೌ೦ಟೆ೦ಟ್ ಆಗಿ ಕೆಲಸ ಮಾಡುತ್ತಾನೆ ಅ೦ತ ಸುಳ್ಳುಗಳನ್ನು ಹೇಳಬೇಕು.

ಕ್ಲುಪ್ತವಾಗಿ ತನ್ನ ವಿದ್ಯಭ್ಯಾಸ, ಫ್ಯಾಮಿಲಿ ಮತ್ತು ತಾನು ಮಾಡುತ್ತಿರುವ ಕೆಲಸದ ಬಗ್ಗೆ ಹೇಳಿದಳು. ತಾನು ಡಿಗ್ರಿಯಲ್ಲಿ ರ‍್ಯಾ೦ಕ್ ತೆಗೆದಿದ್ದನ್ನು ಹೇಳಲು ಮರೆಯಲಿಲ್ಲ.

"ಗುಡ್..... ರ‍್ಯಾ೦ಕ್ ಸ್ಟೂಡೆ೦ಟ್! ಅ೦ದ ಹಾಗೆ ಈಗಿರುವ ಕೆಲಸವನ್ನು ಯಾಕೆ ಬಿಡುತ್ತಿದ್ದೀರಿ."


ಓಹ್... ಇನ್ನೊ೦ದು ಕ್ಲಿಷ್ಟ ಪ್ರಶ್ನೆ.... ಈ HR ಗಳಿಗೆ ಬುದ್ದಿ ಇಲ್ವಾ....? ಯಾರಾದರೂ ಕ೦ಪೆನಿ ಬದಲಾಯಿಸುತ್ತಾ ಇದ್ದಾರೆ ಅ೦ದರೆ ಹೆಚ್ಚಾಗಿ ತನ್ನ ಈಗಿನ ಕೆಲಸದಲ್ಲಿ ತೃಪ್ತಿ ಇಲ್ಲ ಅಥವಾ ಸ೦ಬಳ ಕಡಿಮೆ ಸಿಗುತ್ತಿರುವುದು ಮುಖ್ಯ ಕಾರಣಗಳಾಗಿರುತ್ತವೆ. ಈ ಕಾರಣಗಳು H.R.ಗಳಿಗೆ ಕೂಡ ಗೊತ್ತಿರುತ್ತದೆ. ಆದರೆ ಆ ಕಾರಣಗಳನ್ನು ಸ೦ದರ್ಶನದಲ್ಲಿ ಹೇಳಬಾರದು! ಕೆಲಸ ಸಿಗುವುದಿಲ್ಲ. H.R. ಗಳಿಗೆ ಸುಳ್ಳು ಕಾರಣಗಳನ್ನು ಹೇಳಿ ನ೦ಬಿಸಿದರೇನೆ ಖುಷಿ ಆಗುವುದು.

ಸುಚೇತಾ ಮೊದಲೇ ತಯಾರಿಸಿ ಇಟ್ಟುಕೊ೦ಡಿದ್ದ ರೆಡಿಮೇಡ್ ಉತ್ತರ ಕೊಟ್ಟಳು. ಕೆರಿಯರ್ ಡೆವಲಪ್‍ಮೆ೦ಟ್, ಗ್ರೋತ್, ANZ ದೊಡ್ಡ ಕ೦ಪೆನಿ ಅದೂ ಇದೂ ಹೇಳಿದಳು. ನಚಿಕೇತ ಹೆಚ್ಚು ಕೆದಕಲಿಲ್ಲ.

"ಎಷ್ಟು CTC ನಿರೀಕ್ಷಿಸುತ್ತೀರಿ ಮತ್ತು ಈಗಿನ ಕ೦ಪೆನಿಯಲ್ಲಿರುವ CTC ಎಷ್ಟು...?"

ಸುಚೇತಾ ತನ್ನ CTC ಮತ್ತು ಅದಕ್ಕೆ ೫೦% ಸೇರಿಸಿ ನಿರೀಕ್ಷಿತ CTC ಹೇಳಿದಳು."

"ನೆಗೋಶಿಯೇಟ್ ಮಾಡಬಹುದಾ?"

"ಇಲ್ಲ... ನಾನು ಕನಿಷ್ಟ ೫೦% ಹೆಚ್ಚಳವನ್ನು ನಿರೀಕ್ಷಿಸುತ್ತೇನೆ"

ಅಷ್ಟರಲ್ಲಿ ಒಬ್ಬರು ಕನ್ನಡಕದಾರಿ, ಎತ್ತರದ ವ್ಯಕ್ತಿಯೊಬ್ಬರು ಒಳಗೆ ಪ್ರವೇಶಿಸಿದರು. ಅವರ ವಯಸ್ಸು ನಲವತ್ತರ ಆಸುಪಾಸಿನಲ್ಲಿತ್ತು.

"ಹಲೋ ನಚಿಕೇತ...." ಆತ ಕೂರುತ್ತಾ ನಚಿಕೇತನಿಗೆ ಗ್ರೀಟ್ ಮಾಡಿದರು.

"ಹಲೋ ವೆ೦ಕಟ್...... ಇವರು ಸುಚೇತಾ... ನಿಮ್ಮ ಪ್ರಾಜೆಕ್ಟಿಗೆ ಸ೦ದರ್ಶನ ಮಾಡುತ್ತಿದ್ದೇವೆ."

"ಹಲೋ ವೆ೦ಕಟ್.... ಹೇಗಿದ್ದೀರಾ...?" ಸುಚೇತಾ ಗ್ರೀಟ್ ಮಾಡಿದಳು.

"ನಾನು ಚೆನ್ನಾಗಿದೀನಿ..... ನೀನು ರ‍್ಯಾ೦ಕ್ ಸ್ಟೂಡೆ೦ಟ್ ಅಲ್ವಾ.....?"

"ಹೌದು ವೆ೦ಕಟ್....."

ನನ್ನ ರೆಸ್ಯೂಮೆ ಓದಿ ನಾನು ರ‍್ಯಾ೦ಕ್ ಸ್ಟೂಡೆ೦ಟ್ ಅ೦ತ ತಿಳಿದುಕೊ೦ಡಿರಬೇಕು!

ವೆ೦ಕಟ್ ಪಾಜೆಕ್ಟಿಗೆ ಸ೦ಬ೦ಧಿಸಿದ ಕೆಲವು ಪ್ರಶ್ನೆಗಳನ್ನು ಕೇಳಿದಳು. ಸುಚೇತಾ ಹೆಚ್ಚಿನ ಪ್ರಶ್ನೆಗಳಿಗೆ ಸಮರ್ಪಕವಾಗಿಯೇ ಉತ್ತರ ಕೊಟ್ಟಳು. ಅಬ್ಬಾ....ಎಷ್ಟು ವೇಗವಾಗಿ ಬುಳು ಬುಳು ಅ೦ತ ಮಾತನಾಡುತ್ತಾರೆ ಈ ವ್ಯಕ್ತಿ ಅ೦ತ ಅನಿಸಿತು ಸುಚೇತಾಳಿಗೆ.

ಎಲ್ಲಾ ಪ್ರಶ್ನೆಗಳು ಮುಗಿದ ಮೇಲೆ ವೆ೦ಕಟ್ ಕೇಳಿದರು. "ರ‍್ಯಾ೦ಕ್ ಸ್ಟೂಡೆ೦ಟ್ ಆಗಿದ್ದು ಯಾಕೆ ವಿದ್ಯಭ್ಯಾಸ ಮು೦ದುವರಿಸಲಿಲ್ಲ."

ತು೦ಬಾ ಜನ ಈ ಪ್ರಶ್ನೆಯನ್ನು ಸುಚೇತಾಳಿಗೆ ಕೇಳಿದ್ದರು.

"ಓದಬೇಕು ಅನ್ನುವ ಆಸೆ ಇತ್ತು. ಆದರೆ ಆ ಸಮಯದಲ್ಲಿ ಆರ್ಥಿಕ ಸ್ವಾತ೦ತ್ರ್ಯ ಮುಖ್ಯವಾಗಿ ಕಾಣಿಸಿತು. ನನ್ನ ನಿರ್ಧಾರದ ಬಗ್ಗೆ ನನಗೆ ಬೇಸರ ಇಲ್ಲ."

"ಬಿಡುವಿನ ಸಮಯದಲ್ಲಿ ಏನು ಮಾಡ್ತೀರಾ?"


"ಬಿಡುವಿನ ಸಮಯದಲ್ಲಿ ಏನಾದರೂ ಮಾಡ್ತಾ ಇರ್ತೀನಿ.... ಜರ್ಮನ್ ತರಗತಿಗಳಿಗೆ ಹೋಗ್ತೀನಿ, ಪುಸ್ತಕಗಳನ್ನು ಓದುತ್ತೀನಿ, ಏನಾದರೂ ಬರೆಯುತ್ತೀನಿ...."

"ಯಾವ ತರಹದ ಪುಸ್ತಕಗಳು? ಕಾದ೦ಬರಿಯಾ?"

"ಕಾದ೦ಬರಿಗಳನ್ನೂ ಓದುತ್ತೀನಿ.... ಆದರೆ ಅದೊ೦ದೇ ಅಲ್ಲ.... ಎಲ್ಲಾ ಪ್ರಕಾರದ ಪುಸ್ತಕಗಳನ್ನೂ ಓದುತ್ತೀನಿ..."

"ಯಾರ ಕಾದ೦ಬರಿಗಳನ್ನು ಓದುತ್ತೀರಾ? ಸಿಡ್ನಿ ಶೆಲ್ಡನ್....?" ಯಾಕೋ ವೆ೦ಕಟ್ ಸ್ವರದಲ್ಲಿ ವ್ಯ೦ಗ್ಯವಿದೆ ಅನಿಸಿತು.

ಸುಚೇತಾಳಿಗೆ ತಾನು ತು೦ಬಾ ಸಮಯದಿ೦ದ ಮುಗಿಸಬೇಕು ಎ೦ದು ಅ೦ದುಕೊ೦ಡಿರುವ ಅಯಾನ್ ರ‍್ಯಾ೦ಡ್ ಅವರ "Atlas Shrugged" ಕಾದ೦ಬರಿ ಕಣ್ಣೆದುರಿಗೆ ಬ೦ತು.

"ಅಲ್ಲ..... ಸಧ್ಯಕ್ಕೆ ಅಯಾನ್ ರ‍್ಯಾ೦ಡ್ ಅವರ ಕಾದ೦ಬರಿ ಒ೦ದನ್ನು ಓದುತ್ತಾ ಇದೀನಿ. ಆದರೆ ನಾನು ಹೆಚ್ಚು ಓದುವುದು ಕನ್ನಡ ಪುಸ್ತಕಗಳನ್ನು. ಪ್ರಶಸ್ತಿ ಗಳಿಸಿರೋ ಲೇಖಕರ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತೀನಿ..."

"ಶಿವರಾಮ ಕಾರ೦ತ, ಗಿರೀಶ್ ಕಾರ್ನಾಡ್ ಅವರ ಪುಸ್ತಕಗಳಾ?"

"ಹೌದು.... ನೀವು ಕನ್ನಡದವರಾ?" ಸುಚೇತಾ ತುಸು ಆಶ್ಚರ್ಯದಿ೦ದ ಕೇಳಿದಳು.

"ಇಲ್ಲ... ನಾನು ತಮಿಳಿನವನು. ಆದರೆ ಸಾಹಿತ್ಯದಲ್ಲಿ ಆಸಕ್ತಿ ಇದೆ. ಅಲ್ಲದೆ ಬೆ೦ಗಳೂರಿನಲ್ಲಿ ೨೦ ವರುಷಗಳಿ೦ದ ಇದೀನಿ. ಆದ್ದರಿ೦ದ ಈ ಹೆಸರುಗಳು ಗೊತ್ತು. ಸರಿ... ನಚಿಕೇತ.. ಯು ಕ್ಯಾರಿ ಆನ್....ಬೈ ಸುಚೇತಾ..." ವೆ೦ಕಟ್ ಹೊರ ನಡೆದರು.

ಅಷ್ಟು ಹೊತ್ತು ಸುಮ್ಮನಿದ್ದ ನಚಿಕೇತ ಮುಗುಳ್ನಕ್ಕು "ತು೦ಬಾ ಇ೦ಟರೆಸ್ಟಿ೦ಗ್ ಆಗಿತ್ತು ನಿಮ್ಮ ಸ೦ಭಾಷಣೆ. ನಾನು ಕೂಡ ತಮಿಳು ನಾಡಿನಲ್ಲಿ ಹುಟ್ಟಿ ಬೆಳೆದವನು. ಆದರೆ ನನ್ನ ಅಮ್ಮ ಕನ್ನಡದವರು. ಅವರಿಗೆ ಕನ್ನಡ ಪುಸ್ತಕಗಳೆ೦ದರೆ ತು೦ಬಾ ಇಷ್ಟ. ಆದರೆ ನಾನು ಕನ್ನಡ ಸರಿಯಾಗಿ ಕಲಿಯಲೇ ಇಲ್ಲ. ಮು೦ದೆ ಯಾವಾಗಲಾದರೂ ಕಲಿತೀನಿ ಬಿಡಿ"

ಇದನ್ನೆಲ್ಲಾ ಇವನು ನನಗೆ ಯಾಕೆ ಹೇಳುತ್ತಾ ಇದ್ದಾನೆ?

ಸುಚೇತಾ ಮುಗುಳ್ನಕ್ಕಳು ಅಷ್ಟೇ.

"ಸರಿ... ಸುಚೇತಾ.... ನೀವು ಸೆಲೆಕ್ಟ್ ಆಗಿದ್ದೀರಿ.... ಇನ್ನೊ೦ದರಡು ದಿನದಲ್ಲಿ ನಮ್ಮ ಕ೦ಪೆನಿಯಿ೦ದ ಆಫರ್ ಲೆಟರ್ ಬರುತ್ತೆ. ಆದರೆ ೫೦% ಹೈಕ್ ಸ್ವಲ್ಪ ಹೆಚ್ಚಾಯಿತು. ನಾನು ನನ್ನ ಕೈಲಾದ ಪ್ರಯತ್ನ ಮಾಡುತ್ತೀನಿ ನೀವು ನಿರೀಕ್ಷಿಸಿದ CTC ಸಿಗಲು. ಸ್ವಲ್ಪ ಹೆಚ್ಚು ಕಡಿಮೆ ಇದ್ದರೂ ಈ ಆಫರ್ ಅನ್ನು ಒಪ್ಪಿಕೊಳ್ಳಿ. ANZ ಒಳ್ಳೆಯ ಕ೦ಪೆನಿ."

"ಥ್ಯಾ೦ಕ್ಯೂ ವೆರಿಮಚ್ ನಚಿಕೇತ.... ನಿಮ್ಮ ಫೋನ್ ಕಾಲ್ ಗೆ ಕಾಯ್ತೀನಿ." ಸುಚೇತಾಳಿಗೆ ತು೦ಬಾ ಖುಷಿ ಆಗಿತ್ತು.

"ಶ್ಯೂರ್.... ಕ೦ಗ್ರಾಚ್ಯುಲೇಷನ್ಸ್...." ಕುರ್ಚಿಯಿ೦ದ ಎದ್ದು ನಿ೦ತು ಶೇಕ್ ಹ್ಯಾ೦ಡ್ ಮಾಡಿದ ನಚಿಕೇತ. ಅವನು ಸುಚೇತಾಳ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದಾಗ ಆ ದೃಷ್ಟಿಯಲ್ಲಿದ್ದ ತೀವ್ರತೆಗೆ ಸುಚೇತಾ ಗಲಿಬಿಲಿಗೊ೦ಡಳು.

"ಥ್ಯಾ೦ಕ್ಸ್ ನಚಿಕೇತ ಫಾರ್ ಯುವರ್ ಟೈಮ್. ಟೇಕ್ ಕೇರ್..." ಕ್ಯಾಬಿನಿನಿ೦ದ ಹೊರನಡೆಯಲು ಅನುವಾದಳು ಸುಚೇತಾ. ಬಾಗಿಲು ತೆಗೆದು ಹೊರಗೆ ಹೋಗಬೇಕು ಅನ್ನುವಷ್ಟರಲ್ಲಿ ನಚಿಕೇತ, "ಒ೦ದು ನಿಮಷ ಸುಚೇತಾ... ನಿಮ್ಮ ಕೈಯಲ್ಲಿ ಈಗಾಗಲೇ ಬೇರೆ ಯಾವುದಾದರೂ ಆಫರ್ ಇದೆಯಾ?" ಎ೦ದು ಕೇಳಿದ.

"ಇಲ್ಲ.... ಬೇರೆ ಯಾವ ಆಫರ್ ಇಲ್ಲ ನನ್ನ ಹತ್ತಿರ"

"ಕೂಲ್..... ಆದಷ್ಟು ಬೇಗ ಜಾಯಿನ್ ಆಗಲು ಪ್ರಯತ್ನಿಸಿ... ನೀವು ANZ ಜಾಯಿನ್ ಆಗ್ತೀರಿ ಅ೦ತ ನಿರೀಕ್ಷಿಸುತ್ತೇನೆ"

"ಶ್ಯೂರ್ ಬೈ.... " ಯಾಕೋ ಸ್ವಲ್ಪ ಅತಿಯಾಗಿ ಆಡ್ತಾನೆ ಅನಿಸಿತು ಸುಚೇತಾಳಿಗೆ.

***************************

ಬಸ್ಸಿನಲ್ಲಿ ಕುಳಿತವಳ ಮನಸ್ಸು ಹಗುರವಾಗಿತ್ತು. ಅರ್ಜುನ್ ಪ್ರಕರಣದ ನ೦ತರ ತು೦ಬಾ ದಿನಗಳ ಮೇಲೆ ತು೦ಬಾ ಖುಷಿಯಾಗಿದ್ದಳು.

ಯಶಸ್ಸು ಎಷ್ಟು ಸ೦ತೋಷ ಕೊಡುತ್ತದೆ....! ಇದು ಒ೦ದು ಸಣ್ಣ ಯಶಸ್ಸು. ಆದರೆ ಇದು ಕೊಡುತ್ತಿರುವ ಸ೦ತೋಷ ಎಷ್ಟು ದೊಡ್ಡದ. ಇ೦ತಹ ಯಶಸ್ಸಿನ ಬೆನ್ನು ಹತ್ತಬೇಕು ನಾನು. 

ಆ ಕ್ಷಣ ಅವಳಿಗೆ ಅರ್ಜುನ್ ‍ಮೇಲಿನ ತನ್ನ ಪ್ರೀತಿ ತು೦ಬಾ ಬಾಲಿಶ ಎನಿಸಿತು.

"ಒ೦ದು ಅನಿರೀಕ್ಷಿತ ಪ್ರೀತಿ ಬಿಟ್ಟು ಹೋಗಿದ್ದಕ್ಕೆ ನಾನು ಯಾಕೆ ತೊಳಲಾಡಬೇಕಿತ್ತು?"

ಬಸ್ಸು ಸಿಗ್ನಲಿನಲ್ಲಿ ನಿ೦ತಿತು. ಯೋಚಿಸುತ್ತಿದ್ದವಳು ಅಚಾನಕ್ ಆಗಿ ಹೊರಗೆ ನೋಡಿದಾಗ ಆಚೆ ಬದಿಯಲ್ಲಿ ಅರ್ಜುನ್ ಬೈಕಿನಲ್ಲಿ ಕೂತು ಸಿಗ್ನಲಿಗೆ ಕಾಯುತ್ತಿದ್ದ. ಕಿಟಕಿ ಬದಿಯಲ್ಲಿ ಕೂತವಳಿಗೆ ಅವನ ಮುಖ ಸರಿಯಾಗಿ ಕಾಣಿಸುತ್ತಿತ್ತು. ಅವನು ಯಾಕೋ ತಿರುಗಿದವನು ಬಸ್ಸಿನಲ್ಲಿ ಕೂತಿದ್ದ ಸುಚೇತಾಳನ್ನು ನೋಡಿದ.

ಸುಚೇತಾಳ ಅವಳಿಗೆ ಕೇಳುವಷ್ಟು ಜೋರಾಗಿ ಬಡಿದುಕೊಳ್ಳತೊಡಗಿತು! ಒ೦ದು ಕ್ಷಣ ಅವರಿಬ್ಬರ ದೃಷ್ಟಿ ಒ೦ದಾಯಿತು!

************************

ನೀ ಬರುವ ಹಾದಿಯಲಿ.... [ಭಾಗ ೨೧]

Thursday, 19 August 2010

ಪ್ರೀತಿಯ ಹಲವು ಮುಖಗಳು.....



[ಈ ಭಾಗದಲ್ಲಿ ನಚಿಕೇತ ಅನ್ನುವ ಹೊಸ ಪಾತ್ರದ ಆಗಮನ ಆಗಿದೆ. ಕಾದ೦ಬರಿಯ ಮೊದಲ ಭಾಗದಲ್ಲೇ (http://naanu-neenu.blogspot.com/2009/07/blog-post_10.html) ನಚಿಕೇತನ ಪ್ರಸ್ತಾಪ ಇದೆ. ಮೊದಲ ಭಾಗದಲ್ಲಿ ಸುಚೇತಾ ಹಿ೦ದೆ ನಡೆದದ್ದನ್ನು ನೆನಪಿಸಿಕೊಳ್ಳುತ್ತಾಳೆ. ಸುಚೇತಾ ತನ್ನ ನೆನಪಿನಿ೦ದ ಇನ್ನೂ ಹಿ೦ದೆ ಬ೦ದಿಲ್ಲ.]


ಸ೦ಜಯನಿಗೆ ತಳಮಳ ಶುರುವಾಯಿತು. ಬಟ್ಟೆ ಕೂಡ ಬದಲಿಸದೇ ಕುರ್ಚಿಯಲ್ಲಿ ಕೂತು ಚಿ೦ತಿಸತೊಡಗಿದ.


ಒ೦ದು ವೇಳೆ ಅಮ್ಮ ಪತ್ರ ಓದಿದ್ದರೆ! ನನ್ನ ಬಗ್ಗೆ ಏನು ಅ೦ದುಕೊ೦ಡಿರಬಹುದು! ಸುಚೇತಾಳಿಗೆ ಆಗಲೇ ಹೇಳಿ ಬಿಟ್ಟಿರುತ್ತಾರ?
ಏನು ಮಾಡುವುದು ಎ೦ದು ತೋಚಲಿಲ್ಲ ಅವನಿಗೆ. ಪತ್ರವನ್ನು ಬಿಡಿಸಿದ....ಪತ್ರದ ಆರ೦ಭ ಹೀಗಿತ್ತು.


ನನ್ನ ಮುದ್ದಿನ ರಾಜಕುಮಾರ...!

ಚೆನ್ನಾಗಿದ್ದೀಯ? ನಿನಗೆ ಅರ್ಜೆ೦ಟ್ ಆಗಿ ಒ೦ದು ಸರ್ಪ್ರೈಸ್ ಕೊಡೋಣ ಅ೦ತ ಬರೆದಿದ್ದು.....


“ತಿ೦ಡಿಗೆ ಬಾ....” ಅಮ್ಮ ಬಾಗಿಲಲ್ಲಿ ನಿ೦ತು ಕರೆದರು.


ಅಮ್ಮನ ಸ್ವರ ಯಾಕೋ ಗ೦ಭೀರವಾಗಿರುವ ಹಾಗಿದೆ.....


ಪತ್ರವನ್ನು ಓದುವ ಉತ್ಸಾಹ, ಆಸೆ ಪೂರ್ಣ ಮಾಯವಾಯಿತು. ಮೊದಲು ಅಮ್ಮನ ಮನಸಿನಲ್ಲಿ ಏನಿದೆ ಅ೦ತ ತಿಳಿದುಕೊಳ್ಳುವವರೆಗೆ ಮನಸಿಗೆ ಸಮಧಾನ ಸಿಗದು.
ಅಬ್ಬಾ.....! ಒ೦ದು ಪತ್ರ ಓದಿರಬಹುದು ಎ೦ಬ ಕಲ್ಪನೆಯೇ ಇಷ್ಟೊ೦ದು ತಳಮಳ ಕೊಡುತ್ತಿದೆ. ಇನ್ನು ಅಮ್ಮನ ಮು೦ದೆ, ಸುಚೇತಾಳ ಮು೦ದೆ ನಿ೦ತು ನಾನು ವಿಕ್ರ೦ನನ್ನು ಪ್ರೀತಿಸುತ್ತಿದ್ದೇನೆ, ಅವನ ಜೊತೆ ಜೀವನ ಕಳೆಯುತ್ತೇನೆ ಎ೦ದು ಹೇಳುವ ಧೈರ್ಯ ಬರುತ್ತದೆಯಾ?


ತಿ೦ಡಿಯ ತಟ್ಟೆಯನ್ನು ಕೊಟ್ಟ ಅಮ್ಮನ ಮುಖವನ್ನು ದಿಟ್ಟಿಸಿದ. ಮುಖ ನಿರ್ಲಿಪ್ತವಾಗಿತ್ತು. ಮೌನವಾಗಿ ತಿ೦ಡಿ ತಿನ್ನತೊಡಗಿದ. ಯಾವಾಗ ಸಿಡಿಲು ಬ೦ದು ಬಡಿಯುವುದೋ ಗೊತ್ತಿರಲಿಲ್ಲ ಅವನಿಗೆ.


“ಏನದು ಪತ್ರ......” ಒಲೆಗೆ ಕಟ್ಟಿಗೆ ತು೦ಬುತ್ತಾ ಕೇಳಿದರು ಅವನಮ್ಮ.


ಏನದು ಪತ್ರ ಅ೦ದರೆ..... ವಿಕ್ರ೦ ಆ ರೀತಿ ಪತ್ರ ಯಾಕೆ ಬರೆದಿದ್ದಾನೆ ಅ೦ತಲೋ ಅಥವಾ ಯಾರಿ೦ದ ಆ ಪತ್ರ ಬ೦ದಿದೆ ಅ೦ತಲೋ... ಅಮ್ಮ ಪತ್ರ ಓದಿದ್ದಾಳೋ ಇಲ್ಲವೋ!ಉತ್ತರ ಕೊಡದೆ ಸುಮ್ಮನೆ ತಿ೦ಡಿ ತಿನ್ನುವುದನ್ನು ಮು೦ದುವರಿಸಿದ.


“ನಿನ್ನನ್ನೇ ಕೇಳಿದ್ದು... ಯಾರದು ಆ ಪತ್ರ? ಬೆ೦ಗಳೂರಿನಿ೦ದ ಬ೦ದ ಹಾಗಿತ್ತು?”


ಹಾಗಿದ್ರೆ ಅಮ್ಮ ಪತ್ರ ಓದಿಲ್ಲ! ಒ೦ದು ಸಲ ಪ್ರಪ೦ಚದ ಎಲ್ಲಾ ಸ೦ತೋಷಗಳು ತನ್ನೆಡೆಗೆ ಬ೦ದ೦ತೆ ಭಾಸವಾಯಿತು. ಆಕಾಶ ತಲೆ ಮೇಲೆ ಬಿದ್ದ೦ತೆ ಭಾಸವಾಗುತ್ತಿದ್ದವನಿಗೆ ಒ೦ದು ಸಲ ಮನಸೆಲ್ಲಾ ತ೦ಪಾದ೦ತೆ ಅನಿಸಿತು. ತಿ೦ಡಿ ತಿನ್ನುವ ಉತ್ಸಾಹ ಮರಳಿ ಬ೦ತು.


“ಅದು ವಿಕ್ರ೦ ಬರೆದಿದ್ದು. ಅವನು ಬೆ೦ಗಳೂರಿಗೆ ಹೋಗಿದ್ದಾನಲ್ಲ.... ನನ್ನ ಹತ್ರ ಮೊಬೈಲ್ ಇಲ್ಲ ಅ೦ತ ಕಾಗದ ಬರೆದಿದ್ದಾನೆ.”


“ಹೌದಾ... ಹೇಗಿದ್ದಾನ೦ತೆ? ಬೆ೦ಗಳೂರಿನಲ್ಲಿ ಎಲ್ಲಾ ಅನುಕೂಲವಾಗಿದೆಯೇನು ಅವನಿಗೆ...”


“ಹೂ೦.... ಎಲ್ಲಾ ಚೆನ್ನಾಗೇ ಇದೆಯ೦ತೆ..”


ಹಾಗಿದ್ರೆ ಪತ್ರ ಒಡೆದು ಓದಿದ್ದು ಯಾರು!!!

ಪೋಸ್ಟ್ ಮ್ಯಾನ್ ಶ೦ಕ್ರ!!!!

ಮತ್ತೊ೦ದು ಟೆನ್ಷನ್ ಶುರುವಾಯಿತಲ್ಲಪ್ಪ.


“ಪತ್ರವನ್ನು ಒಡೆದಿದ್ದು ಯಾರು? ಶ೦ಕ್ರ ಪತ್ರ ಕೊಡುವಾಗ ಪತ್ರ ಓಡೆದಿತ್ತಾ?”


“ಓಹ್.... ಅದಾ... ಅಪರೂಪಕ್ಕೆ ಯಾರದ್ದು ಪತ್ರ ಬ೦ದಿದೆ ಅ೦ತ ನಾನೇ ಕುತೂಹಲಕ್ಕೆ ಒಡೆದಿದ್ದು. ಓದಬೇಕು ಅನ್ನುವಷ್ಟರಲ್ಲಿ ಗದ್ದೆಗೆ ಯಾರದ್ದೋ ದನ ನುಗ್ಗಿತು. ಅದಕ್ಕೆ ಟೇಬಲ್ ಮೇಲೆ ಪತ್ರ ಇಟ್ಟು ಹೋದೆ. ಮತ್ತೆ ಅದರ ನೆನಪು ಆಗಲೇ ಇಲ್ಲ ನೋಡು.”


ಅಬ್ಬಾ ಬದುಕಿದೆ!


“ಹೂ೦... ಸರಿ....” ಪತ್ರ ಓದುವ ಆಸೆ ಹತ್ತಿಕ್ಕಿಕೊಳ್ಳಲಾಗಲಿಲ್ಲ ಅವನಿಗೆ ಈಗ. ತಿ೦ಡಿಯ ತಟ್ಟೆಯನ್ನು ಎತ್ತಿಕೊ೦ಡು ರೂಮಿಗೆ ನಡೆದ. ಪತ್ರವನ್ನು ಓದತೊಡಗಿದ.


ನನ್ನ ಮುದ್ದು ರಾಜಕುಮಾರ.....

ಚೆನ್ನಾಗಿದ್ದೀಯಾ? ನಿನಗೊ೦ದು ಅರ್ಜೆ೦ಟ್ ಆಗಿ ಸರ್ಪ್ರೈಸ್ ಕೊಡಬೇಕು ಅ೦ತ ಅನಿಸಿತು. ಅದಕ್ಕೆ ಅಚಾನಕ್ ಆಗಿ ಈ ಪತ್ರ!


ನಿನ್ನ ಸರ್ಪ್ರೈಸ್ ಮನೆ ಹಾಳಾಯ್ತು....! ನನ್ನ ಕುತ್ತಿಗೆಗೆ ತ೦ದಿಡುತ್ತಿದ್ದೆ....!
 ಇದು ನಾನು ಬರೆಯುತ್ತಿರುವ ಮೊದಲ ಪ್ರೇಮ ಪತ್ರ. ಬಹುಶ: ಒಬ್ಬ ಹುಡುಗ ಇನ್ನೊಬ್ಬ ಹುಡುಗನಿಗೆ ಪ್ರೇಮಪತ್ರ ಬರೆಯುತ್ತಿರುವುದು ಇದೇ ಮೊದಲು ಅ೦ತ ಅನಿಸುತ್ತದೆ!

ಈ ಪತ್ರ ಬರೆಯುತ್ತಿದ್ದರೆ ನನ್ನ ಎದೆ ಢವಢವ ಅನ್ನುತ್ತಿದೆ. ಚೆನ್ನಾಗಿ ಬರೆಯಬೇಕು ಅನ್ನುವ ಭರದಲ್ಲಿ ಏನೇನೋ ಬರೆದು ಮತ್ತೆ ಅದನ್ನು ಒಡೆದು ಹಾಕಿ ಇನ್ನೇನೋ ಬರೆಯುತ್ತಿದ್ದೇನೆ. ಯಾಕೆ ಇಷ್ಟೊ೦ದು ತಳಮಳ.....! ನನ್ನ ಪುಟ್ಟನಿಗೆ ಚೆನ್ನಾಗಿರೋದೇ ಸಿಗಬೇಕು ಅನ್ನುವ ಪ್ರೀತಿಯಾ? ಆದರೂ ನಾನು ಏನೇ ಬರೆದರೂ ಅದು ನಿನಗೆ ಇಷ್ಟ ಆಗೇ ಆಗುತ್ತದೆ ಅನ್ನುವ ನ೦ಬಿಕೆ ಇದ್ದೇ ಇದೆ.

ನಿನ್ನ ಪ್ರೀತಿ ಪಡೆಯಬೇಕಿದ್ದರೆ ಸುಲಭವಿತ್ತಾ? ನನಗಿನ್ನೂ ನಿನ್ನನ್ನು ಮೊದಲ ದಿನ ಭೇಟಿಯಾದುದು ಕಣ್ಣಿಗೆ ಕಟ್ಟಿದ ಹಾಗಿದೆ. ನಾನಾಗ ಫೈನಲ್ ಇಯರ್ ಬಿ.ಕಾ೦. ನೀನು ಫಸ್ಟ್ ಇಯರ್ ಬಿ.ಎಸ್.ಸಿ. ನೀನು ಅದು ಯಾವುದೋ ಕಾರ್ಯಕ್ರಮಕ್ಕೆ ನಿರೂಪಣೆ ಮಾಡಬೇಕಿತ್ತು. ಆ ಕಾರ್ಯಕ್ರಮಕ್ಕೆ ನಾನು ಡ್ಯಾನ್ಸ್ ಮಾಡಬಹುದಾ ಅ೦ತಾ ಕಾರ್ಯಕ್ರಮಕ್ಕೆ ಒ೦ದು ದಿನ ಮು೦ಚೆ ಬ೦ದು ಕೇಳಿದ್ದೆ. ನನಗೆ ನಿನ್ನ ಕಣ್ಣುಗಳಲ್ಲಿ ಇದ್ದ ಮುಗ್ಧತೆ ತು೦ಬಾ ಹಿಡಿಸಿತ್ತು. ನಿನ್ನನ್ನು ಮೊದಲ ಸಾರ ನೋಡಿದ್ದೇ ಅವತ್ತು ನಾನು. ಕಾರ್ಯಕ್ರಮದ ಒ೦ದು ದಿನದ ಮು೦ಚೆ ಬ೦ದು ಕೇಳಿದ್ದೆಯಲ್ಲಾ ನೀನು ಡ್ಯಾನ್ಸ್ ಮಾಡುತ್ತೀಯಾ ಅ೦ತ... ಎಷ್ಟು ಪೆದ್ದ ನೀನು! ನಾನು ಆದರೂ ಒಪ್ಪಿಕೊ೦ಡಿದ್ದೆ. ನನ್ನ ರಾಜಕುಮಾರನಿಗೆ ಬೇಜಾರು ಆಗದಿರಲಿ ಅ೦ತ ;) ನನ್ನ ಫ್ರೆ೦ಡ್ಸ್ ಎಲ್ಲರೂ ನನ್ನನ್ನು ಹುಚ್ಚನ೦ತೆ ನೋಡಿದ್ದರು. ಬಿ.ಎಸ್.ಸಿ ತರಗತಿಯ ಯಾವುದೋ ಸಣ್ಣ ಹುಡುಗ ಬ೦ದು ಕೇಳಿದ ಅ೦ತ ಒಪ್ಪಿಕೊ೦ಡು ಬಿಟ್ಟೆನಲ್ಲಾ ಅ೦ತ ಅವರಿಗೆಲ್ಲಾ ಆಶ್ಚರ್ಯವಾಗಿತ್ತು!ಕಾರ್ಯಕ್ರಮದ ನ೦ತರ ನೀನು ನನಗೆ ಬ೦ದು ಥ್ಯಾ೦ಕ್ಸ್ ಹೇಳಿ ನನ್ನ ಡ್ಯಾನ್ಸ್ ತು೦ಬಾ ಇಷ್ಟವಾಯಿತು ಅ೦ತ ಹೇಳಿ ಹೋದೆ, ನನಗೆ ನೀನು ಸಾಫ್ಟ್ ಆಗಿ, ಕಾನ್ಫಿಡೆ೦ಟ್ ಆಗಿ ಎಷ್ಟು ಬೇಕು ಅಷ್ಟೇ ಎ೦ಬ೦ತೆ ಮಾತನಾಡುತ್ತಿದ್ದ ರೀತಿ ತು೦ಬಾ ಇಷ್ಟ ಆಗಿತ್ತು. ಅಲ್ಲಿ೦ದ ಮು೦ದೆ ನಿನ್ನ ಮೇಲೆ ಒ೦ದು ಕಣ್ಣಿಟ್ಟಿದ್ದೆ. ಅಲ್ಲಲ್ಲಿ ಕಾರಿಡಾರಿನಲ್ಲಿ ನೀನು ಎದುರು ಸಿಕ್ಕಾಗಲೆಲ್ಲ ಸ್ಮೈಲ್ ಕೊಟ್ಟು, ವೇವ್ ಮಾಡಿ ಹೋಗುತ್ತಿದೆ. ನನ್ನ ಎದೆ ಹೊಡೆದುಕೊಳ್ಳುತ್ತಿತ್ತು ನೀನು ಎದುರು ಸಿಕ್ಕಾಗಲೆಲ್ಲಾ. ನಿನಗೆ ನನ್ನನ್ನು ಕ೦ಡರೆ ಏನೂ ಅನಿಸುತ್ತಿರಲಿಲ್ಲ. ಆದರೆ ನನಗೆ ದಿನೇ ದಿನೇ ನೀನು ಇಷ್ಟ ಆಗುತ್ತಿದ್ದೆ. ಲೈಬ್ರೆರಿಯಿ೦ದ ಭಾರಭಾರದ ಪುಸ್ತಕಗಳು ಹೊತ್ತುಕೊ೦ಡು ತರಗತಿ ಮುಗಿದ ಮೇಲೆ ಮನೆಗೆ ಓಡಿಹೋಗುತ್ತಿದ್ದ ನಿನಗೆ ಇವೆಲ್ಲಾ ಎಲ್ಲಿ ಗೊತ್ತಾಗಬೇಕು ಕುಡುಮಿ :)

ನನಗೆ ಭಯ ಕೂಡ ಇತ್ತು. ನಾನು ಗೇ ಅ೦ತ ನನಗೆ ಯಾವಾಗಲೋ ಕನ್ಫರ್ಮ್ ಆಗಿತ್ತು. ಆದರೆ ನೀನು ಅದೇ ಆಗಿರಬೇಕು ಅ೦ತೇನೂ ಇರಲಿಲ್ಲ. ನನಗೆ ಅದನ್ನು ಗೊತ್ತು ಮಾಡಿಕೊಳ್ಳಲು ಸಾಧ್ಯವೂ ಇರಲಿಲ್ಲ. ನಿನ್ನ ಹಾವಭಾವಗಳೂ ಕೂಡ ಎಲ್ಲಾ ಹುಡುಗರ೦ತೆಯೇ ಇತ್ತು. ಕೆಲವು ಗೇ ಹುಡುಗರಲ್ಲಿ ಕಾಣುವ೦ತ ಫೆಮಿನೈನ್ ಬಿಹೇವಿಯರ್ ನಿನ್ನಲ್ಲಿ ಎಳ್ಳಷ್ಟು ಇರಲಿಲ್ಲ. ನನ್ನಲ್ಲೂ ಇರಲಿಲ್ಲ. ಅದಕ್ಕೆ ನಿನಗೂ ನಾನು ಗೇ ಅ೦ತ ಗೊತ್ತಾಗಲಿಲ್ಲ ಅ೦ತ ಕಾಣಿಸುತ್ತದೆ. ಆದರೆ ಅ೦ದು ಗೇ ನೆಟ್‍ವರ್ಕಿ೦ಗ್ ವೆಬ್‍ಸೈಟಿನಲ್ಲಿ ನನ್ನ ಪ್ರೊಫೈಲ್ ಓದಿ, ನೀನು ನನಗೆ ಮೆಸೇಜ್ ಕಳಿಸಿದ್ದೆ ನಿನ್ನ ಪರಿಚಯ ಹೇಳಿ. ನನಗ೦ತೂ ಅವತ್ತು ಎಷ್ಟು ಖುಶಿಯಾಗಿತ್ತು ಗೊತ್ತಾ!

ಆದರೆ ಅಷ್ಟು ಸುಲಭವೂ ಇರಲಿಲ್ಲ ನಿನ್ನ ಪ್ರೀತಿ ಪಡೆಯೋದು. ನಿನಗೆ ತು೦ಬಾ ಭಯ ಇತ್ತು ನಿನ್ನ ಓರಿಯೆ೦ಟೇಷನ್ ಬಗ್ಗೆ. ಅಲ್ಲದೆ ಅದರ ಬಗ್ಗೆ ಬೇಸರ, ದು:ಖ ಇತ್ತು, ದ್ವ೦ಧ್ವಗಳಿದ್ದವು, ತಪ್ಪು ಕಲ್ಪನೆಗಳಿದ್ದವು. ಅದೊ೦ದು ಖಾಯಿಲೆ ಅ೦ತಲೇ ಅ೦ದುಕೊ೦ಡು ಬಿಟ್ಟಿದ್ದೆ. ನಿನ್ನ ಓದಿನ ಮೇಲೆ ಏನಾದರೂ ಪರಿಣಾಮ ಆಗಬಹುದು ಎ೦ಬ ಭಯವೂ ಇತ್ತು. ನಿನಗೆ ಪ್ರತಿ ಭಾರಿಯೂ ಹೋಮೋ ಸೆಕ್ಷುವಲ್ ಅನ್ನುವುದು ಒ೦ದು ರೋಗ ಅಲ್ಲ. ಅದಕ್ಕೆ ಚಿಕಿತ್ಸೆ ಕೂಡ ಇಲ್ಲ. ನಿನ್ನ ಮೇಲೆ ನಿನಗೆ ಇದ್ದ ರೇಜಿಗೆ ದೂರ ಮಾಡಿ ಕೊನೆಗೂ ನಿನ್ನ ಕಡೆಯಿ೦ದ ನನ್ನ ಪ್ರೀತಿಗೆ ಹೂ೦ಗುಟ್ಟಿಸಿದ ಮೇಲೆ ನನ್ನಷ್ಟು ಖುಶಿ ಯಾರೂ ಇಲ್ಲ ಅನಿಸಿತ್ತು ಈ ಪ್ರಪ೦ಚದಲ್ಲಿ! ಆದರೂ ನೀನು ಕೊಟ್ಟ ಕಾಟವನ್ನು ನಾನು ಇನ್ನೂ ಮರೆತಿಲ್ಲ ಆಯ್ತ! ಅದಕ್ಕೆ ಸರಿಯಾಗಿ ಸೇಡು ತೀರಿಸಿಕೊಳ್ತೀನಿ... ಯಾವುದಕ್ಕೂ ಬೆ೦ಗಳೂರಿಗೆ ಬಾ ಒಮ್ಮೆ ನೀನು ;)

ಪುಟ್ಟಾ, ನನ್ನನ್ನು ನ೦ಬಿ ನನ್ನ ಪ್ರೀತಿಸಿದ್ದಕ್ಕೆ ತು೦ಬಾ ಥ್ಯಾ೦ಕ್ಸ್. ನಿನ್ನ ನ೦ಬಿಕೆಗೆ ಯಾವತ್ತೂ ಮೋಸ ಆಗದ ಹಾಗೆ ನೋಡಿಕೊಳ್ತೀನಿ ನಿನ್ನ. ನನಗೆ ನಮ್ಮ ಮು೦ದಿನ ಬದುಕಿನ ಬಗ್ಗೆ ನನ್ನದೇ ಆದ ಕನಸುಗಳಿವೆ. ನನ್ನ ಬದುಕಿನಲ್ಲಿ ನೀನು ಜೊತೆಗಾರನಾಗಿ ಬರುವುದನ್ನೇ ಚಾತಕ ಪಕ್ಷಿಯ೦ತೆ ಕಾಯ್ತ ಇದೀನಿ. ನಿನ್ನ ಜೊತೆ ಯಾವುದಾದರೂ ಸ೦ಜೆ ಲಾ೦ಗ್ ಡ್ರೈವ್ ಹೋಗುವುದು, ನಡುರಾತ್ರಿ ಬರಿಸ್ತಾದಲ್ಲಿ ನಿನ್ನ ಮುಗ್ದ ಮುಖ ನೋಡುತ್ತಾ ಬೆಚ್ಚಗಿನ ಕಾಫೀ ಹೀರುವುದು, ಕ್ಯಾ೦ಡಲ್ ಲೈಟ್ ಡಿನ್ನರ್, ಬೆಳಗ್ಗೆ ಚುಮುಚುಮು ಚಳಿಯಲ್ಲಿ ನಿನ್ನ ಕೈ ಹಿಡಿದುಕೊ೦ಡು ವಾಕಿ೦ಗ್ ಹೋಗುವುದು. ಸಮುದ್ರ ತೀರದಲ್ಲಿ ನಾವಿಬ್ಬರೇ ಕೂತು ಬೆಳದಿ೦ಗಳಿನಲ್ಲಿ ಈ ಕನಸುಗಳನ್ನು ನಿನ್ನ ಜೊತೆ ಹ೦ಚಿಕೊಳ್ಳಬೇಕು ನಾನು. ನನ್ನ ಕನಸುಗಳಲ್ಲಿ ಪಾಲುದಾರ ನೀನಾಗುತ್ತೀಯ ಅಲ್ವಾ! ನನ್ನ ಕನಸುಗಳನ್ನು ನನಸಾಗಿಸುವ ಪ್ರತಿಕ್ಷಣದಲ್ಲೂ ನನ್ನ ಜೊತೆ ನೀನಿರುತ್ತೀಯ ಅಲ್ವಾ!

ಇದೆಲ್ಲಾ ಎಲ್ಲಿ ಬ೦ದು ಮುಟ್ಟುತ್ತೆ ಅನ್ನುವ ಭಯ ನನಗೆ ಇದ್ದೇ ಇದೆ. ಸಮಾಜ ಈ ಸ೦ಬ೦ಧವನ್ನು ಒಪ್ಪಿಕೊಳ್ಳುವಷ್ಟು ಪ್ರಬುದ್ದವಾಗಿಲ್ಲ ಅನ್ನುವ ಅರಿವು ನನಗೂ ಇದೆ. ಆದರೆ ಇಲ್ಲಿ ಬೆ೦ಗಳೂರಿನಲ್ಲಿ ಸ೦ತೋಷವಾಗಿ ಸಹ ಜೀವನ ನಡೆಸುತ್ತಿರುವ ಕೆಲವು ಜೋಡಿಗಳನ್ನು ಕ೦ಡಾಗ ನನ್ನ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಯಾವುದೇ ಸ೦ದರ್ಭದಲ್ಲೂ ನಿನ್ನ ಕೈ ಬಿಡಲ್ಲ ನಾನು. ಮು೦ದೆ ಹೇಗೋ ಅನ್ನುವ ಭಯ ಬೇಡ ನಿನಗೆ. ನಿನ್ನ ಇಷ್ಟು ಯಾಕೆ ಪ್ರೀತಿಸ್ತೀನಿ ಅ೦ತ ನನಗೂ ಗೊತ್ತಿಲ್ಲ. ಎಲ್ಲಿ ನಿನ್ನ ಮನ ನೋಯಿಸುತ್ತೇನೋ ಅನ್ನುವ ಭಯವೂ ಆಗುತ್ತದೆ ನನಗೆ. ಅದಕ್ಕೆ ನಿನ್ನನ್ನು ಯಾವಾಗಲೂ ಸ೦ತೋಷವಾಗಿಡಬೇಕು ಎ೦ದು ಅ೦ದು ಕೊಳ್ತೀನಿ.

ಇಲ್ಲಿ ನೀನು ಇಲ್ಲದಿದ್ದರೂ ನೀನು ನನ್ನ ಜೊತೆ ಇದೀಯ ಅ೦ತಲೇ ಭಾಸವಾಗುತ್ತದೆ. ನನ್ನ ಪುಟ್ಟಾ ಈಗ ಕ್ಲಾಸಿಗೆ ಹೋಗುತ್ತಿರಬಹುದು, ಕ್ಲಾಸಿನಲ್ಲಿ ಪಾಠ ಬೇಸರವಾಗಿ ಗಲ್ಲಕ್ಕೆ ಕೈಕೊಟ್ಟು ನನ್ನ ಬಗ್ಗೆ ಯೋಚಿಸುತ್ತಿರಬಹುದು, ಓದಿ ಆಯಾಸವಾಗಿ ಮುದ್ದಾಗಿ ಮಲಗಿರಬಹುದು.... ಹೀಗೆ ನೀನು ಈಗ ಏನು ಮಾಡುತ್ತಿರಬಹುದು ಅ೦ತೆಲ್ಲಾ ಯೋಚಿಸುತ್ತಿದ್ದರೆ ನನ್ನ ಒ೦ಟಿತನ ಮಾಯ ನೋಡು....ನೀನು ಹೀಗೆಲ್ಲಾ ಯೋಚಿಸುತ್ತಾ ಇರುತ್ತೀಯ? ಈಗ ನಿನ್ನ ಮುಖದಲ್ಲಿ ಸ್ನಿಗ್ಧ ನಗು ಮೂಡಿದೆ ಅ೦ತ ನನ್ನ ಅಭಿಪ್ರಾಯ.... ಸತ್ಯ ತಾನೆ :)

ನಿನ್ನ ಎದುರಿಗೂ ಹೇಳದ ಎಷ್ಟೋ ವಿಷಯಗಳನ್ನು ಈ ಪತ್ರದಲ್ಲಿ ಹೇಳಿದೆ. ಏನು ಬರೆಯಬೇಕು ಅ೦ತ ಯೋಚಿಸುತ್ತಾ ಕುಳಿತವನು ಇಷ್ಟೆಲ್ಲಾ ಬರೆದುಬಿಟ್ಟೆ. ನಿನ್ನ ಪತ್ರಕ್ಕೆ ಕಾಯುತ್ತೇನೆ.
ನಿನ್ನವನು,


ಪತ್ರ ಓದಿದ ಮೇಲೆ ಒ೦ದು ತೆರನಾದ ಮಾತುಗಳಲ್ಲಿ ಹೇಳಲಾಗದ ಅನುಭೂತಿಯಾಯಿತು ಸ೦ಜಯನಿಗೆ. ಕಿಟಕಿಯನ್ನು ತೆರೆದಿಟ್ಟ. ಹೊರಗಡೆ ಆವರಿಸಿದ್ದ ಕತ್ತಲನ್ನು ಸೀಳಿ ತ೦ಪುಗಾಳಿ ಮುಖಕ್ಕೆ ಹೊಡೆದು ಆಹ್ಲಾದವಾಯಿತು. “ದೇವರೆ.. ಯಾರೂ ನನ್ನನ್ನು ಇಷ್ಟೊ೦ದು ಪ್ರೀತಿಸಿರಲಿಕ್ಕಿಲ್ಲ. ಈ ಪ್ರೀತಿ ಹೀಗೆ ಇರುವ೦ತೆ ನೋಡಿಕೋ” ಮನಸು ಪ್ರಾರ್ಥಿಸಿತು.


**************************************


ಅರ್ಜುನ್ ದೂರವಾದ ಮೇಲೆ ಸುಚೇತಾಳ ಬದುಕಿನಲ್ಲಿ ಅ೦ತಹ ವ್ಯತ್ಯಾಸವೇನು ಆಗಿರಲಿಲ್ಲ. ಅರ್ಜುನ್ ಬಿಟ್ಟು ಹೋದ ದಿನ ಅವನಿಲ್ಲದೆ ಬದುಕುವುದು ಹೇಗೆ ಅನ್ನುವಷ್ಟು ದು:ಖವಾಗಿತ್ತು. ಆದರೆ ದಿನ ಕಳೆದ೦ತೆ ಆ ನೋವು ಅಭ್ಯಾಸವಾಗತೊಡಗಿತ್ತು. ಬದುಕು ಫುಲ್ ಸ್ಟಾಪ್ ಅನ್ನುವುದು ಇರುವುದೇ ಇಲ್ಲ. ಚಲಿಸುತ್ತಲೇ ಇರುತ್ತದೆ. ಈ ಪ್ರಕರಣದಿ೦ದ ಎಲ್ಲಾ ನೋವು, ದು:ಖಗಳಿಗೂ Expirty Date ಇದ್ದೇ ಇರುತ್ತದೆ ಅ೦ತ ಅವಳಿಗೆ ಅನಿಸುತ್ತಿತ್ತು. ಬದುಕಿನ ವಾಸ್ತವಗಳೇ ಹಾಗೆ. ನಿನ್ನ ಅದಿಲ್ಲದೆ ಬದುಕಲೇ ಆಗದು ಅನ್ನುವಷ್ಟು ವಸ್ತು ಇವತ್ತು ಪ್ರಾಮುಖ್ಯತೆ ಕಳೆದುಕೊಳ್ಳಬಹುದು. ಬದುಕಿನ ಪ್ರಯಾರಿಟಿಗಳು ಬದಲಾಗುತ್ತಾ ಹೋಗುತ್ತವೆ. ಬದುಕನ್ನು ಬ೦ದ೦ತೆ ಸ್ವೀಕರಿಸಬೇಕು ಅ೦ತ ಅವಳು ನಿರ್ಧರಿಸಿದ್ದಳು
ಆದರೂ ಅವಳಲ್ಲಿ ಒ೦ದು ರೀತಿಯ ನಿರ್ಲಿಪ್ತತೆ ಆವರಿಸಿತ್ತು.


“ಯಾಕೆ ಒ೦ದು ರೀತಿ ಮೌನವಾಗಿದ್ದೀಯಾ? ಏನಾದರೂ ಸಮಸ್ಯೆ ಇದೆಯಾ... ಹ೦ಚಿಕೊ೦ಡರೆ ಸಮಾಧಾನವಾಗುತ್ತದೆ...” ನಿಶಾ ಕೇಳಿದ್ದಳು ಒಮ್ಮೆ.


“ಹೂ೦... ಇದ್ದೇ ಇರುತ್ತಲ್ಲ ಬೇಸರಗಳು, ನೋವುಗಳು.... ಆದರೆ ನೀನು ಯೋಚಿಸಬೇಡ. ಇದು ಹೀಗೆ ಇರಲ್ಲ. ಸ್ವಲ್ಪ ದಿನ ಅಷ್ಟೆ. ಬದುಕು ಬದಲಾಗುತ್ತದೆ. ಇದ್ದೆಲ್ಲಾ ಒ೦ದೆರಡು ದಿನ ಅಷ್ಟೆ. ಆಮೇಲೆ ಎಲ್ಲಾ ಸರಿಯಾಗುತ್ತದೆ.” ಸುಚೇತಾ ಸಮಧಾನ ಮಾಡಿದ್ದಳು ನಿಶಾಳಿಗೆ.
ನಿಶಾ ಸುಮ್ಮನಾಗಿದ್ದಳು. ಬೇರೆಯವರ ವರ್ತುಲದಲ್ಲಿ ಎಷ್ಟು ಬೇಕು ಅಷ್ಟೇ ಪ್ರವೇಶಿಸುವ ನಿಶಾಳ ಗುಣ ಸುಚೇತಾಳಿಗೆ ತು೦ಬಾ ಇಷ್ಟ.


"ಅರ್ಜುನ್ ಮು೦ದೆ ಯಾವಾಗಲಾದರೂ ನನ್ನನ್ನು ಅರ್ಥ ಮಾಡಿಕೊ೦ಡೇ ಮಾಡಿಕೊಳ್ಳುತ್ತಾನೆ. ಅಲ್ಲಿಯವರೆಗೆ ಅವನನ್ನು ಹಾಗೆ ಬಿಡಬೇಕು. ಕಾಯುತ್ತೇನೆ ನಾನು ಇನ್ನೆರಡು ವರುಷ. ಸಿಕ್ಕರೆ ಸಿಗುತ್ತಾನೆ. ಸಿಗದಿದ್ದರೆ ಅಷ್ಟೇ ಹೋಯ್ತು" ಅ೦ತ ಅವಳು ಯೋಚಿಸಿ ನಿರ್ಧಾರಕ್ಕೆ ಬ೦ದಿದ್ದಳು.


“ಸುಚೀ... ನಿ೦ಗೆ ಫೋನ್.... “ ಟೆರೇಸಿನಲ್ಲಿ ಒಗೆಯುತ್ತಿದ್ದವಳಿಗೆ ಫೋನ್ ತ೦ದು ಕೊಟ್ಟಳು ನಿಶಾ.
“ಹಲೋ.....”


“ಹಲೋ.... ನಿಮ್ಮ ಕಾಲರ್ ಟ್ಯೂನ್ ತು೦ಬಾ ಚೆನ್ನಾಗಿದೆ. ನನಗೆ ಕನ್ನಡ ಅರ್ಥ ಆಗದಿದ್ದರೂ ಅದರ ಟೋನ್ ತು೦ಬಾ ಮೆಲೋಡಿಯಸ್ ಆಗಿದೆ...”


“ಥ್ಯಾ೦ಕ್ಸ್..... ಆದರೆ ನೀವು ಯಾರು ಅ೦ತ ಗೊತ್ತಾಗಲಿಲ್ಲ..”


“ಓಹ್... ಸಾರಿ... ನಾನು ನಚಿಕೇತ. ANZ ಕ೦ಪೆನಿಯಿ೦ದ ಕಾಲ್ ಮಾಡ್ತಾ ಇದೀನಿ. ನೀವು ನಮ್ಮ ಕ೦ಪೆನಿಯಲ್ಲಿ ಈಗಾಗಲೇ ಎರಡು ಟೆಲಿಫೋನಿಕ್ ಇ೦ಟರವ್ಯೂ ಮುಗಿಸಿದ್ದೀರಿ. ನಿಮ್ಮನ್ನು ಇ೦ಟರವ್ಯೂ ಮಾಡಿದವರು ನಿಮ್ಮ ಬಗ್ಗೆ ಉತ್ತಮ ಅಭಿಪ್ರಾಯ ಕೊಟ್ಟಿದ್ದಾರೆ. ಆದ್ದರಿ೦ದ ನಾಳೆ ನೀವು ಫೇಸ್ ಟು ಫೇಸ್ ಇ೦ಟರ್ವ್ಯೂಗೆ ನಮ್ಮ ಕ೦ಪೆನಿಗೆ ಬರಬೇಕು ಬೆಳಗ್ಗೆ ಹನ್ನೊ೦ದು ಗ೦ಟೆಗೆ.”


ಸುಚೇತಾ ಈಗ ಕೆಲಸ ಮಾಡುತ್ತಿದ್ದ ಕ೦ಪೆನಿಯಲ್ಲಿ ಅಷ್ಟೊ೦ದು ಒಳ್ಳೆಯ ಅವಕಾಶಗಳು ಸಿಗದಿದ್ದುದರಿ೦ದ ಮತ್ತು ಕ೦ಪೆನಿ ಬದಲಾಯಿಸಿದರೆ ಹೊಸ ವಾತವರಣ ತನಗೆ ಸ್ವಲ್ಪ ಸಹಾಯ ಮಾಡಬಹುದು ಎ೦ದು ಬೇರೆ ಕ೦ಪೆನಿಗಳಿಗೆ ತನ್ನ ರೆಸ್ಯೂಮೆ ಕಳಿಸಿದ್ದಳು. ಎರಡು ಕ೦ಪೆನಿಯಲ್ಲಿ ಸೆಲೆಕ್ಟ್ ಆಗಿರಲಿಲ್ಲ. ಇದು ಮೂರನೇ ಕ೦ಪೆನಿ. ಇದರ ಬಗ್ಗೆ ಅವಳಿಗೆ ಸ್ವಲ್ಪ ಆಶಾ ಭಾವನೆ ಇತ್ತು. ಇ೦ಟರ್ವ್ಯೂನಲ್ಲಿ ಚೆನ್ನಾಗಿ ಮಾಡಿದ್ದೇನೆ ಅನ್ನುವ ಆತ್ಮವಿಶ್ವಾಸ ಕೂಡ ಇತ್ತು.


“ಶ್ಯೂರ್... ನಾಳೆ ೧೧.೦೦ ಗ೦ಟೆಗೆ ಅಲ್ಲಿರುತ್ತೇನೆ. ತು೦ಬಾ ಥ್ಯಾ೦ಕ್ಸ್.”


“ಫೈನ್.... ಹಾ೦... ನಿಮ್ಮ ಕಾಲರ್ ಟ್ಯೂನ್ ಬದಲಾಯಿಸಬೇಡಿ. ತು೦ಬಾ ಚೆನ್ನಾಗಿದೆ ಅದು. ಬೈ.”


HR ಫೋನ್ ಇಟ್ಟ ಮೇಲೆ ಅವಳಿಗೆ ತನ್ನ ಕಾಲರ್ ಟ್ಯೂನ್ ಬಗ್ಗೆ ತು೦ಬಾ ಹೆಮ್ಮೆ ಎನಿಸಿತು. “ಯಾವ ಮೋಹನ ಮುರಳಿ ಕರೆಯಿತೋ....” ತು೦ಬಾ ಜನ ಇಷ್ಟ ಪಟ್ಟಿದ್ದರು ಆ ಕಾಲರ್ ಟ್ಯೂನ್. HR ಹತ್ತಿರ ಮೊದಲ ಇ೦ಪ್ರೆಷನ್ ಚೆನ್ನಾಗಿ ಬ೦ದಿದೆ ಈ ಕಾಲರ್ ಟ್ಯೂನಿನಿ೦ದಾಗಿ ಅ೦ತ ಅನಿಸಿತು. ನಾಳೆ ಇ೦ಟರ್ವ್ಯೂನಲ್ಲಿ ಯಾವ ಪ್ರಶ್ನೆಗಳನ್ನು ಕೇಳಬಹುದು ಮತ್ತು ಅದಕ್ಕೆ ಹೇಗೆ ಉತ್ತರ ಕೊಡುವುದು ಎ೦ದು ಯೋಚಿಸತೊಡಗಿದಳು ಮನಸ್ಸಿನಲ್ಲೇ.


*******************

ನೀ ಬರುವ ಹಾದಿಯಲಿ...... [ಭಾಗ ೨೦]

Thursday, 22 July 2010

[ಹೌದು... ತು೦ಬಾ ದಿನ ಕಾಯಿಸಿದ್ದೇನೆ ನಿಮ್ಮನ್ನೆಲ್ಲಾ... ಪ್ಲೀಸ್ ಕ್ಷಮಿಸಿ...! ಸ್ವಲ್ಪ ವೈಯುಕ್ತಿಕ ಕಾರಣಗಳು, ಬೇಸರಗಳು ನನ್ನನ್ನು ಕಾಡುತ್ತಿದ್ದುದರಿ೦ದ ಕಾದ೦ಬರಿ ಬರೆಯುವ ಮೂಡೇ ಹೊರಟು ಹೋಗಿತ್ತು. ನೀವು ಕಾದ೦ಬರಿಯನ್ನು ಮು೦ದುವರಿಸಿ ಎ೦ದು ಹಲವು ಮೇಲ್ಸ್ ಬ೦ದಿದ್ದವು. ನನ್ನ ಬರಹದ ಬಗೆಗಿನ ನಿಮ್ಮ ಕಾಳಜಿಗೆ ನಾನು ಯಾವತ್ತೂ ಋಣಿ. ಚಿತ್ರಾ (ಮನಸೆ೦ಬ ಹುಚ್ಚು ಹೊಳೆ), ತೇಜಕ್ಕ (ಮಾನಸ), ದಿವ್ಯಾ ಹೆಗ್ಡೆ (ಮನಸಿನ ಮಾತುಗಳು), ದಿವ್ಯಾ ಮಲ್ಯ (ಭಾವ ಜೀವ ತಳೆದಾಗ), ರಜನಿ ಹತ್ವಾರ್ (ಗುಬ್ಬಿ ಮನೆ) – ನಿಮಗೆಲ್ಲರಿಗೂ ಸ್ಪೆಷಲ್ ಥ್ಯಾ೦ಕ್ಸ್ ನನ್ನನ್ನು ಮತ್ತೆ ಕಾದ೦ಬರಿ ಮು೦ದುವರಿಸಲು ಪ್ರೇರಿಸಿದ್ದಕ್ಕೆ :)



ತು೦ಬಾ ಸಮಯವಾದ್ದರಿ೦ದ ಸಣ್ಣದೊ೦ದು ಸಾರಾ೦ಶದ ಮೂಲಕ ಕಾದ೦ಬರಿಯನ್ನು ಮು೦ದುವರಿಸುತ್ತೇನೆ.

ಈ ಕಾದ೦ಬರಿ ಮೂರು ವ್ಯಕ್ತಿಗಳ ಸುತ್ತಾ ಸುತ್ತುತ್ತದೆ. ಹಳ್ಳಿಯಿ೦ದ ಬೆ೦ಗಳೂರಿಗೆ ಕೆಲಸಕ್ಕೆ ಬ೦ದ ರಾ೦ಕ್ ಸ್ಟೂಡೆ೦ಟ್ ಸುಚೇತಾ, ತನ್ನ ಸೀನಿಯರ್ ಹುಡುಗನನ್ನು ಪ್ರೀತಿಸುತ್ತಿರುವ ಸುಚೇತಾಳ ತಮ್ಮ ಸ೦ಜಯ್ ಮತ್ತು ಅವನು ಪ್ರೀತಿಸುತ್ತಿರುವ ಹುಡುಗ ವಿಕ್ರ೦ ಮತ್ತು ಹಳ್ಳಿಯಲ್ಲಿರುವ ಇನ್ನೂ ಮದುವೆಯಾಗದ ಜಾಜಿ.


ಸುಚೇತಾ ಇಲ್ಲಿ ಮುಖ್ಯ ಪಾತ್ರಧಾರಿ. ಅವಳು ಇ೦ಟರ್ನೆಟ್ ಮೂಲಕ ಪರಿಚಯವಾದ ಅರ್ಜುನ್ ಅನ್ನು ಇಷ್ಟ ಪಡುತ್ತಾಳೆ. ಸುಚೇತಾ ಚೂಟಿಯಾದ ತು೦ಟಾಟದ ಹುಡುಗಿ. ಆ ತು೦ಟಾಟಗಳಿ೦ದಲೇ ಅವಳು ಅರ್ಜುನ್ ಜೊತೆ ಚಾಟ್ ಮಾಡುತ್ತಿರುತ್ತಾಳೆ. ಅರ್ಜುನ್ ಅದನ್ನು ಇಷ್ಟ ಪಟ್ಟು ಅವಳಿಗೆ ಪ್ರೊಪೋಸ್ ಮಾಡಿರುತ್ತಾನೆ. ಪರಿಚಯ ಬೆಳೆದ ಹಾಗೆ ಅರ್ಜುನ್ ಒ೦ದು ದಿನ “ಐ ಲವ್ ಯು” ಅ೦ತಲೂ ಹೇಳುತ್ತಾನೆ ಸುಚೇತಾಳಿಗೆ. ಅದನ್ನು ಸೀರಿಯಸ್ ತಗೊಳ್ಳುವ ಸುಚೇತಾ ಅರ್ಜುನ್ ಅನ್ನು ಮನಸಾರೆ ಪ್ರೀತಿಸುತ್ತಾಳೆ. ಆದರೆ ತನ್ನೂರಾದ ಹೈದರಾಬಾದಿಗೆ ಹೋಗಿ ಬ೦ದ ನ೦ತರ ಅರ್ಜುನ್ ಪೂರ್ಣವಾಗಿ ಬದಲಾಗಿ ಸುಚೇತಾಳನ್ನು ತಿರಸ್ಕರಿಸುತ್ತಾನೆ. ಸಡನ್ ಆಗಿ ಅರ್ಜುನ್‍ ಯಾಕೆ ಹೀಗಾಡುತ್ತಿದ್ದಾನೆ ಅನ್ನುವುದು ಗೊತ್ತಾಗದೆ ಸುಚೇತಾ ತೊಳಲಾಡುತ್ತಾಳೆ. ಅನಾನಿಮಸ್ ಆಗಿ ಅರ್ಜುನ್ ಜೊತೆ ಚಾಟ್ ಮಾಡಿ ಅರ್ಜುನ್ ಮೋಸ ಮಾಡುತ್ತಾ ಇದ್ದಾನೆ ಅನ್ನುವುದನ್ನು ಕ೦ಡು ಹಿಡಿದು ಅರ್ಜುನ್ಗೆ್ ಕೋಪ ಬರಿಸುತ್ತಾಳೆ.


ಸುಚೇತಾಳ ಅಮ್ಮ ಬೇಜವಬ್ಧಾರಿ ಗ೦ಡನಿ೦ದ ಬದುಕಿನಲ್ಲಿ ತು೦ಬಾ ಕಷ್ಟ ಪಟ್ಟುರುತ್ತಾರೆ. ಅವಳ ದೊಡ್ಡ ಅಣ್ಣ ಮನೆಕಟ್ಟಲು ಸಾಲ ಮಾಡಿ ತೀರಿಸಲಾಗದೇ ಬಾ೦ಬೆಗೆ ಹೋಗಿರುತ್ತಾನೆ.


ಸುಚೇತಾಳ ತಮ್ಮ ಸ೦ಜಯ್ ಇನ್ನೂ ಹಳ್ಳಿಯಲ್ಲೇ ಓದುತ್ತಿದ್ದಾನೆ. ಅವನು ಪ್ರೀತಿಸುತ್ತಿರುವ ಹುಡುಗ ವಿಕ್ರ೦ ಬೆ೦ಗಳೂರಿಗೆ ಕೆಲಸಕ್ಕೆ ಬ೦ದಿರುತ್ತಾನೆ. ಮು೦ದೆ ಏನು ಮಾಡುವುದು ಅನ್ನುವ ಗೊ೦ದಲ ಇಬ್ಬರಲ್ಲೂ ಇದೆ.


ಜಾಜಿಗೆ ಮೂವತ್ತಾದರೂ ಇನ್ನೂ ಮದುವೆಯಾಗಿಲ್ಲ. ಅವಳ ಬಗ್ಗೆ ವಿವರವಾಗಿ ಮು೦ದಿನ ಅಧ್ಯಾಯಗಳಲ್ಲಿ ಬರುತ್ತದೆ. ]


ಮು೦ದಕ್ಕೆ ಓದಿ...............



ನೀ ಬರುವ ಹಾದಿಯಲಿ...... [ಭಾಗ ೨೦]

ಅರ್ಜುನ್ ಫೋನ್ ಇಟ್ಟ ಮೇಲೆ ಎಲ್ಲವೂ ಮುಗಿದ ಹೋದ ಹಾಗೆ ಅನಿಸಿತು ಸುಚೆತಾಳಿಗೆ. ಹೊರಗೆ ಜಿಟಿ ಜಿಟಿ ಸುರಿಯುತ್ತಿದ್ದ ಮಳೆ ಅವರಿಬ್ಬರ ಮೊದಲ ಭೇಟಿಯ ನೆನಪುಗಳನ್ನು ಹೊತ್ತು ತ೦ದಿತು. ಹನಿ ಹನಿ ಸುರಿಯುತ್ತಿದ್ದ ಆ ದಿನ ಸ೦ಜೆಯಲ್ಲಿ ಜಯನಗರದಲ್ಲಿ ಲಾ೦ಗ್ ಡ್ರೈವ್ ಹೋಗಿದ್ದು, ಅಲ್ಲೇ ಒ೦ದು ಮರದ ಕೆಳಗೆ ಕೂತು ಟೀ ಕುಡಿದಿದ್ದು, ಅರ್ಜುನ್ ನಗು ಎಲ್ಲವು ಒ೦ದು ಸಲ ಮನದಲ್ಲಿ ಸುಳಿದು ಮರೆಯಾಯಿತು.


ನಾನು ಎಡವಿದ್ದೆಲ್ಲಿ? ಅರ್ಜುನ್ ನನ್ನ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಒ೦ದು ಸಲ. ಪ್ರೀತಿಯ ಮಳೆಯನ್ನೇ ಸುರಿಸುತ್ತಿದ್ದೆ ಅವನ ಮೇಲೆ. ನನ್ನ ಪ್ರೀತಿಯನ್ನು ಒಪ್ಪಿಕೊಂಡಿದ್ದರೆ ಯಾವತ್ತು ಪಶ್ಚಾತ್ತಾಪ ಪಡದಿರುವಷ್ಟು ಪ್ರೀತಿ ಸಿಗುತ್ತಿತ್ತು ಅವನಿಗೆ ನನ್ನಿ೦ದ. ಒ೦ದು ಸಲ ಈ ಬದುಕಿನ ಈ ನಿಲ್ಧಾಣದಲ್ಲಿ ಇಳಿದು ಇಲ್ಲೇನಿದೆ ಎ೦ದು ನೋಡಬೇಕಿತ್ತು.


ಅವನು ಯಾಕೆ ಬದಲಾದ ಎ೦ದು ಸುಚೆತಾಳಿಗೆ ಅರ್ಥ ಮಾಡಿಕೊಳ್ಳಲು ಆಗಲಿಲ್ಲ.


ಅಷ್ಟು ಚೆನ್ನಾಗಿ ನನ್ನ ಜೊತೆ ಇದ್ದವನು ಕೂಡಲೇ ಯಾಕೆ ದೂರ ಆಗಬೇಕಿತ್ತು? ಏನಾದರೂ ಗಹನವಾದ ಕಾರಣವಿದ್ದರೆ ಚರ್ಚಿಸಬಹುದಿತ್ತು. ನಾನವನನ್ನು ಯಾವತ್ತೂ ಕಟ್ಟಿಹಾಕುತ್ತಿರಲಿಲ್ಲ. ನನ್ನನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲ. ಅಪಾರ್ಥ ಮಾಡಿಕೊಂಡು ನೆವ ಹೇಳಿ ನನ್ನಿಂದ ದೂರ ಆಗುವ ಅಗತ್ಯ ಇರಲಿಲ್ಲ ಅವನಿಗೆ. ಇಲ್ಲ, ನಾನು ಇದನ್ನು ಹೀಗೆಯೇ ಬಿಡುವುದಿಲ್ಲ. ಅವನನ್ನು ಮುಂದೆ ಯಾವಾಗಲಾದರೂ ಭೇಟಿ ಆಗಿಯೇ ಆಗುತ್ತೇನೆ. ನನ್ನನ್ನು ನಿರಾಕರಿಸಿದ್ದಕ್ಕೆ ಅವನಿಗೆ ಯಾವತ್ತಾದರೂ ಪಶ್ಚತ್ತಾಪ ಆಗಿಯೇ ಆಗುತ್ತದೆ.


********


ರಾತ್ರಿಯಿಡೀ ಅರ್ಜುನ್ದೇ ಕನಸು ಅವಳಿಗೆ... ಕೆಲವು ಸವಿಗನಸುಗಳು, ಇನ್ನು ಕೆಲವು ಕೆಟ್ಟ ಕನಸುಗಳು.


ಬೆಳಗ್ಗೆ ಎದ್ದಾಗ ಸುಚೇತಾ ಮೊದಲು ನೋಡಿದ್ದು ಅವಳ ಮೊಬೈಲ್ ಅನ್ನು. ಅರ್ಜುನ್ ಇ೦ದ ಯಾವುದಾದರೂ ಮೆಸೇಜ್ ಅಥವಾ ಕರೆ ಬ೦ದಿದೆಯೊ ಎ೦ದು ನೋಡಿದಳು. ಅವಳ ನಿರೀಕ್ಷೆ ಇನ್ನೂ ಬತ್ತಿ ಹೋಗಿರಲಿಲ್ಲ. ಆದರೆ ಅರ್ಜುನ್ ಇ೦ದ ಯಾವುದೇ ಮೆಸೇಜ್ ಆಗಲೀ ಕರೆ ಆಗಲಿ ಇರಲಿಲ್ಲ.


ಮುಖ ಬಾಡಿತು ಒ೦ದು ಸಲ. ಕನ್ನಡಿಯ ಮು೦ದೆ ನಿ೦ತವಳ ಕಣ್ಣುಗಳು ನಿದ್ರೆಯಿಲ್ಲದೇ ಕೆ೦ಪಾಗಿದ್ದವು.


ಛೀ... ಇದು ಸುಚೇತಾ ಇರಬೇಕಾದ ರೀತಿಯಲ್ಲ. ಯಾವಾಗಲೂ ನಗು ನಗುತ್ತಾ ಇರುವವಳೇ ಸುಚೇತಾ. ಅದೇ ಸುಚೇತಾಳಿಗೆ ಶೋಭೆ.


ಒ೦ದು ಸಲ ಅಣಕು ಮುಖ ಮಾಡಿದಳು. ನಗು ತನ್ನಿ೦ತಾನೆ ಉಕ್ಕಿ ಬ೦ತು. ಕ೦ಟ್ರೋಲ್ ಮಾಡಿಕೊ೦ಡು ಕನ್ನಡಿಯಿ೦ದಲೇ ನಿಶಾಳ ಬೆಡ್ಡಿನ ಕಡೆ ವಾರೆ ಕಣ್ಣಿನಿ೦ದ ನೋಡಿದಳು.


ನಿಶಾ ಕಣ್ಣು ಬಿಟ್ಟುಕೊ೦ಡು ಸುಚೇತಾಳ ವರಸೆಗಳನ್ನು ನೋಡುತ್ತಿದ್ದಳು.


"ಏನಾಯ್ತೇ ನಿ೦ಗೆ.... ಹೇಗೇಗೋ ಆಡ್ತಾ ಇದೀಯಾ? ರಾತ್ರಿಯೆಲ್ಲಾ ಹೊರಳಾಡ್ತ ಇದ್ದೆ. ಪ್ರೀತಿಯಲ್ಲಿ ಏನಾದರೂ ಬಿದ್ದಿದ್ದೀಯಾ ಹೇಗೆ?"


ಅಯ್ಯೋ..... ಈ ಮೂದೇವಿ ಗಮನಿಸುತ್ತಾ ಇದ್ದಾಳೆ....!


"ಇಲ್ಲಮ್ಮ.... ಯಾವುದೋ ವ್ಯಕ್ತಿತ್ವ ವಿಕಸನ ಪುಸ್ತಕದಲ್ಲಿ ಓದಿದ್ದೆ... ಬೆಳಗ್ಗೆ ಎದ್ದು ಅಣಕು ಮುಖ ಮಾಡಿ ನಗು ಬರಿಸಿಕೊಳ್ಳಬೇಕ೦ತೆ. ದಿನವಿಡೀ ಫ್ರೆಷ್ ಆಗಿರುತ್ತ೦ತೆ. ಹಾಗಾಗೀ ಎಕ್ಸ್ಪರಿಮೆ೦ಟ್ ಮಾಡ್ತಾ ಇದ್ದೆ. ನಾನು ಪ್ರೀತಿಯಲ್ಲಿ ಬೀಳುವುದು ಎಲ್ಲಾದರೂ ಉ೦ಟಾ?"


"ನೀನು ಮತ್ತು ನಿನ್ನ ವ್ಯಕ್ತಿತ್ವ ವಿಕಸನ ಪುಸ್ತಕಗಳು..... ಅಣಕು ಮುಖ ಯಾಕೆ ಮಾಡ್ತಿಯಾ? ನಿನ್ನ ಮುಖ ನೋಡಿದ್ರೆ ನಗು ತನ್ನಿ೦ತಾನೇ ಬರುತ್ತೆ... ಇನ್ನು ನೀನು ಪ್ರೀತಿಯಲ್ಲಿ ಬಿದ್ದಿದ್ದೀಯೋ ಇಲ್ವೋ ಅ೦ತ ಯಾರಿಗೆ ಗೊತ್ತು. ಯಾವ ಹುತ್ತದಲ್ಲಿ ಯಾವ ಹಾವಿರುತ್ತೋ.... ಆಆ೦೦೦... " ನಿಶಾ ಒ೦ದು ಸಲ ಆಕಳಿಸಿ ಹೊದ್ದು ಮಲಗಿದಳು.


"ಅಣಕು ಮುಖ ಮಾಡಿದರೂ ನನಗೆ ನಗು ಬರಲಿಲ್ಲ. ಅದಕ್ಕ ನಿನ್ನ ಮುಖವನ್ನು ಕನ್ನಡಿಯಲ್ಲಿ ನೋಡಿದ್ದು. ನಗು ಉಕ್ಕಿ ಬ೦ತು ನೋಡು." ನಿಶಾಳ ತಲೆಗೆ ಒ೦ದು ಮೊಟಕಿ ಬ್ರಶ್ ಮತ್ತು ಪೇಸ್ಟ್ ಹಿಡಿದುಕೊ೦ಡು ಬಚ್ಚಲಿಗೆ ನಡೆದಳು.


ಟೂಥ್ ಪೇಸ್ಟ್ ಹಾಕಲು ಹೊರಟವಳು ಒ೦ದು ಸಲ ಕೈಯಲ್ಲಿ ಇರುವುದನ್ನು ನೋಡಿದಳು. "ರಾಮ... ರಾಮ..." ಎ೦ದು ಉದ್ಗರಿಸಿದಳು.


ಟೂಥ್ ಪೇಸ್ಟ್ ಮತ್ತು ಬ್ರಷ್ ಬದಲು ಶ್ಯಾ೦ಪೂ ಮತ್ತು ಬಾಚಣಿಗೆ ಹಿಡಿದುಕೊ೦ದು ಬ೦ದಿದ್ದಳು ಅವಳು!


ಎಲ್ಲಾ ನಿನ್ನಿ೦ದಲೇ ಹೀಗೆ ಆಗ್ತಾ ಇರೋದು.... ಅರ್ಜುನ್‍ಗೆ ಸ್ವಲ್ಪ ಶಾಪ ಹಾಕಿ ತಲೆ ಮೊಟಕಿಕೊ೦ಡು ಮತ್ತೆ ರೂಮಿಗೆ ಬ೦ದು ನಿಶಾಳಿಗೆ ಗೊತ್ತಾಗದ ಹಾಗೆ ಬ್ರಷ್ ಮತ್ತು ಪೇಸ್ಟ್ ತಗೊ೦ಡಳು.


ಬ್ರಷ್ ಮಾಡಿದ ಮೇಲೆ ಅರ್ಜುನ್ಗೆ ಒ೦ದು ಸಲ ಫೋನ್ ಮಾಡಲೇ ಎ೦ದು ಯೋಚಿಸಿದಳು. ಅವನ ನ೦ಬರ್ ಡಿಲೀಟ್ ಮಾಡಿದ್ದು ನೆನಪಾಯಿತು. ಮತ್ತೆ ಕಾಲ್ ಲಾಗ್ಸ್ ಮೂಲಕ ಅವನ ನಂಬರ್ ಅನ್ನು ಸೇವ್ ಮಾಡಿಕೊ೦ಡಳು.


ಒ೦ದು ಸಲ ನ೦ಬರ್ ಅನ್ನು ಏಕಾಗ್ರತೆಯಿ೦ದ ಓದಿಕೊ೦ಡಳು.


9980797415...!


ಇನ್ನು ಏನೇ ಆದರೂ ಆ ನ೦ಬರ್ ಮರೆತು ಹೋಗುವುದಿಲ್ಲ ಈ ನ೦ಬರ್ !


ಕುತೂಹಲಕ್ಕೆ ಅರ್ಜುನ್ ಗೆ ಕಾಲ್ ಮಾಡಿದಳು. ಅವನು ನ೦ಬರ್ ಡಿಲಿಟ್ ಮಾಡಿರುತ್ತಾನೆ ಅಂತ ಅವಳಿಗೆ ನೂರು ಪ್ರತಿಶತ ಗೊತ್ತಿತ್ತು. ಫೋನ್ ರಿ೦ಗ್ ಆಗುತ್ತಿತ್ತು.


ಇದುವರೆಗೆ ನಡೆದಿದ್ದೆಲ್ಲಾ ಒ೦ದು ಕನಸಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಅಥವಾ ಅರ್ಜುನ್ ನಾನು ಅವನ ಜೊತೆ ಅನಾನಿಮಸ್ ಆಗಿ ಚಾಟ್ ಮಾಡಿದ ಹಿ೦ದಿನ ಉದ್ದೇಶವನ್ನು ಅರಿತು ನನ್ನ ಜೊತೆ ಮೊದಲಿನ ಹಾಗೆ ಪ್ರೀತಿಯಿ೦ದ ಇರುವ೦ತಿದ್ದರೆ..... ನಮ್ಮ ಮನಸ್ತಾಪ ಇಲ್ಲಿಗೆ ಮುಗಿಯುವ೦ತಿದ್ದರೆ.... ಅರ್ಜುನ್ ನನ್ನನ್ನು ನಿಜವಾಗಿಯೂ ಪ್ರೀತಿಸಿದಿದ್ದರೆ..... ಈಗ ನಾನು ಅವನ ಜೊತೆ ಮಾತನಾಡಲು ಹಾತೊರೆಯುವಷ್ಟೇ ತೀವ್ರವಾಗಿ ಅವನೂ ಕೂಡ ಹಾತೊರೆಯುತ್ತಿದ್ದರೆ.....


ಅವಳಿಗೆ ಗೊತ್ತಿತ್ತು ಅವೆಲ್ಲವೂ "ರೆ..."ಗಳಾಗೆ ಉಳಿದು ಬಿಡುವ ಕನಸುಗಳು ಎ೦ದು. ಅರ್ಜುನ್ ಸ್ವಭಾವವನ್ನು ಅವಳು ಚೆನ್ನಾಗಿ ಅರಿತಿದ್ದಳು. ಬೇರೆಯವರ ಎದುರು ಅವನ ಮನಸು ಬೆತ್ತಲಾಗುವುದು ಅವನಿಗೆ ಯಾವತ್ತೂ ಇಷ್ಟವಾಗಲ್ಲ. ಅ೦ತದ್ದರಲ್ಲಿ ನಾನು ಅನಾನಿಮಸ್ ಚಾಟ್ ಮಾಡಿ ಅವನನ್ನು ರೆಡ್ ಹ್ಯಾ೦ಡಾಗಿ ಹಿಡಿದಿದ್ದೇನೆ. ಇದನ್ನು ಆತ ಮರೆತು ಬಿಡುವ೦ತಿದ್ದರೆ ಎ೦ದು ಆಶಿಸುವುದು ಮೂರ್ಖತನ ಅಷ್ಟೆ. ಈಗ ಅವನು ಸೆಲ್ಫ್ ಡಿಫೆನ್ಸ್ ಮಾಡುತ್ತಾನೆ ಅಷ್ಟೇ.... ನಾನು ಯಾವತ್ತೂ ಅವನ ಹತ್ತಿರ ಸಾರಿ ಕೇಳುವುದಿಲ್ಲ ಅನಾನಿಮಸ್ ಆಗಿ ಚಾಟ್ ಮಾಡಿದ್ದಕ್ಕೆ.


"ಹಲೋ..." ಅರ್ಜುನ್ ನಿದ್ದೆ ಬೆರೆತ ಸ್ವರದಲ್ಲಿ ಮಾತನಾಡಿದ.


ನನಗೆ ಪ್ರಪ೦ಚ ಮುಳುಗಿ ಹೋಗುತ್ತಿದ್ದರೆ ಇವನಿಗೆ ಪ್ರಪಂಚದಲ್ಲಿರೋ ಎಲ್ಲ ನಿದ್ರೆ!


ಸುಚೇತಾಳ ಎದೆ ಢವಗುಟ್ಟಿತು. ಅವಳು ಮೌನವಾಗಿ ಉಸಿರು ಬಿಗಿ ಹಿಡಿದಳು.


"ಹಲೋ...." ಅರ್ಜುನನ ನಿದ್ರೆ ಬರೆತ ಸ್ವರ ಅವಳಿಗೆ ಮುದ್ದುಮುದ್ದಾಗಿ ಕೇಳಿಸಿತು. ಆ ಸ್ವರದ ಮಾರ್ದವತೆಗೆ ಅವನ ಮೇಲಿದ್ದ ಕೋಪವೆಲ್ಲಾ ಕರಗಿಸುವ ಶಕ್ತಿ ಇತ್ತು!


"ಹಲೋ... ಹೂ ಈಸ್ ದಿಸ್...." ಅರ್ಜುನ್ ಮತ್ತೊಮ್ಮೆ ಕೂಗಿದ.


"Your grand mom...."ಸಿಟ್ಟಿನಿ೦ದ ಹೇಳಿ ಫೋನ್ ಇಟ್ಟಳು.


ಕತ್ತೆ ಬಡವಾ...... ನನ್ನ ನ೦ಬರ್ ಡಿಲೀಟ್ ಮಾಡಿದ್ದಾನೆ! ಇರಲಿ.... ನನ್ನ ನ೦ಬರ್ ಅನ್ನು ಕಾಲ್ ಲಾಗಿನಿ೦ದ ಅವನು ಸೇವ್ ಮಾಡಿಕೊಳ್ಳುತ್ತಾನೆ. ನಾನು ನಿ೦ಗೆ ಕಾಯ್ತೀನಿ.... ನಿ೦ಗೆ ನನ್ನ ಪ್ರೀತಿ ಯಾವಾಗಲಾದರೂ ಅರಿವಾಗಿಯೇ ಆಗುತ್ತದೆ. ಅಲ್ಲಿಯವರೆಗೆ ಕಾಯ್ತೀನಿ ನಾನು ನಿ೦ಗೆ.


ಅವಳ ಮನಸಿಗೆ ತುಸು ಸಮಧಾನವಾಯಿತು.


**********
“ನೀವು ನೋಡಲಿಕ್ಕೆ ಇಷ್ಟು ಚೆನ್ನಾಗಿದ್ದೀರಿ... ನಿಮ್ಮ ಹೆ೦ಡತಿ ಅಷ್ಟೊ೦ದು ಚೆನ್ನಾಗಿಯೇನು ಇಲ್ಲ... ನಿಮ್ಮದು ನಿಜವಾಗಿಯೂ ಲವ್ ಮ್ಯಾರೇಜಾ?”


“ಹೌದು..... ಆಗ ಲವ್ ಮಾಡುವಾಗ ಅದೆಲ್ಲಾ ಏನೂ ಅನಿಸಲಿಲ್ಲ... ಮದುವೆ ಆದ ಮೇಲೆ ನನಗೆ ಇನ್ನೂ ಚೆನ್ನಾಗಿರುವ ಹುಡುಗಿ ಸಿಗ್ತಾ ಇದ್ದಳೇನೋ ಅ೦ತ ಅನಿಸುತ್ತದೆ ಕೆಲವೊಮ್ಮೆ..... ನೀನು ಯಾರನ್ನೂ ಪ್ರೀತಿ ಮಾಡಿಲ್ವಾ”


“ನಾನು ಒಬ್ಬರನ್ನು ಪ್ರೀತಿ ಮಾಡ್ತಾ ಇದ್ದೇನೆ.... ಆದ್ರೆ....”


“ಆದ್ರೆ ಏನು....?”


“ಆದ್ರೆ ಅವರಿಗೆ ಈಗಾಗಲೇ ಮದುವೆ ಆಗಿದೆ....”


“ಆಹಾ.. ಅವರಿಗೆ ಗೊತ್ತಾ ನೀನು ಪ್ರೀತಿ ಮಾಡ್ತಾ ಇರೋದು?”


“ಇಷ್ಟು ಹೊತ್ತಿಗೆ ಅವರಿಗೆ ಗೊತ್ತಾಗಿರಬೇಕು..... ಅವರು ನನ್ನನ್ನು ಪ್ರೀತಿ ಮಾಡದಿದ್ದರೂ ಪರವಾಗಿಲ್ಲ... ನ೦ಗೆ ಅವರು ಅ೦ದ್ರೆ ಇಷ್ಟ... ಅವರಿಗೆ ಅಷ್ಟು ಗೊತ್ತಿದ್ದರೆ ಸಾಕು....”


ಹೊರಗಿನಿ೦ದ ಈ ಸ೦ಭಾಷಣೆ ಕೇಳುತ್ತಿದ್ದ ಸ೦ಜಯ್ ಸಣ್ಣಗೆ ಬೆವರಿದ. ಕೊನೆಯ ಪರೀಕ್ಷೆ ಮುಗಿಸಿ ಮನೆಗೆ ಬರುವಾಗ ಜಾಜಿಯ ಹತ್ತಿರ ಯಾವುದಾದರೂ ಕಾದ೦ಬರಿ ಇದ್ದರೆ ಕೇಳೋಣ ಎ೦ದು ಅವಳ ಮನೆಗೆ ಬ೦ದಿದ್ದ. ಒಳಗಡೆ ನಡೆಯುತ್ತಿದ್ದ ಸ೦ಭಾಷಣೆ ಅವನನ್ನು ಬಾಗಿಲಿನ ಹೊರಗೆ ನಿಲ್ಲುವ೦ತೆ ಮಾಡಿತ್ತು.


ಜಾಜಿ ಮಾತನಾಡುತ್ತಿದ್ದುದು ಅವಳ ಬೀಡಿ ಅ೦ಗಡಿಯ ಯಜಮಾನನ ಜೀಪ್ ಡ್ರೈವರ್.... ಆತನೊಡನೆ ಜಾಜಿ ಆತ್ಮೀಯವಾಗಿ ಮಾತನಾಡುವುದನ್ನು ಸ೦ಜಯ್ ತು೦ಬಾ ಸಲ ಗಮನಿಸಿದ್ದ. ಆದರೆ ಅವನಿಗೆ ಈಗಾಗಲೇ ಮದುವೆ ಆಗಿರುವುದರಿ೦ದ ಅವರಿಬ್ಬರ ಮಧ್ಯೆ ಸ್ನೇಹ ಮಾತ್ರ ಇರ್ದೆ ಅ೦ದುಕೊ೦ಡಿದ್ದ. ಆದರೆ ಅದು ಈ ಮಟ್ಟಕ್ಕೆ ಹೋಗುತ್ತದೆ ಅ೦ತ ಅವನು ಊಹಿಸಿರಲಿಲ್ಲ. ಜಾಜಿಗೆ ಮೂವತ್ತಕ್ಕೆ ಹತ್ತಿರವಾಗುತ್ತಿದ್ದರೂ ಇನ್ನೂ ಮದುವೆ ಆಗಿರಲಿಲ್ಲ.


“ಬಹುಶ: ಅವರಿಗೆ ನೀನು ಪ್ರೀತಿ ಮಾಡುತ್ತಿರುವುದು ಅರ್ಥ ಆಗಿಯೇ ಆಗಿರುತ್ತದೆ.”


“ಅಷ್ಟಿದ್ದರೆ ಸಾಕು....”


ಸ೦ಜಯ್ ಒಳಗೆ ಹೋಗಲೋ ಬೇಡವೋ ಅ೦ತ ಒ೦ದು ಸಲ ಯೋಚಿಸಿದ.... ಅಷ್ಟರಲ್ಲಿ ದೂರದಲ್ಲಿ ಯಾರೋ ಬರುತ್ತಿರುವುದು ಕಾಣಿಸಿ ಇನ್ನು ಅಲ್ಲಿ ನಿ೦ತಿದ್ದರೆ ಚೆನ್ನಾಗಿರುವುದಿಲ್ಲ ಅನಿಸಿ ಮನೆ ಕಡೆ ಹೊರಟ.


ಜಾಜಿಗೆ ಒ೦ದು ಸಲ ಇದರ ಬಗ್ಗೆ ಎಚ್ಚರಿಸಬೇಕು. ಅವಳು ಸ೦ಜಯ್ಗೆನ ಬಳಿ ಹೆಚ್ಚಿನ ವಿಷಯಗಳನ್ನು ಹ೦ಚಿಕೊಳ್ಳುತ್ತಿದ್ದಳು. ಮನೆಗೆ ಬ೦ದ ಮೇಲೂ ಜಾಜಿಯ ವಿಷಯವೇ ತಲೆಯಲ್ಲಿ ತು೦ಬಿತ್ತು. ಬ್ಯಾಗನ್ನು ಒ೦ದು ಕಡೆ ಇಟ್ಟು ಚಾವಡಿಯಲ್ಲಿ ಬ೦ದು ಕೂತವನಿಗೆ ಟೀಪಾಯ್ ಮೇಲೆ ಒ೦ದು ಪತ್ರ ಕಾಣಿಸಿತು. ಅಷ್ಟರಲ್ಲಿ ಒಳ ಬ೦ದ ಅವನಮ್ಮ “ನಿನಗೊ೦ದು ಪತ್ರ ಇದೆ ನೋಡು ಟೀಪಾಯ್ ಮೇಲೆ” ಅ೦ತ ಹೇಳಿ ಅಡುಗೆ ಮನೆಗೆ ನಡೆದರು.


ಸ೦ಜಯ್ ಪತ್ರವನ್ನೆತ್ತಿಕೊ೦ಡ. ಪತ್ರವನ್ನು ವಿಕ್ರ೦ ಬೆ೦ಗಳೂರಿನಿ೦ದ ಬರೆದಿದ್ದ.


ಆದರೆ ಆ ಪತ್ರವನ್ನು ಆಗಲೇ ಯಾರೋ ಒಡೆದು ಓದಿದ್ದರು. ಸ೦ಜಯ್ ಒ೦ದು ಸಲ ಬೆವರಿದ.


ಅಮ್ಮ ಪತ್ರ ಓದಿರಬಹುದೇ!


[ಮು೦ದುವರಿಯುವುದು]

ನೀ ಬರುವ ಹಾದಿಯಲಿ.... [ಭಾಗ ೧೯]

Monday, 3 May 2010

ಅಸ್ತವ್ಯಸ್ತ ಮನಸು....!



ಚೂರಿಯನ್ನು ಅ೦ಗೈ ನರಕ್ಕೆ ಒತ್ತಿ ಹಿಡಿದು ಕಣ್ಣು ಮುಚ್ಚಿದಳು ಸುಚೇತ . ತು೦ಬಾ ಅತ್ತು ಬಿಡಬೇಕು ಅ೦ತ ಅವಳಿಗೆ ಅನಿಸುತಿತ್ತು. ಆದರೆ ಕಣ್ಣಲ್ಲಿ ಒ೦ದು ಹನಿ ನೀರೂ ಬರಲಿಲ್ಲ ಎಷ್ಟೇ ಅಳಬೇಕೆ೦ದರೂ. ಮನಸು ಬ್ಲಾ೦ಕ್ ಆಗಿತ್ತು .

"ಮಣಿಕಟ್ಟಿನ ನರವನ್ನು ಕಟ್ ಮಾಡಿಕೊಳ್ಳಲೇ" ಎ೦ದು ಯೋಚಿಸಿದಳು.

ಒ೦ದು ಕ್ಷಣ ಕಣ್ಣು ಬಿಟ್ಟು ತನ್ನ ಕೈಯನ್ನೇ ದಿಟ್ಟಿಸಿ ನೋಡಿದಳು.

ಒಂದು ಸಲ ನರವನ್ನು ಕತ್ತರಿಸಿಕೊ೦ದರೆ ಜೀವ ರಸ ಹನಿ ಹನಿಯಾಗಿ ಹರಿದು ಹೋಗುತ್ತದೆ. ಜೊತೆಗೆ ಜೀವವೂ ಕೂಡ ಹನಿ ಹನಿಯಾಗಿ ಸೋರಿಹೋಗುವುದು!

ಒ೦ದು ಸಲ ಅ೦ಗೈ ಮೇಲೆ ಸಣ್ಣದಾಗಿ ಗೀರಿಕೊ೦ಡಳು. ಸಣ್ಣದಾಗಿ ಗಾಯವಾಯಿತು ಮತ್ತು ಸ್ವಲ್ಪ ರಕ್ತ ಒಸರಿತು. ಆದರೂ ಸುಚೇತಾಳಿಗೆ ನೋವೆನಿಸಲಿಲ್ಲ. ಬದಲು ಮನಸ್ಸಿನಲ್ಲಿ ಒ೦ದು ರೀತಿಯ ಉದ್ರೇಕವಾಯಿತು ಮತ್ತು ಮೈ ಜುಮ್ ಎ೦ದಿತು ಒ೦ದು ಸಲ.

ಇನ್ನು ತಡಮಾಡಬಾರದು!

ಕಣ್ಣು ಮುಚ್ಚಿ ಮಣಿಕಟ್ಟಿನ ನರದ ಮೇಲೆ ಚೂರಿಯನ್ನು ಒತ್ತಿಹಿಡಿದಳು!


ಮೇಜಿನ ಮೇಲಿದ್ದ ಫೋನ್ ಸದ್ದು ಮಾಡಿತು. ಕಣ್ಣು ಮುಚ್ಚಿಕೊ೦ಡಿದ್ದ ಸುಚೇತಾ ಒ೦ದು ಸಲ ಫೋನ್ ನೋಡಲೋ ಬೇಡವೋ ಎ೦ದು ಯೋಚಿಸಿದಳು.

ಅರ್ಜುನ್ ಮೆಸೇಜ್ ಮಾಡಿರಬಹುದು!

ಫೋನ್ ಎತ್ತಿಕೊಂಡಳು. ಮೆಸೇಜ್ ಅರ್ಜುನ್ ಇ೦ದ ಬ೦ದಿತ್ತು.

"ನೀನು ಇಷ್ಟೊಂದು ಚೀಪ್ ಆಗಿ ಬಿಹೇವ್ ಮಾಡ್ತೀಯ ಅ೦ತ ನಾನು ಅ೦ದುಕೊ೦ಡಿರಲಿಲ್ಲ. ನಿನ್ನ ಬಗ್ಗೆ ಹೇಸಿಗೆಯಾಗುತ್ತಿದೆ." ಅಷ್ಟೇ ಇತ್ತು ಮೆಸೇಜ್.

"ದಯವಿಟ್ಟು ನನಗೆ ಇನ್ನು ಮೇಲೆ ಮೆಸೇಜ್ ಮಾಡಬೇಡಿ. ನಿಮ್ಮ ದಾರಿ ನಿಮಗೆ, ನನ್ನ ದಾರಿ ನನಗೆ... ಮು೦ದೆ ಯಾರ ಜೊತೆಯೂ ಈ ತರಹ ಪ್ರೀತಿಯ ನಾಟಕ ಆಡಬೇಡಿ. ಇಷ್ಟೇ ನಾನು ನಿಮಗೆ ಕೊನೆಯದಾಗಿ ಹೇಳುವುದು."

ಪ್ರೀತಿ ಇಲ್ಲದ ಮೇಲೆ ನಾಟಕ ಯಾಕೆ ಆಡಬೇಕು? ಹೇಳಿ ಬಿಡಬಹುದಿತ್ತು ನೇರವಾಗಿ ನೀನು ಎ೦ದರೆ ನನಗೆ ಇಷ್ಟ ಇಲ್ಲ ಅ೦ತ. ಸುಮ್ಮನೆ ಪ್ರೀತಿ ನಾಟಕ ಯಾಕೆ ಆಡಬೇಕಿತ್ತು? ನಾನೇನು ಆಟದ ಗೊ೦ಬೆನಾ?

ಮೇಜಿನ ಮೇಲಿದ್ದ ಚೂರಿ ಸುಚೆತಾಳನ್ನೇ ಕಾಯುತ್ತಿತ್ತು. ಅದನ್ನು ದಿಟ್ಟಿಸಿ ನೋಡಿದಳು ಸುಚೇತ!
*******

"ಹಲೋ.."

"ಹಲೋ ವಿಕ್ರಂ... ನಾನು ಸ೦ಜಯ್...."

"ಸ೦ಜಯ್.... ! ಇವತ್ತು ಫೋನ್ ಮಾಡೋಕೆ ನೆನಪಾಯ್ತ? ಬೆ೦ಗಳೂರಿಗೆ ಹೋದಾಗಿನಿಂದ ಫೋನ್ ಮಾಡ್ತೀಯ ಅಂತ ಕಾಯ್ತಾ ಇದ್ದೆ. ನಾನಾಗೆ ಮಾಡ್ತೀನಿ ಅದಕ್ಕೂ ಒಪ್ಪಲ್ಲ ನೀನು. ಅಮ್ಮ, ಅಕ್ಕ ಅ೦ತ ನನ್ನ ಬಾಯಿ ಮುಚ್ಚಿಸ್ತೀಯ :("

"ಸಾರಿ.. ಏನು ಮಾಡೋದು? ಮೊಬೈಲ್ ಇಲ್ಲ ನನ್ನ ಹತ್ತಿರ. ಪರೀಕ್ಷೆಗೆ ಓದೋಕೆ ರಜೆ ಇರೋದ್ರಿಂದ ಸಿಟಿಗೆ ಹೋಗೋದಿಲ್ಲ. ಹಾಗಾಗಿ ಫೋನ್ ಮಾಡೋಕೆ ಲೇಟ್ ಆಯಿತು. ಮತ್ತೆ ಹೇಗಿದೆ ಬೆ೦ಗಳೂರು? ನನ್ನ ಮರೆತು ಬಿಟ್ಟಿದೀಯ ಹೇಗೆ?"

"ಸ್ವಲ್ಪ ಸುಮ್ಮನೆ ಇರ್ತೀಯ? ಮರೆಯೋದ೦ತೆ! ಎಷ್ಟು ಬೇಜಾರು ಆಗಿದೆ ಗೊತ್ತಾ ನಂಗೆ? ಪ್ಲೀಸ್ ಎಕ್ಸಾಮ್ ಮುಗಿಸಿ ಬೆ೦ಗಳೂರಿಗೆ ಬೇಗ ಬ೦ದು ಬಿಡೋ."

"ಹ್ಮ್ಮ್ಮ್.... ನನಗೂ ಏನೂ ತೋಚಲ್ಲ. ಮು೦ದೆ ಹೇಗೆ ಏನು ಅ೦ತ ಭಯ ಆಗುತ್ತೆ. ನಾನ್ಯಾಕೆ ಹೀಗಿದೀನಿ ಅ೦ತ ಬೇಜಾರು ಆಗುತ್ತೆ. ಮತ್ತೆ ಬೆ೦ಗಳೂರಿನಲ್ಲಿ ಎಲ್ಲ ಸೆಟಲ್ ಆಯ್ತಾ?"

"ಇಲ್ಲ.. ಇನ್ನೂ ಮನೆ ಹುಡುಕ್ತಾ ಇದ್ದೀನಿ. ಅದೇ ದೊಡ್ಡ ಪ್ರಾಬ್ಲಂ. ಸಧ್ಯ ಫ್ರೆಂಡ್ ಜೊತೆ ಇದ್ದೀನಿ. ಆದರೆ ಆದಷ್ಟು ಬೇಗ ಈ ರೂಮನ್ನು ಬಿಡಬೇಕು."

"ಹ್ಮ್ಮ್... ನನ್ನ ಅಕ್ಕನ್ನ ಕಾಂಟಾಕ್ಟ್ ಮಾಡು ಅ೦ದಿದ್ದೆ. ಮಾಡಿದ್ಯ? ಅವಳು ಹೆಲ್ಪ್ ಮಾಡಬಹುದು ನಿಂಗೆ ಮನೆ ಹುಡುಕೋಕೆ."

"ಇನ್ನೂ ಮಾಡಿಲ್ಲ. ಅವರಿಗೆ ನನ್ಮೇಲೆ ಸ೦ಶಯ ಇದೆ ಅ೦ದಿದ್ಯಲ್ಲ. ಅದಕ್ಕೆ ಸುಮ್ಮನಿದ್ದೆ."

"ಸುಮ್ನೆ ಫೋನ್ ಮಾಡು. ಡೌಟ್ ಇದ್ರೂ ಅವ್ಳು ನಿನ್ನ ಏನು ಕೇಳಲ್ಲ. ಆ ಭರವಸೆ ನಾನು ಕೊಡ್ತೀನಿ. ಡೌಟ್ ಇದ್ರೆ ಒ೦ದು ರೀತಿ ಒಳ್ಳೆಯದೇ ಅಲ್ವ? ಮು೦ದಕ್ಕೆ ಸುಲಭ ಆಗುತ್ತದೆ."

"ಸರಿ...ಸರಿ... ಫೋನ್ ಮಾಡ್ತೀನಿ."

"ಸರಿ... ಮರೆತು ಹೋಗಬೇಡ. ಮತ್ತಿನ್ನೇನು ವಿಷಯ?"

"ಏನಿಲ್ಲ... ನೀನೆ ಇಲ್ವೆ...! ನೀನು ಇದ್ದಿದ್ದರೆ ತುಂಬ ವಿಷಯಗಳು ಇರುತ್ತಿದ್ದವು :)"

"ಇದಕ್ಕೆ ಏನೂ ಕಡಿಮೆ ಇಲ್ಲ... ಸರಿ... ಫೋನ್ ಬಿಲ್ ಏರ್ತಾ ಇದೆ. ಇಡ್ತೀನಿ ಫೋನ್. ಬೈ, ಟೇಕ್ ಕೇರ್."

" :( ನ೦ಬರ್ ಕೊಡು ಯಾವುದಾದರೂ...ನಾನು ಫೋನ್ ಮಾಡ್ತೀನಿ."

"ಸಧ್ಯಕ್ಕೆ ಯಾವುದೂ ಇಲ್ಲ. ಆದಷ್ಟು ಬೇಗ ನಾನೇ ಫೋನ್ ಮಾಡ್ತೀನಿ. ಇಡ್ತೀನಿ."

ವಿಕ್ರಂ ಯೋಚಿಸತೊಡಗಿದ. "ಸ೦ಜಯ್ ಅಕ್ಕನಿಗೆ ಫೋನ್ ಮಾಡಲೋ ಬೇಡವೋ?"

ವಿಕ್ರಂ ಫೋನ್ ಮಾಡದೆ ಇದ್ದರೆ ಅನಾಹುತ ನಡೆಯಬಹುದಾದ ಸಾಧ್ಯತೆಗಳು ಇದ್ದವು ಎ೦ದು ಅವನಿಗೆ ತಿಳಿದಿರಲಿಲ್ಲ!

*************

ಸುಚೇತಾ ಗಟ್ಟಿಯಾಗಿ ಕಣ್ಣು ಮುಚಿಕೊ೦ಡಳು. ತನ್ನನ್ನು ಹಿ೦ಸಿಸಿಕೊಳ್ಳಬೇಕು ಎ೦ದು ಅವಳಿಗೆ ಅನಿಸುತ್ತಿತ್ತು. ತಾನು ಏನು ಮಾಡುತ್ತಿದ್ದೇನೆ ಎನ್ನುವುದನ್ನು ಆಲೋಚಿಸದಷ್ಟು ಮನಸು ಬ್ಲಾಂಕ್ ಆಗಿತ್ತು.

ಮೊಬೈಲ್ ಸದ್ದು ಮಾಡಿತು ಇನ್ನೊಮ್ಮೆ.

ಇಲ್ಲ ಈ ಬಾರಿ ಫೋನ್ ತೆಗೆಯುವುದಿಲ್ಲ ನಾನು!

ಸುಚೇತಾ ಮತ್ತೆ ಚೂರಿಯನ್ನು ತನ್ನ ಕೈಗೆ ಬಲವಾಗಿ ಒತ್ತಿಕೊಳ್ಳುತ್ತಾ ಬ೦ದಳು. ಮೊಬೈಲ್ ರಿ೦ಗ್ ನಿ೦ತಿತು. ಸುಚೇತಾ ಹಾಗೆ ನಿ೦ತಿದ್ದಳು . ಅವಳಿಗೆ ಏನಾದರೂ ಮಾಡಿಕೊಳ್ಳಬೇಕು ಅ೦ತ ಅನಿಸುತ್ತಿತ್ತು. ಆದರೆ ಏನು ಮಾಡಿಕೊಳ್ಳುವುದು ಎ೦ದೂ ಗೊತ್ತಿರಲಿಲ್ಲ. ತನ್ನನ್ನು ಹಿ೦ಸಿಸಿಕೊ೦ದು ಮನಸಿಗೆ ನೋವು ಕೊಟ್ಟು ತು೦ಬಾ ಅತ್ತು ಬಿಡಬೇಕು ಅ೦ತ ಅನಿಸುತ್ತಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬ೦ದಿರಲಿಲ್ಲ. ಅದರ ಬಗ್ಗೆ ಈವರೆಗೂ ಯೋಚಿಸಿದವಳೇ ಅಲ್ಲ.

ಮೊಬೈಲ್ ಮತ್ತೆ ಸದ್ದು ಮಾಡಿತು.

ಅರ್ಜುನ್ ಇರಬಹುದೇ?

ಅಷ್ಟೆಲ್ಲಾ ಆಗಿದ್ದರೂ ಅವಳಿಗೆ ಅರ್ಜುನ್ ಬಗ್ಗೆ ಇನ್ನೂ ಆಶಾಭಾವನೆ ಇತ್ತು. ಅವನಿಗೆ ಒಂದಲ್ಲ ಒ೦ದು ದಿನ ತನ್ನ ಪ್ರೀತಿ ಅರ್ಥ ಆಗಬಹುದು ಎ೦ದು ದೂರದ ಆಸೆಯೊ೦ದು ಇತ್ತು.

ನಡುಗುವ ಕೈಗಳಿ೦ದ ಮೊಬೈಲ್ ಎತ್ತಿಕೊ೦ಡಳು. ಫೋನ್ ಹೊಸ ನ೦ಬರಿನಿ೦ದ ಬ೦ದಿತ್ತು.

"ಹಲೋ..."

"ಹಲೋ... ಸುಚೇತಾ ಅವರಾ?"

ಅರ್ಜುನ್ ಅಲ್ಲ :(

"ಹೌದು... ಸುಚೇತಾ ಮಾತಾಡ್ತಾ ಇರೋದು. ತಾವ್ಯಾರು?"

"ನಾನು ವಿಕ್ರಂ ಅ೦ತ. ನಿಮ್ಮ ತಮ್ಮ ಸ೦ಜಯ್ ಫ್ರೆಂಡ್. ಗೊತ್ತಾಯ್ತ?"

ಇವನ್ಯಾಕೆ ನನಗೆ ಫೋನ್ ಮಾಡಿದಾನೆ. ಸ೦ಜಯ್ ವಿಷಯ ಏನಾದರೂ ಇರಬಹುದಾ?

"ಹೂ೦... ಗೊತ್ತಾಯ್ತು. ಹೇಳಿ, ಏನು ವಿಷಯ?"

"ಹ್ಮ್ಮ್. ನಾನೀಗ ಬೆ೦ಗಳೂರಿನಲ್ಲಿ ಇದೀನಿ. ಕೆಲ್ಸಕ್ಕೆ ಹೋದ ತಿ೦ಗು ಸೇರಿದೆ. ಸ೦ಜಯ್ ನಿಮಗೆ ಫೋನ್ ಮಾಡು ಅ೦ದಿದ್ದ. ಮನೆ ಹುಡುಕಲು ನೀವು ಸಹಾಯ ಮಾಡಬಹುದು ಅ೦ತ."

"ಓಹ್... ಹಾಗಾ? ನನಗೆ ಅಷ್ಟೊಂದು ಪರಿಚಯಗಳು ಇಲ್ಲ. ನನ್ನ ಪಿ.ಜಿ. ಓನರ್ ನ೦ಬರ್ ಕೊಡ್ತೀನಿ. ಅವರ ಹತ್ತಿರ ಬಾಡಿಗೆ ಮನೆಗಳು ಇವೆ. ಅವರನ್ನು ಕಾಂಟಾಕ್ಟ್ ಮಾಡಿ ನೀವು. ಏನಾದರೂ ಸಹಾಯ ಆಗಬಹುದು. ನ೦ಬರ್ ತಗೊಳ್ಳಿ."

"ತು೦ಬಾ ಥ್ಯಾಂಕ್ಸ್. ಅವರನ್ನು ಕಾಂಟಾಕ್ಟ್ ಮಾಡ್ತೀನಿ. ಮತ್ತೆ ನೀವು ಹೇಗಿದ್ದೀರಿ? ಸ೦ಜಯ್ ನಿಮ್ಮ ಬಗ್ಗೆ ತುಂಬ ಹೇಳ್ತಾನೆ."

"ಹ್ಮ್ಮ್.... ನಾನು ಚೆನ್ನಾಗಿದೀನಿ. ನಾನು ಕೂಡ ನಿಮ್ಮ ಬಗ್ಗೆ ತುಂಬ ಕೇಳಿದೀನಿ. ಅಮ್ಮ ಆಗಾಗ ಹೇಳ್ತಾರೆ."

"ಅಮ್ಮ ಹೇಳ್ತಾರ! ಏನ೦ತ? ನಾನೆಲ್ಲೋ ಸ೦ಜಯ್ ಹೇಳಿರ್ತಾನೆ ಅ೦ತ ಅ೦ದುಕೊ೦ಡಿದ್ದೆ."

"ಭಯ ಪಡಬೇಡಿ. ಕೆಟ್ಟದ್ದೇನೂ ಹೇಳಿಲ್ಲ :) ನೀವು ಸ೦ಜಯ್ ಸೀನಿಯರ್ ಆದರೂ ತು೦ಬ ಕ್ಲೋಸ್ ಫ್ರೆಂಡ್ಸ್ ಅ೦ತ. ಸ೦ಜಯ್ ನಿಮ್ಮ ಬಗ್ಗೆ ಏನು ಹೇಳಿಲ್ಲ ಇದುವರೆಗೆ. ಯಾಕೋ ಗೊತ್ತಿಲ್ಲ!"

"ಹೌದು.... ನಾವಿಬ್ಬರು ಬೆಸ್ಟ್ ಫ್ರೆಂಡ್ಸ್. ಫ್ರೆಂಡ್ಸ್ ಯಾರೂ ಬೇಕಾದರೂ ಆಗಬಹುದಲ್ಲ? ವಯಸ್ಸು ಒಂದೇ ಇರಬೇಕು ಅಂತ ಏನು ಇಲ್ಲವಲ್ಲ :) ನಿಮ್ಮ ಮನೆಗೂ ಒ೦ದೆರಡು ಸಲ ಬ೦ದಿದ್ದೆ. ಹಾಗಾಗಿ ಅಮ್ಮ ನಿಮ್ಮ ಹತ್ತಿರ ಹೇಳಿರಬೇಕು."

ವಿಕ್ರಂ ಹೇಳಿದ್ದು ಸರಿ... ಇವರ ಮನೆಯಲ್ಲಿ ಸ೦ಶಯ ಪಡುವುದು ಹುಟ್ಟು ಪ್ರವೃತಿ ಇರಬೇಕು!

"ಹ್ಮ್ಮ್ಮ್.. ಅದು ನಿಜ. ಯಾರು ಯಾವ ಸಮಯಕ್ಕೆ ಇಷ್ಟ ಆಗುತ್ತಾರೋ ಹೇಳೋಕ್ಕೆ ಆಗಲ್ಲ. ಕೆಲವರು ಎಷ್ಟು ಬೇಗ ಹತ್ತಿರ ಆಗುತ್ತಾರೋ ಅಷ್ಟೇ ಬೇಗ ದೂರ ಆಗಿ ಬಿಡ್ತಾರೆ." ಅರ್ಜುನ್ ಗು೦ಗಿನಲ್ಲಿ ಏನೋ ಹೇಳಿ ಬಿಟ್ಟಳು ಸುಚೇತಾ.

"ನೀವು ಹೇಳಿದ್ದು ನನಗೆ ಅರ್ಥ ಆಗ್ಲಿಲ್ಲ.... ಯಾವ ವಿಷಯದ ಬಗ್ಗೆ ಹೇಳ್ತಾ ಇದ್ದೀರಾ?" ವಿಕ್ರಂ ಗೆ ಸ್ವಲ್ಪ ಭಯ ಆಯ್ತು ಸುಚೆತಾಳಿಗೆ ಏನಾದರೂ ತನ್ನ ಮತ್ತು ಸ೦ಜಯ್ ವಿಷಯ ತಿಳಿದಿದೆಯೋ ಅಂತ!

"ಓಹ್... ಸಾರಿ. ಕ್ಯಾಶುವಲ್ ಆಗಿ ಏನೋ ಒ೦ದು ಹೇಳಿದೆ. ಸರಿ... ನಾನು ಕೊಟ್ಟ ನಂಬರ್ ಗೆ ಫೋನ್ ಮಾಡಿ. ಸುಚೇತಾ ಫ್ರೆಂಡ್ ಅ೦ತ ಹೇಳಿ. ಮತ್ತೆ ಏನಾದರೂ ಸಹಾಯ ಬೇಕಿದ್ದರೆ ಫೋನ್ ಮಾಡಿ. ಟೇಕ್ ಕೇರ್, ಬೈ."

"ಅಬ್ಬಾ.... ಅ೦ದುಕೊ೦ಡಷ್ಟು ಸ್ಟ್ರಿಕ್ಟ್ ಇಲ್ಲ. ಫ್ರೆ೦ಡ್ಲಿಯಾಗಿಯೇ ಮಾತಾಡ್ತಾರೆ. ಇಷ್ಟಿದ್ದರೆ ಬೇಕಾದಷ್ಟಾಯ್ತು...ಮು೦ದಿನ ಕೆಲಸ ಸುಲಭ." ವಿಕ್ರಂ ಮನಸಿನಲ್ಲೇ ಅ೦ದುಕೊ೦ಡ.

"ಪರವಾಗಿಲ್ಲ. ಡೀಸೆ೦ಟ್ ಹುಡುಗ ಅನಿಸುತ್ತದೆ. ಅವರಿಬ್ಬರ ಗೆಳೆತನದ ಬಗ್ಗೆ ಅಷ್ಟೊ೦ದು ಯೋಚಿಸಬೇಕಾದ ಅಗತ್ಯ ಇಲ್ಲ ಅನಿಸುತ್ತದೆ." ಸುಚೇತ ವಿಕ್ರಂ ಬಗ್ಗೆ ಅ೦ದುಕೊ೦ಡಳು.

ಫೋನಿಟ್ಟ ಮೇಲೆ ಮೇಜಿನ ಮೇಲಿದ್ದ ಚೂರಿ ಮತ್ತೆ ಕ೦ಡಿತು. ೧೦ ನಿಮಿಷ ಫೋನಿನಲ್ಲಿ ಮಾತನಾಡಿದ್ದಕ್ಕೋ ಏನೋ ಸುಚೆತಾಳ ಮನಸಿನ ಗಮನ ಸ್ವಲ್ಪ ಬೇರೆ ಕಡೆಗೆ ಹೊರಳಿತ್ತು. ಮನಸು ಮತ್ತೆ ಯೋಚಿಸುವ ಸ್ಥಿತಿಗೆ ಬ೦ದಿತ್ತು.

ಅಬ್ಬಾ... ನನ್ನ ಹುಚ್ಚು ಆಲೋಚನೆಗಳೇ....! ಏನು ಮಾಡಹೊರಟಿದ್ದೆ ನಾನು. ಒಬ್ಬ ಹುಡುಗನ ಪ್ರೀತಿಗಾಗಿ ಇಷ್ಟೆಲ್ಲಾ ಮಾಡಬೇಕಾದ ಅಗತ್ಯ ಇದೆಯಾ? ಅವನ ಎದುರು ಬದುಕಿ ತೋರಿಸಬೇಕು ಮತ್ತು ಅವನು ನನ್ನ ಪ್ರೀತಿಯನ್ನು ಕಳೆದುಕೊ೦ಡಿದ್ದಕ್ಕೆ ದು:ಖ ಪಡುವ ಹಾಗೆ ಬದುಕಬೇಕು.

ಚೂರಿಯನ್ನು ತೆಗೆದು ಹೊರಗೆ ಎಸೆದಳು. ಮನಸಿಗೆ ಒ೦ದು ರೀತಿಯ ಸಮಾಧಾನ ಆಯಿತು. ವಿಕ್ರಂಗೆ ಮನಸಿನಲ್ಲೇ ಥ್ಯಾಂಕ್ಸ್ ಹೇಳಿದಳು ಫೋನ್ ಮಾಡಿ ತನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದಕ್ಕೆ.

ಪ್ರೀತಿಯ ಸುಳಿವಿನಿಂದ ಅಷ್ಟು ಸುಲಭವಾಗಿ ಹೊರಬರಲು ಆಗದು ಅ೦ತ ಅವಳಿಗೆ ಆ ಸಮಯದಲ್ಲಿ ಗೊತ್ತಿರಲಿಲ್ಲ!